Wednesday, March 31, 2010

ಅನಂತ ವೇದನೆಯ ರಾಣಿ-೨

ರಾಣಿ:

‘ಕನ್ನಡಿ, ಏ ಕನ್ನಡಿ, ನಿಜ ಹೇಳು, ನಾನಿಷ್ಟು ಕೆಟ್ಟವಳೆ? ನಿಂದನೀಯಳೆ?’

ಇಂದಿನವರೆಗೆ ಕನ್ನಡೆಯೆದುರು ನನ್ನ ಪ್ರತಿಬಿಂಬವನ್ನು ಅದೆಷ್ಟೋ ಸಲ ಹೀಗೇ ಪ್ರಶ್ನಿಸಿದ್ದೇನೆ. ಬಹುಶಃ ಅದರ ಉತ್ತರವೂ ಭ್ರಮೆಯೇಯಿರಬೇಕು. ಹಾಗಾದರೆ ನಿಜ ಯಾವುದು? ದಶದಿಕ್ಕುಗಳಿಂದಲೂ ನಿನಾದಿಸುತ್ತಿರುವ ಈ ಚುಚ್ಚು ಘೋಷಣೆಗಳೇ?

‘ನರಿಯ ಈ ಮಾಯಾವಿ ರೂಪ ಭಸ್ಮವಾಗಲಿ’.

‘ಆಕೆ ಹಿಂದೆಯೂ ನಮ್ಮ ರಾಣಿಯಾಗಿರಲಿಲ್ಲ, ಮುಂದೆಯೂ ಆಗಲಾರಳು’.

‘ಏನು ನೋಡುತ್ತಿದ್ದೀರಿ? ಚಚ್ಚಿ ಹಾಕಿ ಆ ನಾಯಿಯನ್ನು, ಕಲ್ಲಿನಿಂದ ಚಚ್ಚಿರಿ’.

ಇಂತಹ ಘೋಷಣೆಗಳನ್ನು ನಿಲ್ಲಿಸಿ, ಹೇಗೆ ಸಹಿಸಲಿ ನಾನಿವುಗಳನ್ನು? ಯಾರಾದರೂ ನಿಲ್ಲಿಸಿ ಈ ಕ್ರೂರ ಆಟವನ್ನು, ನಾನು ಸ್ವಲ್ಪವೂ ಸಹಿಸಲಾರೆ, ನನ್ನ ಪ್ರಜೆಗಳು ನನ್ನನ್ನು ಕೊಲ್ಲಲು ಹೊರಟಿದ್ದಾರೆ, ಒಂದು ಕಾಲದಲ್ಲಿ ಜೈಕಾರ ಘೋಷಿಸಿರುವ ನಾಲಿಗೆಗಳು ಇಂದು ನನ್ನ ಚರಿತ್ರೆಯನ್ನು ಪ್ರಶ್ನಿಸುತ್ತಿವೆ. ಕೆಲವರ ಪ್ರಕಾರ ನಾನು ‘ಸಲಿಂಗ ಕಾಮಿ’, ಕೆಲವರ ಪ್ರಕಾರ ನಾನು ಸಮೂಹ..... ಕೆಲವರಂತೂ ನಾನು ನನ್ನ ಭೋಗದ ಅಗ್ನಿಕುಂಡಕ್ಕೆ ನನ್ನ ಮಗನನ್ನು ಬಲಿ ಕೊಟ್ಟಿದ್ದೇನೆ ಅನ್ನುತ್ತಿದ್ದಾರೆ. ನಾನು ಭ್ರಷ್ಟೆ, ಜನತೆಯ ಸಂಪತ್ತನ್ನ ವ್ಯಯ ಮಾಡಿದ್ದೇನೆ, ಬಡ ಜನತೆಯ ಬಗ್ಗೆ, ದೇಶದ ಬಗ್ಗೆ ನನಗ್ಯಾವ ಆತ್ಮೀಯತೆಯೂ ಇಲ್ಲ, ಫ಼್ರಾನ್ಸನ ಇಂದಿನ ಅಧಃಪತನಕ್ಕೆ ನಾನೇ ಕಾರಣ, ಅನ್ನುವ ಘೋಷಣೆಗಳ ಪ್ರತಿಗಳನ್ನು ತಯಾರಿಸಿ ನನ್ನ ಬಗ್ಗೆ ವಿಷಕಾರುವ ಸಲುವಾಗಿ ಜನರಲ್ಲಿಂದು ಹಂಚುತ್ತಿದ್ದಾರೆ. ವೃತ್ತಪತ್ರಿಕೆಯ ಕಾಲಂಗಳು ಕೂಡ ನನ್ನ ಬಗ್ಗೆ ಏನೆಲ್ಲ ಬರೆಯುತ್ತಿವೆ. ಯಾರೂ ಬಂದು ನನ್ನ ಮೇಲೆ ಕಲ್ಲೆಸೆಯಬಹುದಾಗಿದೆ! ನನಗೀಗ ನನ್ನವರೆನ್ನಬಹುದಾದವರು ಯಾರೂ ಇಲ್ಲ. ನಾನು ಒಂಟಿ.

‘ಅವಳಾದರೋ ಪಾಪಿಷ್ಟೆ, ಆದರೆ ಅವಳ ಮೇಲೆ ಕಲ್ಲೆಸೆಯುವ ಸಜ್ಜನರೆ ನಿಮ್ಮಲ್ಲಿ ಒಬ್ಬರಾದರೂ ಪುಣ್ಯವಂತರಿದ್ದೀರಾ?’ ಎಂದು ಕೇಳಲು ಜೀಜಸ್ ಕೂಡ ಬರಲಾರ. ನಿಜಕ್ಕೂ ನಾನಿಷ್ಟು ಪಾಪಿಯೆ? ನನ್ನ ತಪ್ಪೇನು? ನಾನು ಹೇಗೆ ನಡೆದುಕೊಳ್ಳಬೇಕಿತ್ತು? ಇಪ್ಪತ್ನಾಲ್ಕು ವರ್ಷಗಳ ಹಿಂದೆ ಇದೇ ಪ್ಯಾರಿಸ್‌ನ ಸುಶೋಭಿತ ರಸ್ತೆಗಳ ಮೇಲೆ ನನ್ನ ಮೆರವಣಿಗೆ ಎಷ್ಟು ಅದ್ದೂರಿಯಾಗಿ ಹೊರಟಿತ್ತು!

‘ರಾಜಾ-ರಾಣಿ ಚಿರಾಯುವಾಗಲಿ, ಫ಼್ರಾನ್ಸನ ಪವಿತ್ರ ಭೂಮಿಯ ಮೇಲೆ ರಾಣಿಗೆ ಸ್ವಾಗತ, ರಾಣಿಗೆ ಜಯವಾಗಲಿ’, ಎಂದು ಗಂಟಲು ಹರಿಯುವಂತೆ ಕಿರಿಚುತ್ತಿದ್ದರು. ಮದುವೆಯಾಗಿ ಗಂಡನ ಮನೆಗೆ ಬಂದ ದಿನ ಜನ ಅದೊಂದು ಶುಭ ಕಾರ್ಯವೆನ್ನುವಂತೆ ಆಚರಿಸಿದ್ದರು. ಹದಿನಾಲ್ಕು ವರ್ಷದ ಆಸ್ಟ್ರಿಯನ್ ರಾಜಕನ್ಯೆ ಫ಼್ರಾನ್ಸ ದೇಶದ ಸೊಸೆಯಾಗಿ ಪ್ಯಾರಿಸ್‌ನ ಹದ್ದು ದಾಟಿ ಒಳಬಂದಿದ್ದಳು. ಆದರೆ ಈ ಮದುವೆಗೆ ನನ್ನ ಒಪ್ಪಿಗೆಯಿತ್ತೆ? ಅಂತರ್‌ರಾಷ್ಟ್ರೀಯ ರಾಜಕೀಯ ಮೈದಾನದಲ್ಲಿ ಎ‍ರಡು ರಾಜಕೀಯ ಮನೆತನಗಳು ಆಡುತ್ತಿದ್ದ ಹೊಲಸು ರಾಜಕೀಯ ಆಟದಲ್ಲಿ ನಾನೊಂದು ಸೂತ್ರದ ಗೊಂಬೆಯಾದೆ. ದುರ್ದೈವದಿಂದ ನನ್ನ ಕತ್ತಿನಲ್ಲಿ ತೂಗುಬಿಟ್ಟಿದ್ದ ಸೂತ್ರ ನನ್ನ ತಾಯಿಯ ಕೈಯಲ್ಲಿತ್ತು.

‘ಅಮ್ಮ, ಯಾವುದು ಈ ಫ಼್ರಾನ್ಸ ದೇಶ? ಅಲ್ಲಿಯ ಯಾವುದೋ ಅಪರಿಚಿತನ ಜೊತೆ ಮದುವೆಯಾಗುವುದು ನನಗಿಷ್ಟವಿಲ್ಲ, ನಿನಗೆ ಗೊತ್ತಲ್ಲ ಅವನು, ನನ್ನೊಡನೆ ಆಟ ಆದಲಿಕ್ಕೆ ಬರುವವನು, ಒಳ್ಳೆಯ ಹಾಡು ಹೇಳುವವನು, ಬೀಥೋಪೇನ್ ಕೂಡ ನುಡಿಸುತ್ತಾನಲ್ಲ’ ಎಂದು ಹೇಳುತ್ತಿದ್ದಂತೆ ಅಮ್ಮ ನನ್ನನ್ನು ತಡೆದು,

‘ಆ ಭಿಕಾರಿ ಸಂಗೀತಕಾರನ ಜೊತೆ ಮದುವೆಯಾಗಿ ಬಾಳನ್ನು ಹಾಳು ಮಾಡ್ಕೋಬೇಕು ಅಂದುಕೊಂಡಿದ್ದೀಯಾ? ನಾನು ಮಾಡುವುದು ನಿನ್ನ ಒಳ್ಳೆಯದಕ್ಕಾಗಿಯೆ ನೆನಪಿಟ್ಟುಕೋ’ ಅಂದು ನನ್ನ ಬಾಯಿ ಮುಚ್ಚಿಸಿದ್ದರು.

ಈ ಮದುವೆಯಿಂದ ಯಾರಿಗೆ ಒಳ್ಳೆಯದಾಯಿತು? ಅನ್ನುವುದು ಆ ದೇವರೇ ಬಲ್ಲ. ನನ್ನ ಜೀವನದ ಮೊದಲು ಹದಿನಾಲ್ಕು ವರ್ಷ ನಾನು ಅಮ್ಮನನ್ನು ಅವಲಂಬಿಸಿದ್ದೆ. ಅವಳ ವ್ಯಕ್ತಿತ್ವದಲ್ಲಿ ಮಮತೆಗಿಂತ ಭೀತಿಯನ್ನೇ ಹೆಚ್ಚು ಕಂಡೆ. ಆಸ್ಟ್ರೀಯಾದ ರಾಜ್ಯವನಾಳುವ, ಅನೇಕ ಋತುಮಾನಗಳನ್ನು ಕಂಡಿರುವ ಒಬ್ಬ ಮುತ್ಸದ್ದಿ ಮಹಿಳೆ ತಪ್ಪು ಮಾಡುವಳೆ? ಅಂದುಕೊಂಡಿದ್ದೇ ತಪ್ಪಾಯಿತು, ಆಕೆ ತಪ್ಪಿದ್ದಳು ಪರಂಪರಾಗತವಾಗಿ ವೈರತ್ವವನ್ನು ಸಾಧಿಸಿಕೊಂಡು ಬಂದಿದ್ದ ಫ಼್ರಾನ್ಸ್‍ಗೆ ತನ್ನ ಮಗಳನ್ನು ಕೊಟ್ಟು ಅಲ್ಲಿ ತಾನು ಅತಿಕ್ರಮಣ ಮಾಡಬಹುದು ಎಂದಾಕೆ ಅಂದುಕೊಂಡಿದ್ದೇ ತಪ್ಪಾಯಿತು. ರಾಜಕೀವೆಂಬ ಪಗಡೆಯಾಟದಲ್ಲಿ ಆಕೆಗೆ ಬೇಕಾದ ದಾಳಗಳು ಬೀಳದೆ ಆಕೆ ಸೋತಳು. ಆಕೆಯಲ್ಲಿ ಧೋರಣೆಯಿತ್ತೇ ಹೊರತು ಮಮತೆಯಿರಲಿಲ್ಲ. ಆಕೆಗೆ ತನ್ನ ಸಿಂಹಾಸನದ ಚಿಂತೆಯಿತ್ತೇ ಹೊರತು ಮಗಳದ್ದಲ್ಲ. ರಾಜ್ಯದ ಚಿಂತೆಯಿತ್ತೇ ವಿನಹ ಮಗಳ ಅಭ್ಯುದಯದ ಚಿಂತೆಯಿರಲಿಲ್ಲ.

೨ನೆಯ ನವಂಬರ್ ೧೭೫೫ ರ ಆಲ್ ಸೋಲ್ಸ ಡೆ ಯ ಪವಿತ್ರ ದಿನದಂದು ವ್ಹಿಯೆನ್ನಾದಲ್ಲಿ ನಾನು ಜನಿಸಿದೆ. ತಾಯಿಯ ಹಾಲನ್ನಷ್ಟೆಯಲ್ಲ ಆಕೆ ಕೊಟ್ಟಿದ್ದನ್ನೆಲ್ಲವನ್ನೂ ವಿಶ್ವಾಸದಿಂದ ಸ್ವೀಕರಿಸಿದೆ. ನಾನು ನನ್ನ ತಾಯಿಯ ಹಾಗೆ ಬುದ್ಧಿವಂತಳಲ್ಲ, ಚಾಣಾಕ್ಷಳಂತೂ ಅಲ್ಲವೆ ಅಲ್ಲ. ಶಿಕ್ಷಣ ಹಾಗೂ ರಾಜಕೀಯದ ಬಗ್ಗೆ ನನಗೆ ಹೇಸಿಗೆಯಿತ್ತು. ಬಂಗಾರದ ಇಟ್ಟಿಗೆಗಳಿಗಿಂತ ನಿರ್ಮಲ, ಶುದ್ಧ ನೀಲಾಕಾಶವೇ ನನಗೆ ಪ್ರೀಯವಾಗಿತ್ತು. ಗಣಿತಕ್ಕಿಂತ ಸಂಗೀತದ ಜೊತೆ ನನಗೆ ಹತ್ತಿರದ ಸಂಭಂದ. ನನ್ನ ಕಿವಿಯಲ್ಲಿ, ಮನಸ್ಸಿನಲ್ಲಿ ಯಾವಾಗಲೂ ಮೋಝಾರ್ಥನ ಹಾಡು ಗುಂಯಗುಡುತ್ತಿರುತ್ತಿತ್ತು. ಶೋನ್ ಭ್ರೂನ್‌ನ ಅರಮನೆಯ ಗೋಡೆಗಳು ನಮ್ಮ ಯುಗಳ ಗೀತೆಗಳಿಗೆ ಸಾಕ್ಷಿಯಾಗಿವೆ. ಒಂದು ದಿನ ಮೋಝಾರ್ಥ ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡು ಮುತ್ತಿಡುತ್ತ,

‘ನೋಡುತ್ತಿರು, ಒಂದು ದಿನ ನಾನು ಜಗತ್ತಿನ ಸರ್ವೋತ್ಕೃಷ್ಟ ಸಂಗೀತಗಾರನಾಗಿ ನಿನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತೇನೆ’ ಅಂದಿದ್ದ.

ಅವನು ತನ್ನ ಒದ್ದೆ ತುಟಿಗಳಿಂದ ಅಚ್ಚೊತ್ತಿದ್ದ ಮುತ್ತನ್ನು ನಾನಿನ್ನೂ ಜೋಪಾನವಾಗಿಟ್ಟಿದ್ದೇನೆ. ನಾನು ತುಂಬ ಮನಸ್ಸಿಟ್ಟು ಸಂಗೀತ ಕಲಿಯುತ್ತಿದ್ದೆ, ನನಗದು ಇಷ್ಟವಾಗುತ್ತಿತ್ತು, ಮೋಝಾರ್ಥ ಇಷ್ಟವಾಗುತ್ತಿದ್ದ, ಆತನ ಒದ್ದೆ ಚುಂಬನಗಳು ಇಷ್ಟವಾಗುತ್ತಿದ್ದವು.

ಆದರೆ ಒಂದು ಕೆಟ್ಟ ಘಳಿಗೆಯಲ್ಲಿ ಫ಼್ರಾನ್ಸಿನ ಸತ್ತಾಧೀಶರು ನನ್ನನ್ನು ನೋಡಿ ಅವರ ಹದಿನೈದು ವರ್ಷದ ಮೊಮ್ಮಗ ಲೂಯಿಗಾಗಿ ನನ್ನ ಕೈ ಬೇಡಿದರು. ಅಮ್ಮನೇ ಮುಂದಾಳತ್ವ ವಹಿಸಿ ಈ ಸಂಭಂದ ಕುದುರಿಸಿರಬೇಕು ಅನ್ನುವ ಕೆಟ್ಟ ಅನುಮಾನ ನನಗೆ. ಸಂಪೂರ್ಣ ಜಗತ್ತನ್ನೇ ತನ್ನ ಕಿರುಬೆರಳ ಮೇಲೆ ಕುಣಿಸುತ್ತಿದ್ದ ಅಮ್ಮನಿಗೆ ಲೂಯಿ ಮೂರ್ಖ ಹಾಗೂ ಅಸಂಜಸ ಅನ್ನುವುದು ಗೊತ್ತಿರಲಿಲ್ಲವೆ? ಗೊತ್ತಿರಲಿಕ್ಕೂ ಸಾಕು, ಏಕೆಂದರೆ ರಾಜನೀತಿ ಕೇವಲ ವ್ಯವಹಾರವನ್ನ ಮಾತ್ರ ಪರಿಗಣಿಸುತ್ತದೆ, ಸಂಭಂದವನ್ನಲ್ಲ. ಅದರದೇ ಅಂಗವಾಗಿ ನನ್ನ ಟ್ರೇನಿಂಗ್ ಪ್ರಾಂರಂಭವಾಯಿತು. ಫ಼್ರಾನ್ಸಿನ ರಾಜಮನೆತನದವರ ಜೊತೆ ಹೊಂದಿಕೊಳ್ಳಬೇಕಾದ ರೀತಿ, ಅಲ್ಲಿಯ ರೀತಿ-ನೀತಿ, ಸಂಸ್ಕೃತಿ, ಭೂಗೋಳ, ಉಚ್ಚರಿಸಲೂ ಕಠಿಣವಾದಂತಹ ಫ಼್ರೆಂಚ್ ಭಾಷೆ. ಒಂದೇ ಎರಡೆ. ಮದುವೆಯ ಎರಡು ತಿಂಗಳು ಮುಂಚಿನಿಂದಲೇ ಅಮ್ಮ ನನ್ನ ಕೋಣೆಯಲ್ಲಿ ನನ್ನೊಡನೆ ಮಲಗಲಾರಂಭಿಸಿದಳು. ನನ್ನ ಕಣ್ಣು ರೆಪ್ಪೆಗಳು ಮುಚ್ಚಲು ತವಕಿಸುತ್ತಿದ್ದ ಕಾಲದಲ್ಲಿ ನಾನು ಅಮ್ಮನಿಂದ ಬೌದ್ಧಿಕ ಪಾಠ ಕಲಿಯಬೇಕಾಗುತ್ತಿತ್ತು. ಸ್ತ್ರೀ ಪುರುಷರ ಸಂಭಂದದ ಬಗ್ಗೆ ಅಮ್ಮನಿಂದಲೇ ವಿಸ್ತಾರವಾಗಿ ಗೊತ್ತಾದದ್ದು. ಎಲ್ಲವೂ ಯೋಜನಾಬದ್ಧವಾಗಿ ನಡೆಯುತ್ತಿದ್ದರೂ ಅಮ್ಮ ಸದಾಕಾಲ ಯಾವುದೋ ಚಿಂತೆಯಲ್ಲಿರುವಂತೆ ತೋರುತ್ತಿತ್ತು. ಯಾವಾಗಲೋ ಮಧ್ಯರಾತ್ರಿ ನನ್ನ ಕೂದಲುಗಳಲ್ಲಿ ಆಡುತ್ತಿದ್ದ ಅಮ್ಮನ ಸ್ಪರ್ಷದಿಂದ ಎಚ್ಚರವಾಗುತ್ತಿತ್ತು. ತನ್ನ ಅಸಂಜಸ, ಸಾಮಾನ್ಯ ಬುದ್ಧಿಯ ಮಗಳನ್ನು ರಾಜಮನೆತನದ ಚದುರಂಗಪಟದ ಪೇದೆಯಾಗಿ ಬಳಸುತ್ತಿದ್ದೇನೆ ಅನ್ನುವ ಅರಿವು ಅವಳನ್ನು ಕಾಡುತ್ತಿತ್ತೆ?

ಮದುವೆಯ ಮೊದಲ ರಾತ್ರಿ ನಾವು ಬಹಳ ದಣಿದಿದ್ದರಿಂದ ನಿದ್ರಾದೇವಿ ತಟ್ಟನೆ ಒಲಿದಿದ್ದಳು. ಬಹುಶಃ ಫ಼್ರಾನ್ಸನ ನೆಲದ ಮೇಲೆ ಅದೇ ನನ್ನ ಮೊದಲ ಹಾಗೂ ಕೊನೆಯ ಶಾಂತ ನಿದ್ರೆ. ಆದರೆ ಎರಡನೆಯ ರಾತ್ರಿಯೂ ಏನೂ ನಡೆಯಲಿಲ್ಲ, ಮೂರನೆಯ, ನಾಲ್ಕನೆಯ ರಾತ್ರಿಯೂ ಇಲ್ಲ. ಹಾಗೂ ಮುಂದಿನ ಸತತ ಏಳು ವರ್ಷಗಳವರೆಗೆ ಏನೂ ನಡೆಯಲಿಲ್ಲ.

ನನ್ನ ಪತಿ ಅನಿಸಿಕೊಂಡ ಲೂಯಿ, ಫ಼್ರಾನ್ಸನ ಭಾವಿ ರಾಜ, ಸುಖ ಕೊಡುವುದಕ್ಕೂ ತೆಗೆದುಕೊಳ್ಳುವುದಕ್ಕೂ ಅಸಮರ್ಥನಾಗಿದ್ದ. ಮೊದಮೊದಲು ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದವ ವಿಫ಼ಲನಾದಾಗ ಸುಸ್ತಾಗಿ ನಿದ್ದೆಹೋಗುತ್ತಿದ್ದ. ಘಟಿಸದೇ ಹೋದ ಘಟನೆಗಾಗಿ ಸಿಟ್ಟು, ಪಶ್ಚಾತ್ತಾಪ, ನಾಚಿಕೆ ಯಾವುದೂ ಅವನಲ್ಲಿರಲಿಲ್ಲ. ಚಿಕ್ಕ ಮಗುವೊಂದು ಗಟ್ಟಿ ಮುಚ್ಚಳ ಹಾಕಿದ ಡಬ್ಬಿಯೊಡನೆ ಆಟವಾಡಿ ಕಡೆಗೆ ಮುಚ್ಚಳ ತೆರೆಯಲು ಅಸಮರ್ಥನಾಗಿ ಬೇಸತ್ತು ಬಿಸಾಡಿಬಿಡುವ ಹಾಗೆ ಅವನ ವರ್ತನೆ. ಆದರೆ ಲೂಯಿ ಚಿಕ್ಕ ಮಗುವೂ ಅಲ್ಲ ಹಾಗೂ ನಾನು ಗಟ್ಟಿ ಮುಚ್ಚಳದ ಡಬ್ಬಿಯೂ ಅಲ್ಲ. ಸುಂದರ ಶರೀರದ, ಕನಸುಗಣ್ಣಿನ ಮೃದು ಮನಸ್ಸಿನ ಹದಿನಾಲ್ಕು ವರ್ಷದ ಬಾಲೆ ನಾನು. ಮರುದಿನ ಡೈರಿ ಬರೆಯುವಾಗ ಲೂಯಿ ಭಾವನಾರಹಿತನಾಗಿ ಖಾಲಿ ಪುಟದ ಮೇಲೆ ‘ಅಸಫ಼ಲತೆ’ ಎಂದಷ್ಟೆ ಬರೆಯುತ್ತಿದ್ದ, ಅವನ ಪುಟ ಅದೊಂದೇ ಶಬ್ದದಿಂದ ತುಂಬಿಬಿಡುತ್ತಿತ್ತು. ಆದರೆ ಆ ಶಬ್ದ ಮಾತ್ರ ನನ್ನ ಜೀವನಕ್ಕೆ ಬಂಜೆತನದ ಲೇಬಲ್ ಅಂಟಿಸಿತು. ಮದುವೆಯಾಗಿ ತಿಂಗಳುಗಳು ಕಳೆದರೂ ಮಕ್ಕಳಾಗುವ ಸೂಚನೆ ಕಾಣದ್ದರಿಂದ ಎಲ್ಲರೂ ಅಸ್ವಸ್ಥರಾಗಿದ್ದರು. ನನ್ನ ಲೈಂಗಿಕ ಆಚರಣೆ ಹೇಗಿರಬೇಕು? ಲೂಯಿಯನ್ನು ಮೋಹಿಸಲು ನಾನೇನು ಮಾಡಬೇಕು? ಅನ್ನುವ ಮೌಲಿಕ ಸೂಚನೆಗಳ ಪತ್ರಗಳು ಅಮ್ಮನಿಂದ ಬರಲಾರಂಭಿಸಿದ್ದವು. ಇಲ್ಲಿ ಅತ್ತೆ ಮನೆಯ ಸ್ತ್ರೀಯರು ಗೊತ್ತಿರುವ ವ್ರತಗಳನ್ನೆಲ್ಲ ನನ್ನ ಮೇಲೆ ಹೇರುತ್ತಿದ್ದರು. ಇಷ್ಟೆಲ್ಲ ನಡೆಯುವಾಗ ನನ್ನಲ್ಲಿ ಯಾವ ದೋಷವೂ ಇರಲಾರದು ಅನ್ನುವ ವಿಚಾರ ಯಾರ ಮನಸ್ಸಿನಲ್ಲೂ ಬರಲಿಲ್ಲ. ಇಲ್ಲಿ ಮೊದಲೇ ಬಾಯಿಗೆ ಬೀಗ ಜಡಿದಂತಿದ್ದ ಲೂಯಿ ಹೆಚ್ಚು ಮೌನವಾಗುತ್ತ ಹೋದ. ಹುಟ್ಟಿನಿಂದಲೇಯಿದ್ದ ಆಲಸ್ಯ ಈಗ ಅವನ ಮೇಲೆ ಆಧಿಪತ್ಯ ನಡೆಸುತ್ತಿತ್ತು. ಸಾರ್ವಜನಿಕ ಸ್ಥಳಗಳಿಗೆ ಭೇಟಿಕೊಡುವುದನ್ನು ನಿಲ್ಲಿಸಿದ ಆತ ದಿನದ ಹೆಚ್ಚು ಸಮಯವನ್ನು ಬೇಟೆ ವ್ಯಾಯಾಮ ಹಾಗೂ ಆಡುವುದರಲ್ಲಿ ಕಳೆಯತೊಡಗಿದ. ಇದೆಲ್ಲದರಿಂದ ತನ್ನ ಪೌರುಷ ಮರಳಿ ಬರುತ್ತದೆ ಅಂದುಕೊಂಡನೋ ಏನೊ. ಆದರೆ ಲೂಯಿ ಒಬ್ಬ ಸಂಪೂರ್ಣ ಪುರುಷನಾಗಿದ್ದ ಅನ್ನುವುದನ್ನು ಇಷ್ಟು ತಿಂಗಳ ಸಾಮಿಪ್ಯದಿಂದ ನಾನು ಬಲ್ಲವಳಾಗಿದ್ದೆ. ಹೀಗಿದ್ದರೂ ಕಠಿಣ ಪ್ರಸಂಗಕ್ಕೆ ಪರಿಹಾರ? ಕಡೆಗೆ ನಾನೇ ಮುಂದುವರೆದು ರಾಜನಿಗೆ ಸುಂಥಾ ಮಾಡಿಸುವುದು ಅನ್ನುವ ಸೂಚನೆ ಕೊಟ್ಟು ಲೂಯಿಯ ಮನ್ನಣೆಯನ್ನೂ ಪಡೆದೆ, ಆದರೆ ಈ ವಾರ್ತೆ ಕಾಡ್ಗಿಚ್ಚಿನಂತೆ ಹರಡಿ ಜನರ ಕಣ್ಣರಳಿಸಿತು. ಹೆಣ್ಣಾಗಿ ಹುಟ್ಟಿ ಇಂತಹ ಮಾತನ್ನು ಇಷ್ಟು ಸುಲಭವಾಗಿ ಹೇಗೆ ಹೇಳಬಲ್ಲಳು? ಅನ್ನುವುದೇ ಅವರ ಪ್ರಶ್ನೆ. ಇದು ನನ್ನ ಜೀವನದ ಪ್ರಶ್ನೆ, ಅಲ್ಲದೆ ಹೆಂಡತಿಯಾಗಿ ಗಂಡನನ್ನು ನಾನಲ್ಲದೆ ಇನ್ಯಾರು ಹತ್ತಿರದಿಂದ ಬಲ್ಲವರಾಗುತ್ತಾರೆ? ಇದನ್ನೆಲ್ಲ ಅರ್ಥಮಾಡಿಕೊಳ್ಳದ ಜನ ನನ್ನನ್ನು ‘ಮೇನಿಯಾಕ್’ ಅಂದರು. ಎಂತಹ ವಿರೋಧಾಭಾಸ! ಭವಿಷ್ಯದಲ್ಲಿ ಹಕ್ಕು ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಫ಼್ರಾನ್ಸಿನ ಜನತೆ ಹೆಂಡತಿಯಾಗಿ ನಾನು ಪಡೆಯಬೇಕಿದ್ದ ಹಕ್ಕಿಗೆ ‘ಮೇನಿಯಾಕ್’ ಅಂದರು.

(ಮುಂದುವರೆಯುವುದು).

Sunday, March 21, 2010

ಅನಂತ ವೇದನೆಯ ರಾಣಿ-1

ಅನಂತ ವೇದನೆಯ ರಾಣಿ-1

ಇದು ಫ಼್ರಾಂನ್ಸ್(france) ನ ರಾಣಿ ಮಾರಿ ಆಂತುಆನೇತ್ ಳ ಮನಕಲುಕುವ ಕಥೆ. ಅನೇಕರಿಗೆ ಗೊತ್ತಿರುವ ಕಥೆಯಾದರೂ ಮರಾಠಿಯ ಉದಯೋನ್ಮುಖ ಕಥೆಗಾರರಾದ ಶ್ರೀ.ಅಶುತೋಷ.ಉಕಿಡವೆ ಅವರು ರಾಣಿಯ ಕಥೆಯನ್ನು ಮೂವರು ವಿಭಿನ್ನ ಮಹಿಳೆಯರ ದೃಷ್ಟಿಕೋನದಿಂದ ಚಿತ್ರಿಸಿದ್ದಾರೆ. ನಾನು ಈ ಕಥೆಯನ್ನು ಕನ್ನಡಕ್ಕೆ ಅನುವಾದಿಸಿ ನಿಮ್ಮೆದುರು ಇಡುತ್ತಿದ್ದೇನೆ, ಇದೊಂದು ನೀಳ್ಗಥೆ ಹಾಗೂ ಮೂರ್ನಾಲ್ಕು ಸಂಪಾದಕರು ರಿಜೆಕ್ಟ ಮಾಡಿರುವಂತಹ ಕಥೆ ಹಾಗಾಗಿ ಯಾವುದೇ ಪತ್ರಿಕೆಯಲ್ಲೋ ಸಾಪ್ತಾಹಿಕದಲ್ಲೋ ಅಚ್ಚಾಗಲಿಲ್ಲ.

ಮೂಲ ಮರಾಠಿ: ಅಶುತೋಷ್.ಉಕಿಡವೆ
ಕನ್ನಡಕ್ಕೆ:ಅಕ್ಷತಾ.ದೇಶಪಾಂಡೆ.


ಸುಚಿತ್ರ:
ಚಾರ್ಲ್ಸ ಬಿಟ್ಟು ಸುಮಾರು ಒಂದು ಘಂಟೆಯಾದರೂ ಸ್ವಲ್ಪ ಸಮಯದ ಹಿಂದೆ ನೋಡಿದ ಆ ದೃಷ್ಯ ಮನಃಪಟಲದಿಂದ ಇನ್ನೂ ದೂರ ಸರಿಯಲೊಲ್ಲದು. ಏರ‍್‌ಪೋರ್ಟಿನಿಂದ ಯುನಿವರ್ಸಿಟಿಗೆ ಕರೆದೊಯ್ಯಲು ಬಂದ ವಾಹನ ಹತ್ತಲು ಮುಖ್ಯ ರಸ್ತೆ ದಾಟಬೇಕಿತ್ತು, ಇನ್ನೇನು ವಾಹನ ಹತ್ತ ಬೇಕು ಅನ್ನುವಷ್ಟರಲ್ಲಿ ಸಿಗ್ನಲ್ ಕೆಂಪು ನಿಶಾನೆ ತೋರಿಸಿದ್ದರಿಂದ ಸಾಮಾನು ಹೊರುತ್ತ ಅಲ್ಲೇ ನಿಂತಿದ್ದಾಗ ಸಿಕ್ಕ ಸಮಯವನ್ನು ಉಪಯೋಗಿಸಿಕೊಳ್ಳುತ್ತ ಯುವ ಜೋಡಿಯೊಂದು ಒಬ್ಬರನ್ನೊಬ್ಬರು ತಬ್ಬಿಕೊಂಡಿತು. ಅನೇಕ ವರ್ಷಗಳಿಂದ ನಾನು ಫ಼್ರೆಂಚ್ ಸಂಸ್ಕೃತಿಯ ಅಭ್ಯಾಸ ನಡೆಸಿದ್ದರೂ, ಇಲ್ಲಿಯ ಕಲ್ಚರಲ್ ಸೆಂಟರ್‌ನಲ್ಲಿ ಪಾಠ ಹೇಳಿ ಕೊಡುತ್ತಿದ್ದರೂ, ಇದಕ್ಕೂ ಮುನ್ನ ಅನೇಕ ಸಲ ಪ್ಯಾರಿಸ್ ತಿರುಗಾಡಿ ಬಂದಿದ್ದೇನಾದರೂ ಇಲ್ಲಿಯ ನಿತ್ಯದ ದೃಷ್ಯಗಳು ಕಣ್ಣಿಗೆ ಆಗಲೂ ತಂಪೆನಿಸಲಿಲ್ಲ ಹಾಗೂ ಇಗೂ ತಂಪೆನಿಸಲಾರವು. ನಮ್ಮ ಮೇಡಂ ಮಾತ್ರ ಶಾಂತವಾಗಿದ್ದಾರೆ, ಅವರಿಗೆ ಇಂತಹ ಪ್ರಸಂಗಗಳೇನೂ ಹೊಸತಲ್ಲ. ಮಾವಿನ ಕಾಯಿಗೆ ಉಪ್ಪಿನಕಾಯಿಯ ನಂಟಿದ್ದಹಾಗೆ ಅಥವಾ ಆಲಿವ್ ಹಣ್ಣುಗಳನ್ನು ಸಾಕಷ್ಟು ವರ್ಷ ವೆನಿಗರ್‌ನಲ್ಲಿ ನೆನೆಸಿಟ್ಟ ಹಾಗೆ ಮೇಡಂ ಫ಼್ರೆಂಚ್ ಸಂಸ್ಕೃತಿಯಲ್ಲಿ ಬೆರೆತುಹೋಗಿದ್ದಾರೆ. ಆಗ ನಡೆದಿದ್ದ ಆ ಪ್ರೇಮಿಗಳ ಮುಕ್ತ ವಿಲಾಸ ಇವರೂ ನೋಡಿದ್ದರೂ ನೋಡದ ಹಾಗೆ ವರ್ತಿಸಲಿಲ್ಲ. ನಾಟಕೀಯತೆ ಅವರ ರಕ್ತದಲ್ಲೇಯಿಲ್ಲ, ಕಣ್ಣೆದುರು ನಡೆಯುವ ಘಟನೆಯನ್ನು ನೋಡುವುದು, ಅದನ್ನು ಸ್ವೀಕರಿಸುವುದು, ತನಗೆ ಸರಿ ಅನಿಸಿದರೆ ಮಾತ್ರ ಅದರ ಬಗ್ಗೆ ಯೋಚಿಸುವುದು ಇಲ್ಲವಾದರೆ ಆ ಘಟನೆಯನ್ನು ಮರೆತುಬಿಡುವುದು. ಯಾವುದೇ ಘಟನೆಗೆ ಸ್ಪಷ್ಟವಾದ ಪುರಾವೆ ಇಲ್ಲದಿದ್ದಾಗ ಅದರ ಬಗ್ಗೆ ಮಾತನಾಡಬಾರದು ಅನ್ನುವುದು ಅವರ ನಿಲುವು. ಎಂತಹ ದೊಡ್ಡ ಗುಣ. ಪರಿಚಯದಲ್ಲಿ ಕೆಲವರಿಗೆ ಮೇಡಂ ನವರ ಈ ಸ್ವಭಾವ ಹಿಡಿಸುವುದಿಲ್ಲ, ಆದರೆ ನಾನು ಮಾತ್ರ ಅವರ ಈ ಸರಳ, ಸ್ವಚ್ಛ ಸ್ವಭವವನ್ನೇ ಇಷ್ಟಪಡುವುದು. ನಿಜಕ್ಕೂ ನಾನವರನ್ನು ಮೆಚ್ಚುತ್ತೇನೆ. ಅದೆಲ್ಲ ಇರಲಿ, ನಾಲ್ಕು ದಿನಗಳ ನಂತರ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಯೋಚಿಸಿ ನನಗೆ ತಲೆಬಿಸಿಯಾಗಿದೆ. ಕೆಲವೇ ದಿನಗಳಲ್ಲಿ ಸೊರಬೋನ್ನಾ ಯುನಿವರ್ಸಿಟಿಯಲ್ಲಿ ಒಂದು ದೊಡ್ಡ ಕಾರ್ಯಕ್ರಮ ನಡೆಯಲಿದೆ, ಫ್ರೆಂಚ್ ಇತಿಹಾಸದಲ್ಲಿ ಹೆಸರುವಾಸಿಯಾದ ಓರ್ವ ಐತಿಹಾಸಿಕ ವ್ಯಕ್ತಿಯನ್ನು ತಮ್ಮ ಬೌದ್ಧಿಕ ಕ್ಷಮತೆಗೆ ತಕ್ಕಂತೆ ಆರಿಸಿ ಆ ವ್ಯಕ್ತಿಯನ್ನು ವಿಶ್ಲೇಷಣಾತ್ಮಕ ರೂಪದಿಂದ ಅಭ್ಯಸಿಸಿ ನಾಟಕೀಯ ರೀತಿಯಲ್ಲಿ ಸಾದರಪಡಿಸುವಂತಹ ಒಂದು ಕಾರ್ಯಕ್ರಮವದು. ಭಾಷೆ ಮಾತ್ರ ಫ಼್ರೆಂಚ್ ಇರಬೇಕು ಅನ್ನುವುದೊಂದೇ ಕಟ್ಟುಪಾಡು. ಫ್ರಾಂಕ್ಫೋನಿ ದೇಶದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅನೇಕ ವಿದ್ವಾಂಸರು ಸೋರಬೊನ್ನಾ ಯುನಿವರ್ಸಿಟಿಯಲ್ಲಿ ಸೇರಿದ್ದಾರೆ. ಫ಼್ರಾಂಕ್ಫ಼ೋನಿ ದೇಶದ ವಿಶೇಷತೆಯೇನು ಗೊತ್ತೇ? ಫ್ರೆಂಚ್ ಆ ದೇಶದ ಜನತೆಯ ಮಾತ್ರುಭಾಷೆಯಲ್ಲದಿದ್ದರು ಅದು ಅಲ್ಲಿಯೇ ಬೆಳೆದು ಫ಼ಲವತ್ತಾಗಿರುವುದಲ್ಲದೆ ಆ ಭಾಷೆಯ ಸಾಕಷ್ಟು ಅಧ್ಯಯನ ಈ ದೇಶದಲ್ಲೇ ಆಗಿದೆ. ಇರಲಿ. ನಿಜ ಹೇಳಬೇಕೆಂದರೆ ಸಂಶೋಧನೆ ಮಾಡುವುದು, ಅದಕ್ಕೆ ಭಾಷೆಯ ಸುಂದರ ಲೇಪನ ಹಚ್ಚಿ ಆ ಪೇಪರನ್ನು ಸೆಮಿನಾರ್‌ನಲ್ಲಿ ಸಾದರಪಡಿಸುವುದು ನನ್ನ ಇಷ್ಟದ ಕೆಲಸಗಳೇ. ಎಮ್.ಫ಼ಿಲ್ ತನಕ ಇದನ್ನೇ ಮಾಡುತ್ತ ಬಂದಿದ್ದೇನೆ. ಈ ಕಾರ್ಯಕ್ರಮದಲ್ಲಿ ನಮ್ಮ ನಿಭಂದ ಉತ್ತಮವಾದದ್ದು ಅಂತ ಸಾಬೀತಾದರೆ ನಮ್ಮ ಕಲ್ಚರಲ್ ಸೆಂಟರ್‌ನ ಯಾವುದೇ ಪ್ರಾಜೆಕ್ಟಗಾಗಿ ಮುಂದಿನ ಐದು ವರ್ಷಗಳ ತನಕ ಫ಼್ರೆಂಚ್ ಸರಕಾರದಿಂದ ಸ್ಕಾಲರ್ಶಿಪ್ ದೊರೆಯುವ ಸಾಧ್ಯತೆಯಿದೆ. ವ್ಯಯಕ್ತಿಕ ಸನ್ಮಾನಕ್ಕಿಂತ ನಮ್ಮ ಮೇಡಂನವರಿಗೆ ಈ ಬಹುಮಾನದ ಆಕರ್ಷಣೆಯೇ ಹೆಚ್ಚಿರಬೇಕು ಅನಿಸುತ್ತದೆ. ಅವರೇ ಅಲ್ಲವೆ ನಮ್ಮ ಸೆಂಟರ್‌ನ ಮುಖ್ಯಸ್ಥರು. ನನಗೆ ನಮ್ಮ ಮೇಡಂನವರ ಮೇಲೆ ಸಂಪೂರ್ಣ ನಂಬಿಕೆಯಿದೆ, ಅಲ್ಲದೆ ಈ ಕೆಲಸಕ್ಕಾಗಿ ಅವರು ನನ್ನ ಸಹಾಯ ಬೇಡಿರುವುದು ನನಗಾಗಿ ದೊಡ್ಡ ಸನ್ಮಾನವೇ ಆಗಿದೆ. ಒಂದು ಕಾಲದಲ್ಲಿ ನಾನು ಇವರದ್ದೇ ವಿದ್ಯಾರ್ಥಿನಿಯಾಗಿದ್ದೆನಲ್ಲದೆ ಈಗ ಅವರ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಈ ಸ್ಪರ್ಧೆಗಾಗಿ ಅವರು ನನ್ನನ್ನು ಆಯ್ಕೆ ಮಾಡಿಕೊಡಿದ್ದಕ್ಕೆ ಎರಡು ಕಾರಣಗಳನ್ನು ಕೊಟ್ಟಿದ್ದರು, ಒಂದೋ ನನ್ನ ಧ್ವನಿ ಅದಕ್ಕೆ ನೆನಪಿನಲ್ಲುಳಿಯುವಂತಹ ಏರಿಳಿತವಿದೆ, ವಿಶೇಷವಾಗಿ ಡ್ರಾಮಾಟಿಕ್ ಹೈಪಿಚ್. ಹಾಗೂ ಎರಡನೆಯದಾಗಿ ಭಾವನಾತ್ಮಕವಾಗಿ ವಿಷಯವನ್ನು ಪ್ರಸ್ತುತಪಡಿಸುವ ನನ್ನ ಪರಿ.

‘ಮಾನವನ ಅಸ್ತಿತ್ವ ಅವನ ಭಾವನೆಗಳ ಹಾಗೂ ಸಂವೇದನೆಗಳ ಸಹಿತ ಸ್ವೀಕರಿಸುವ ನಿನ್ನ ವಿಚಾರಶೈಲಿಯು ಈ ಪೇಪರ್‌ಗೆ ಒಂದು ಬೇರೆ ಬಣ್ಣವನ್ನೇ ಕೊಡಬಹುದು ಎಂದು ನನಗನಿಸುತ್ತದೆ’ ಅಂದಿದ್ದರು.
ಅವರು ಹಾಗಂದಿದ್ದರೂ ಪ್ರತ್ಯಕ್ಷವಾಗಿ ಮಾತ್ರ ನನ್ನ ವಿಚಾರಗಳ ನೆರಳನ್ನು ಕೂಡ ಅವರು ತಮ್ಮ ನಿಭಂದದ ಮೇಲೆ ಬೀಳಗೊಡುತ್ತಿರಲಿಲ್ಲ. ಇತ್ತೀಚೆಗೆ ನಾವಿಬ್ಬರೂ ಒಳಗೊಳಗೇ ವಿಚಿತ್ರವಾದ ಬೇಗುದಿ ಅನುಭವಿಸುತ್ತಿದ್ದೇವೆ. ನಿಭಂದವೇನೋ ನಮ್ಮ ಅಪೇಕ್ಷೆಗಿಂತ ಚನ್ನಾಗಿಯೇ ಮೂಡಿ ಬಂದಿದೆ, ಎಲ್ಲ ವಿಷಯಗಳು ಪರಸ್ಪರ ಒಂದು ಸೂತ್ರದಡಿ ಬಂಧಿತವಾಗಿವೆ, ಸತ್ಯದ ಒರೆಗೆ ಹಚ್ಚಿ ಪೋಣಿಸಿರುವ ವಿಚಾರಗಳು, ಹಳೆಯ ಫ಼್ರೆಂಚ್ ಭಾಷೆಯನ್ನು ಯೋಗ್ಯ ರೀತಿಯಲ್ಲಿ ಬಳಸಿದ್ದು ಪ್ರಭಂದ ಮಂಡಿಸುವಾಗ ಮಾತನಾಡುವ ರೀತಿ, ಮಾತಿನ ಏರಿಳಿತದ ಬಗ್ಗೆ ಲೆಕ್ಕಾಚಾರವಾಗಿ ಅತ್ಯಂತ ಜಾಣತನಾಡೀಂದ ತಯಾರಿಸಿರುವ ಆದ್ದರಿಂದ ಎಲ್ಲವೂ ಉತ್ಕೃಷ್ಟವಾಗಿದೆ. ಆದರೂ ನಿಭಂದ ಎಲ್ಲೋ ಜಾಳುಜಾಳಾಗುತ್ತಿದೆ ಎಂದೆನಿಸುತ್ತಿದೆ. ಮೇಡಂ ಏನೋ ತುಂಬ ಸಂತೋಷವಾಗಿದ್ದಾರೆ, ಆದರೆ ನಾನು ಮಾತ್ರ ಯಾವುದೋ ಅತೃಪ್ತಿಯಿಂದ ತೊಳಲಾಡುತ್ತಿದ್ದೇನೆ. ನಿಭಂದದಲ್ಲಿರುವ ವಿಚಾರಗಳು ನನ್ನವಲ್ಲ, ಅವು ನನ್ನ ಮೇಲೆ ಹೇರಲ್ಪಟ್ಟಿವೆ, ನಾನು ಅದನ್ನು ಮಂಡಿಸುವ ಕೆಲಸವನ್ನು ಮಾತ್ರ ಮಾಡುವ ಗೊಂಬೆ ಮಾತ್ರ, ಅದೂ ನಾಟಕೀಯವಾಗಿ ಓದುವ ಗೊಂಬೆ. ನಿಭಂದ ಕೆಟ್ಟದ್ದಾಗಿದ್ದರೂ ಬಹುಶಃ ಮೇಡಂನವರ ಮೇಲಿನ ಪ್ರೀತಿಗಾಗಿ ಒಂದು ಪಕ್ಷ ನಾನು ಸುಮ್ಮನಿರುತ್ತಿದ್ದೆನೇನೋ ಆದರೆ ರಾಣಿ ಅಂದರೆ ನಮ್ಮ ನಿಭಂದದ ನಾಯಕಿಯ ಮೇಲೆ ಅನ್ಯಾಯವಾಗುತ್ತಿದೆ. ನಾನು ಯಾವ ವಿಷಯದಲ್ಲಿ ಪಿ.ಹೆಚ್.ಡಿ ಮಾಡಿರುವೆನೋ ಆಕೆಯ ವ್ಯಕ್ತಿತ್ವದ ಮೇಲೆ ಅನ್ಯಾಯವಾಗುತ್ತಿದೆ, ರಾಣಿಯ ಅಸ್ತಿತ್ವ ನನಗೂ ಮೇಡಂನವರಿಗೂ ಯಾವತ್ತೂ ಅಣಕಿಸುತ್ತ ಬಂದಿದೆ. ನಮ್ಮ ನಿಭಂದದ ಮುಖ್ಯ ವಿಷಯವೇ ಅದು. ಈ ನಿಭಂದಕ್ಕೆ ನಾನವರಿಗೆ ಸೂಚಿಸಿದ್ದ ಒಳ್ಳೆಯ ಹೆಸರನ್ನವರು ಮುಲಾಜಿಲ್ಲದೆ ನಿರಾಕರಿಸಿದರು. ಯಾಕೆ? ಎಂದು ಕೇಳಿದಾಗ ಅದು ಅಷ್ಟು ಸರಿಹೊಂದುವುದಿಲ್ಲ ಅಂದರು. ‘ಅನಂತ ವೇದನೆಯ ರಾಣಿ’ ಫ಼್ರೆಂಚ್ ರಾಜ್ಯಕ್ರಾಂತಿಯಲ್ಲಿಯ ದಂಗುಬಡಿಸುವ, ಅದ್ಭುತ, ಬಹುಚರ್ಚಿತ ಹಾಗೂ ಬಿರುಗಾಳಿಯ ವ್ಯಕ್ತಿತ್ವ.
‘ಬಡವರಿಗೆ ಬ್ರೆಡ್ ಸಿಗದಿದ್ದರೆ ಕೇಕ್ ತಿನ್ನಲಿ’ ಎಂದು ಸಾರಿದ ಶ್ರೀಮಂತ ರಾಣಿ ‘ಮಾರಿ ಆಂತುಆನೇತ್’.

(ಮುಂದುವರೆಯುತ್ತದೆ).








Monday, March 8, 2010

ತಾಯಿಯ ಕಣ್ಣು-೨

ತಾಯಿಯ ಕಣ್ಣು-೨

ನನ್ನ ಹಾಗೂ ಅಕ್ಕಪಕ್ಕದ ಕ್ಯಾಂಪಸ್ಸಿನಲ್ಲಿ, ಕ್ಯಾಂಪಸ್ಸಿನ ಹೊರಗೆ ಅನವಶ್ಯಕ ಮಾತುಕತೆಯಲ್ಲಿ ತಮ್ಮನ್ನು ತೊಡಗಿಸಿಳ್ಳುವ ವಿದ್ಯಾರ್ಥಿಗಳು ನನಗಾಗ ನೆನಪಾದರು, ಕಾಡು ಕೋಣದಂತೆ ಬೈಕ್ ಸವಾರಿ ಮಾಡುವ ವಿದ್ಯಾರ್ಥಿಗಳು, ದೇಣಿಗೆ ಹಾಗೂ ಫ಼ೀಸ್ ತುಂಬಿದ ಮೇಲೂ ಕ್ಲಾಸಿನಲ್ಲಿ ಕುಳಿತುಕೊಳ್ಳುವುದು ಮಹಾ ಪಾಪ ಅಂದುಕೊಳ್ಳುವ ಅಸಂಖ್ಯ ವಿದ್ಯಾರ್ಥಿಗಳು! ಸಲೀಲ್ ಕೂಡ ಅದೇ ವಯಸ್ಸಿನವನು. ಆ ವೇಳೆಗೆ ಸಲೀಲ್‌ನಂತಹ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳೂ ನೆನಪಾಗದೇಯಿರಲಿಲ್ಲ.

ನಾನಾತನನ್ನು ಒಮ್ಮೆ ನನ್ನ ಕ್ಲಾಸಿಗೆ ಬಂದು ನನ್ನ ಮಕ್ಕಳೊಂದಿಗೆ ಮಾತನಾಡುವಂತೆ ಕೇಳಿಕೊಂಡೆ, ಆದರೆ ನನ್ನ ಬೇಡಿಕೆಯನ್ನಾತ ನಯವಾಗಿಯೇ ನಿರಾಕರಿಸಿದ.

‘ಬೇಡ ಸರ್, ನಾನಷ್ಟು ದೊಡ್ಡವನಲ್ಲ, ಹೀಗೆ ನನ್ನಂತೆ ಕಷ್ಟ ಪಡುವ ಅನೇಕ ವಿದ್ಯಾರ್ಥಿಗಳಿದ್ದಾರೆ. ನಮ್ಮ ಪ್ರತಿಯೊಬ್ಬರ ಮನಸ್ಸಿನ ಕಾವಲುಗಾರ ಎಚ್ಚರದಿಂದಿದ್ದರೆ ಇವೆಲ್ಲ ಯಾರೂ ಹೇಳಿಕೊಡಬೇಕಿಲ್ಲ, ನಾವು ಯಾವ ಪರಿಸ್ಥಿಯಲ್ಲಿ ಬದುಕುತ್ತಿದ್ದೇವೆ? ನಮ್ಮ ಹೆತ್ತವರು ತಮ್ಮ ರಕ್ತದ ಬೆವರು ಹರಿಸಿ ಯಾವ ರೀತಿ ನಮಗೆ ಕಲಿಸುತ್ತಿದ್ದಾರೆ? ಅನ್ನುವುದನ್ನು ನೆನಪಿಟ್ಟರೆ ಸಾಕು ಕೇವಲ ಶಾಲೆಯಲ್ಲಿ ಹೇಳಿಕೊಟ್ಟ ಪಾಠದಿಂದಲೇ ಅಂಕಗಳನ್ನು ಪಡೆಯಬಹುದು. ಟ್ಯೂಶನ್ ಕ್ಲಾಸ್‌ಗಳು ಚೈನಿ ಹೊಡೆಯುವ ಹಾಗೂ ಆಲಸ್ಯವಿರುವ ಮಕ್ಕಳಿಗಾಗಿ ಮಾತ್ರ’ ಅಂದಗ ನಾನು ಮೂಕನಾದೆ.

ನಾನಲ್ಲಿಂದ ಹೊರಟಾಗ ನನ್ನನ್ನು ರಿಕ್ಷಾದವರೆಗೆ ಬೀಳ್ಕೊಡಲು ಬಂದವ ಅಲ್ಲಿಯೂ ಮಾತನಾಡುತ್ತಿದ್ದ.

‘ಸರ್, ಅಕ್ಕಪಕ್ಕದ ಮಕ್ಕಳನ್ನು ನೋಡುವಾಗ ನನಗೂ ಕೆಲವೊಮ್ಮೆ ಮಂಪರು ಆವರಿಸುತ್ತದೆ’ ಅಂದ.

‘ಆಗ?’ ನಾನು ಕಾತರದಿಂದಲೇ ಕೇಳಿದೆ.

‘ಆಗ, ನಾನು...................ನಾನು ಕೇವಲ ನನ್ನ ತಾಯಿಯ ಕಣ್ಣುಗಳನ್ನು ನೆನೆಸಿಕೊಳ್ಳುತ್ತೇನೆ’.

‘ಅಂದರೆ?’.

‘ತುಂಬ ಕಷ್ಟಪಡುತ್ತಿದ್ದಳಾಕೆ,.......... ಕಾಗದದ ಕವರ್‌ಗಳನ್ನು ತಯಾರಿಸುತ್ತಿದ್ದಳು, ಗೋಂದು ಹಾಗೂ ಕತ್ತರಿಗಳನ್ನು ಹಿಡಿದು ನಾವೂ ಆಕೆಗೆ ಸಹಾಯ ಮಾಡುತ್ತಿದ್ದೆವು. ವನವಾಸ ಆರಂಭವಾಗಿದ್ದು ನನ್ನ ತಂದೆ ಕೆಲಸ ಮಾಡುತ್ತಿದ್ದ ಗಿರಣಿ ಮುಚ್ಚಿ ಹೋದಮೇಲೆ. ಕಡೆಕಡೆಗಂತೂ ಆಕೆ ಬಹಳ ಬೇಸತ್ತು, ನೊಂದು ಸಾವಿನ ಬಗ್ಗೆಯೇ ಮಾತನಾಡುತ್ತಿರುತ್ತಿದ್ದಳು. ಹೀಗೆ ಒಂದು ದಿನ ಮಾತನಾಡುತ್ತ,

‘ನಾನಿನ್ನು ಹೆಚ್ಚು ಬದುಕಲಾರೆ ಕಂದ, ಆದರೆ ಈ ನನ್ನ ಕಣ್ಣುಗಳು ಯಾವತ್ತೂ ನಿನ್ನ ಮೇಲಿರುತ್ತವೆ, ನೀನು ಹೇಗೆ ಓದುತ್ತಿ? ಹೇಗೆ ದೊಡ್ಡವನಾಗುತ್ತಿ? ಅನ್ನುವುದನ್ನು ನೋಡುತ್ತಿರುತ್ತೇನೆ’, ಅಂದಿದ್ದಳು. ಆದ್ದರಿಂದ ನನಗಾಕೆಯ ಕಣ್ಣುಗಳೇ ನೆನಪಾಗುತ್ತವೆ." ಅಂದ.

ಆಟೋರಿಕ್ಷದಲ್ಲಿ ಕುಳಿತಾಗ ಮನಸ್ಸು ಅಲ್ಲೋಲಕಲ್ಲೋಲವಾಯಿತು.

ಸತತವಾಗಿ ಯಾರಾದರೂ ಓದು, ಬೇಗ ಏಳು ಅನ್ನುವುದನ್ನು ಹೇಳುತ್ತಲೇಯಿರಬೇಕೆ? ಹೆತ್ತವರು ಎಷ್ಟು ಕಷ್ಟ ಪಡುತ್ತಾರೆ! ಅನ್ನುವುದನ್ನರಿಯುವ ಮಕ್ಕಳು ಒಬ್ಬರೋ ಇಬ್ಬರೋ ಅಷ್ಟೆ!

ಇತ್ತೀಚೆಗೆ ನಮ್ಮ ಕಾಲೇಜಿನ ಪ್ರಾಧ್ಯಾಪಕಿಯೊಬ್ಬರು ವಿಷಣ್ಣವದನರಾಗಿಯೇ ಸ್ಟಾಫ಼್ ರೂಮಿಗೆ ಬಂದು ಕುಳಿತರು.

‘ನನ್ನ ಮಗ ಬೇಗ ಏಳುವುದೇಯಿಲ್ಲ ನೋಡಿ, ನೋಡಿದಾಗಲೆಲ್ಲ ಬೆಳಗಿನ ಏಳರ ಎಕ್ಚರ್ ತಪ್ಪಿಸುತ್ತಾನೆ, ನನ್ನ ಮಾತೇ ಕೇಳುವುದಿಲ್ಲ, ಈಗೀಗಂತೂ ಕಲಿಯುವ ಆಸಕ್ತಿಯೇಯಿಲ್ಲ ಅನ್ನುತ್ತಿದ್ದಾನೆ’ ಆನುವ ತಮ್ಮ ಅಳಲನ್ನು ನನ್ನಲ್ಲಿ ತೋಡಿಕೊಂಡರು. ಅವರನ್ನು ನೋಡಿದಾಗ ಅವರು ಈಗಲೋ ಆಗಲೋ ಅಳುವ ಪರಿಸ್ಥಿತಿಯಲ್ಲಿದ್ದರು.

ಕಷ್ಟ ಪಟ್ಟು ತಮ್ಮ ಜೀವನವನ್ನು ಸುಂದರವಾಗಿಸುವ ಕಾಲ ಮುಗಿದ ಮೇಲೆಯೇ ಅನೇಕ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳುತ್ತಾರೆ. ಆದರೆ ಕಾಲ ಸರಿದ ಮೇಲೆ ಉಳಿಯುವುದು ಬರೀ ಕತ್ತಲು ಅನ್ನುವುದನ್ನವರು ಅರಿಯುವುದು ಯಾವಾಗ?

ಬೆಳಿಗ್ಗೆ ಏಳಲು ಒತ್ತಾಯ, ಕಾಲೇಜಿಗೆ ಹೋಗಲು ಒತ್ತಾಯ, ಪ್ರತಿಯೊಂದಕ್ಕೂ ಒತ್ತಾಯ! ಒತ್ತಾಯದಿಂದ ಹೂ ಅರಳುತ್ತದೆಯೆ? ನಿರ್ಧಾರದ ಕಿಡಿಯನ್ನು ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲೇ ಹೊತ್ತಿಸಬೇಕಲ್ಲವೆ? ಹೊರಗಿನ ಒತ್ತಾಯದಿಂದ ಮೊಟ್ಟೆ ಒಡೆಯುತ್ತದೆ ಆದರೆ ಅದೇ ಒತ್ತಾಯ ಒಳಗಿನಿಂದ ಬಂದರೆ ಹೊಸ ಜೀವನಕ್ಕದು ನಾಂದಿಯಾಗುತ್ತದೆ.

ತಂದೆ ತಾಯಂದಿರ ಕಣ್ಣು ನೆನಪಾಗಲು ಅವರು ಸಾಯಲೇಬೇಕೆಂದಿದೆಯೆ?

ಕ್ಲಾಸಿನಲ್ಲಿ ಗೂಂಡಾಗಿರಿ ಮಾಡುವಾಗ, ಅಥವಾ ಸಮಯ ಹಾಳು ಮಾಡುವಾಗ, ಎಂಟ್ರನ್ಸ್ ಪರೀಕ್ಷೆಯಲ್ಲಿ ಸೊನ್ನೆ ಪಡೆಯುವಾಗ, ಚರ್ಚಗೇಟಿನಿಂದ ಲೋಕಲ್ ಟ್ರೇನಿನ ನೂಕುನುಗ್ಗಲಿನಲ್ಲಿ ಜೋತಾಡುತ್ತ ಒದ್ದಾಡುತ್ತ ಬರುವ ತಾಯಿ ನೆನಪಾಗುವುದಿಲ್ಲವೆ? ಮಕ್ಕಳಿಗಾಗಿ ಹಣ ಗಳಿಸಲು ಮದ್ರಾಸ್, ಕಲ್ಕತ್ತಾ, ಹೈದ್ರಾಬಾದ್ ಅಂತ ಕಂಪನಿಯ ಕೆಲಸಕ್ಕಾಗಿ ತಿರುಗಾಡಿ ಸುಸ್ತಾಗುವ ತಂದೆ ನೆನಪಾಗುವುದಿಲ್ಲವೆ?

ಮನೆಯಲ್ಲಿ ವಯಸ್ಸಿನಲ್ಲಿ ನಾವು ಚಿಕ್ಕವರಿರಬಹುದು ಆದರೆ ಬುದ್ಧಿಯಿಂದ ನಾವು ಜಾಣರಾದರೆ ಹೆತ್ತವರ ಬೆವರೂ ಪರಿಮಳ ಸೂಸಬಹುದು, ಯಶಸ್ಸಿನ ರೈಸ್ ಪ್ಲೇಟ್ ರೆಡಿಮೇಡ್ ಸಿಗುವುದಿಲ್ಲ ಅನ್ನುವುದು ಇದೇ ವಯಸ್ಸಿನಲ್ಲಿ ಗೊತ್ತಾಗಬೇಕು. ಯಶಸ್ಸು ಬೇಯಿಸಿಡಬೇಕಾಗುತ್ತದೆ. ಕೆಲವೊಮ್ಮೆ ಮಹತ್ವಾಕಾಂಕ್ಷೆಯ ಇಂಧನ ಬಳಸಿ ಜೀವನವನ್ನು ಕಾಯಿಸಿಡಬೇಕಾಗುತ್ತದೆ ಅನ್ನುವುದನ್ನು ತಿಳಿಯುವುದ್ಯಾವಾಗ? ನಾಲವತ್ತನೆಯ ವಯಸ್ಸಿನಲ್ಲಿಯೆ?

ಹತ್ತನೆಯ ತರಗತಿಯಲ್ಲಿದ್ದಾಗ ಪರೀಕ್ಷೆಯ ಫ಼ಾರಂ ತುಂಬಲು ನನ್ನಲ್ಲಿ ಹಣವಿರಲಿಲ್ಲ ಅನ್ನುವ ಸಂಗತಿ ನೆನಪಾಯಿತು. ತಾಯಿಯ ಕೈಯಲ್ಲಿದ್ದ ಕೊನೆಯ ಚಿನ್ನದ ಬಳೆಯನ್ನು ಮಾರಲು ಹೊರಟ ತಂದೆ ನೆನಪಾದರು. (ಆ ಬಳೆ ಮತ್ತೆ ಯಾವತ್ತೂ ಮರಳಿ ಬರಲಾರದು ಎಂದು ಗೊತ್ತಿದ್ದರೂ)

‘ಇದು ಕೊನೆಯ ಬಳೆ, ಮುಂದೇನು?’ ಅಂದಿದ್ದಳು ಅಮ್ಮ.

ಮನೆಯ ಆ ಕ್ಷಣಗಳು ಇಂದಿಗೂ ನೆನಪಾಗುತ್ತವೆ, ನೆಂಟರಿಷ್ಟರು ಮಾಡಿದ ಉಪೇಕ್ಷೆ, ಬರಿಗೈಯಲ್ಲಿ ದಿನ ದೂಡುತ್ತಿದ್ದ ತಾಯಿಯನ್ನು ಎಲ್ಲ ಕ್ಷೇತ್ರದಿಂದಲೂ ದೂರವಿಟ್ಟ ನೆಂಟರು ನೆನಪಾಗುತ್ತಾರೆ. ಒಂದು ದಿನ ಯಾರದ್ದೋ ಮದುವೆಯಲ್ಲಿ ನಾನಾಕೆಗೆ,

‘ಅಮ್ಮ, ನನ್ನ ಸರ ಹಾಕಿಕೋ, ಬರೀ ಕರಿಮಣಿಯಲ್ಲಿ ಚನ್ನಾಗಿರೋಲ್ಲ’, ಅಂದದಕ್ಕೆ ಅಮ್ಮ ಧೃಡ ನಿರ್ಧಾರದಿಂದ,

‘ನನ್ನ ಜೊತೆ ಬರೋಕ್ಕೆ ನಾಚಿಕೆ ಅನಿಸಿದರೆ ನಾನು ಬರೋದೇಯಿಲ್ಲ, ಬರೋದಾದ್ರೆ ಹೀಗೇ ಬರ್ತಿನಿ’. ಎಂದು ಹೇಳಿದ್ದ ಅಮ್ಮ ನೆನಪಾದಳು. ಕಡೆಗೊಂದು ದಿನ,

‘ನನ್ನ ಒಡವೆ ನೋಡಬೇಕಿದ್ದರೆ ನನ್ನ ಮಗನನ್ನು ನೋಡಿ’ ಅಂದಿದ್ದ ಆಕೆಯ ಆ ಮಾತು ನನಗೆಷ್ಟೊಂದು ಜವಾಬ್ದಾರಿ ಹೊರಿಸಿತ್ತು, ಆನ್ನುವುದು ನೆನಪಾಗುತ್ತದೆ.

ಇಂತಹ ಕ್ಷಣಗಳೇ ಕಷ್ಟಪಟ್ಟು ಕಲಿಯುವ ಮಕ್ಕಳ ಜೀವನಕ್ಕೆ ದಾರಿದೀಪವಾಗುತ್ತವೆ. ದಾರಿದ್ರ್ಯ ಅಥವಾ ಬಡತನ ಮನುಷ್ಯನ ಜೀವನವನ್ನು ಮುಗಿಸಲಾರದು, ಆದರೆ ಆಲಸ್ಯ, ಉದಾಸೀನತೆ, ಗುರಿಯಿಲ್ಲದ ಬದುಕು ಆತನನ್ನು ಸರ್ವನಾಶಮಾಡಿಬಿಡುತ್ತದೆ. ನನಗೆ ಕೊಟ್ಟ ಸಂದರ್ಶನವೊಂದರಲ್ಲಿ ಆಶಾಭೋಸಲೆಯವರು ಹೇಳಿದ ವಾಕ್ಯ ನನಗೆ ನೆನಪಾಗುತ್ತಿದೆ,

‘ಸುಖದ ಸುಪ್ಪತ್ತಿಗೆಯ ಮೇಲೆ ಹೊರಳಾಡುವ ಜನ ಯಾವತ್ತೂ ಕಲಾವಂತರಾಗಲು ಸಾಧ್ಯವಿಲ್ಲ’ ಅಂದಿದ್ದರು.

ನಾವು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ನಮಗಾಗಿ ಅಪಾರ ಕಷ್ಟಪಡುವ, ನಾವು ಹೆಸರು ಗಳಿಸಲೆಂದು ಅಪಾರ ನಂಬಿಕೆಯಿಂದ ನಮ್ಮನ್ನು ಹೊರ ಜಗತ್ತಿಗೆ ಕಳಿಸುವ, ನಮಗಾಗಿ ಕನಸು ಕಾಣುವ ತಾಯಿಯ ಕಣ್ಣು! ಆ ನಮ್ಮ ತಾಯಿಯ ಕಣ್ಣು ನಮಗೆ ನೆನಪಾದಾಗಲೇ ಸಾಕಷ್ಟು ಪ್ರೇರಣೆ ಕೊಡುವ ಜೀವನ ರೂಪುಗೊಳ್ಳುತ್ತದೆ.

ತಾಯಿಯ ಕಣ್ಣು-೧

ತಾಯಿಯ ಕಣ್ಣು-೧

ಮೂಲ ಮರಾಠಿ ಕೃತಿ: ಪ್ರವೀಣ್.ದವಣೆ.
ಅನುವಾದ: ಅಕ್ಷತಾ.ದೇಶಪಾಂಡೆ.

ಹತ್ತನೆಯ ತರಗತಿಯಲ್ಲಿ ಮೊದಲನೆಯ ಸ್ಥಾನ ಪಡೆದ ಸಲೀಲ್‌ನನ್ನು ಅಭಿನಂದಿಸಲು ಕೈಯಲ್ಲೊಂದು ಹೂವಿನ ಗುಚ್ಛ ಹಿಡಿದು ಆತನ ಮನೆ ಹುಡುಕುತ್ತ ನಡೆದೆ. ಅಕ್ಕಪಕ್ಕದ ಕೊಳಚೆ ಪ್ರದೇಶ, ಗುಡಿಸಲುಗಳು, ಹಾಗೂ ಅಲ್ಲಿಯ ಜನರನ್ನು ನೋಡಿ ಸಲೀಲ ಇಂತಹ ಗುಡಿಸಲುಗಳೊಂದರಲ್ಲಿ ವಾಸಿಸುತ್ತಿರಬಹುದು ಅನ್ನುವುದನ್ನು ಯೋಚಿಸಲೂ ಆಗುತ್ತಿರಲಿಲ್ಲ. ಆತನ ಬಟ್ಟೆ ಬರೆ, ವರ್ತನೆ, ವ್ಯಕ್ತಿತ್ವ ನೋಡಿದರೆ ಹಾಗನಿಸುತ್ತಿರಲಿಲ್ಲ. ಹಾಗಾಗಿ ಆತನ ಮನೆಯ ಬಗ್ಗೆ ಕಟ್ಟಿದ್ದ ನನ್ನ ಕಲ್ಪನೆ ತಲೆಕೆಳಗಾಗಿತ್ತು. ಕಡೆಗೂ ಅನೇಕ ಚರಂಡಿಗಳನ್ನು ದಾಟಿ ಎಡತಾಕುತ್ತ ಒಂದು ಅರೆಬಿದ್ದ ಗುಡಿಸಲೆದುರು ಬಂದೆ.
‘ಅವನಿಲ್ಲೇ ಇರುತ್ತಾನೆ’ ಯಾರೋ ಹೇಳಿದರು. ಕತ್ತಲ ಗರ್ಭದಿಂದ ಬೆಳಕು ಹಾದು ಬಂದಂತೆ ಸಲೀಲ್ ನನ್ನ ಸ್ವರ ಕೇಳಿ ಹೊರ ಬಂದ.
‘ಸರ್, ನೀವಿಲ್ಲಿ?’ ಆತನ ದನಿಯಲ್ಲಿ ಸಂತೋಷ ಆಶ್ಚರ್ಯಗಳೆರಡೂ ಇಣುಕಿದವು.
‘ಅಭಿನಂದನೆಗಳು’ ಅನ್ನುತ್ತ ಆತನ ಕೈಯಲ್ಲಿ ಹೂಗುಚ್ಛವನ್ನಿಟ್ಟೆ, ಹಾಗೆ ನೋಡಿದರೆ ಅಭಿನಂದಿಸಲು ನನಗಾಗಲೇ ನಾಲ್ಕೈದು ದಿನ ತಡವೇ ಆಗಿತ್ತು. ಅಭಿನಂದಿಸುವವರ ಒಂದು ಸರದಿ ಈಗಾಗಲೇ ಮುಗಿದು ರೋಟಿನ್ ಆರಂಭವಾಗಿತ್ತು. ಮೊದಲನೆಯ ಸ್ಥಾನ ಪಡೆದ ಹುಡುಗನ ಮನೆ ಹೀಗೆ? ಗುಡಿಸಿಲಿನ ಪಕ್ಕದಿಂದ ಹಾದುಹೋಗುವ ರೈಲು ಹಳಿಗಳು, ಯಾವತ್ತೂ ಹೋಗುವ ಬರುವ ರೈಲುಗಳ ಕಿವಿಗಡಚಿಕ್ಕುವ ಶಬ್ದ, ಹಾಗೂ ಸತತವಾಗಿ ಕಿರುಚಾಡುವ ಲೌಡ್‌ಸ್ಪೀಕರ್‌ಗಳ ನಡುವೆ ಈತ ಅದು ಹೇಗೆ ಓದುತ್ತಿದ್ದನೋ? ಆತನನ್ನು ಮತ್ತೆಮತ್ತೆ ಅಭಿನಂದಿಸುವಾಗ ನನ್ನ ಮನಸ್ಸು ಗುಡಿಸಿಲೊಳಗಿನ ಕತ್ತಲನ್ನು ಭೇದಿಸುತ್ತ ಮತ್ತೆಮತ್ತೆ ಪ್ರಶ್ನೆಗಳ ಜಾಲದಲ್ಲಿ ಸಿಲುಕುತ್ತಿತ್ತು.
ನಾನತನ ಮನೆಗೆ ಹೋಗಿದ್ದು ಆತನಿಗೆ ಬಹಳ ಖುಷಿ ಕೊಟ್ಟಿತ್ತು. ಹಾಗೆಂದು ಆತ ಮತ್ತೆಮತ್ತೆ ಹೇಳಿದ ಕೂಡ. ನನಗಾಗಿ ಚಹಾ ಮಾಡಲು ಆತ ಒಳಹೊರಟಾಗ ನಾನು ನಯವಾಗಿಯೇ ನಿರಾಕರಿಸಿದ್ದೆ. ಆದರೆ ನನ್ನ ಮಾತನ್ನಾತ ಕಡೆಗಾಣಿಸುತ್ತ,
‘ಚಿಂತಿಸ ಬೇಡಿ ಸರ್, ನಾನು ತುಂಬ ಒಳ್ಳೆಯ ಚಹಾ ತಯಾರಿಸುತ್ತೇನೆ, ಕೋಳಸೆವಾಡಿಯಲ್ಲಿ ನಾನೊಂದು ಚಹಾದ ಕ್ಯಾಂಟೀನ್ ನಡೆಸುತ್ತೇನೆ ಗೊತ್ತೆ?’ ಅಂದ.
ಚಹಾದ ಹಬೆಯಿಂದ ವಾತಾವರಣ ಉಲ್ಹಸಿತವಾಯಿತು. ಮನೆಯಲ್ಲಿ ಆತನಲ್ಲದೆ ಟೈಯಪಿಂಗ್ ಕಲಿಯುತ್ತಿರುವ ಆತನ ತಂಗಿ ಹಾಗೂ ಕಿರಾಣಿ ಅಂಗಡಿಯೊಂದರಲ್ಲಿ ಕೂಲಿ ಮಾಡುತ್ತಿದ್ದ ಅವರಪ್ಪ ಇರುತ್ತಿದ್ದರು.
‘ನಿನ್ನ ತಾಯಿ?’ ಕೇಳಿದೆ.
‘ತಾಯಿ ಇಲ್ಲ ಸರ್’.
ಆತನ ಮಾತು ಕೇಳಿ ದುಖಃವಾಯಿತು, ಸ್ತಬ್ಧವಾದ ವಾತಾವರಣವನ್ನು ತಿಳಿಗೊಳಿಸುವುದು ಹೇಗೆ? ಅನ್ನುವ ಯೋಚನೆಯಲ್ಲೇ ಕೆಲ ಸಮಯ ಕಳೆದೆ. ಆತ ನಿಜವಾಗಿಯೂ ಉತ್ತಮವಾದ ಚಹಾ ತಯಾರಿಸಿದ್ದ.
ಸಲೀಲ್‌ನ ಹಾಗೂ ನನ್ನ ಪರಿಚಯ ಆತ ಹತ್ತನೆ ತರಗತಿಯ ಮಾರ್ಗದರ್ಶನ ಶಿಬಿರಕ್ಕೆ ಬರಿತ್ತಿದ್ದಾಗಿನಿಂದಲದ್ದು. ಆತ ದಿನಾ ಭೇಟಿಯಾಗುತ್ತಿದ್ದ ದಿನಗಳವು. ತನ್ನೆಲ್ಲ ಉತ್ತರ ಪತ್ರಿಕೆಗಳನ್ನು ಮತ್ತೆಮತ್ತೆ ನನ್ನಿಂದ ಪರಿಶೀಲಿಸಿಕೊಳ್ಳುತ್ತಿದ್ದ ಆತನನ್ನು ನೋಡಿ ಆತನ ಪರಿಸ್ಥಿತಿಯ ಬಗ್ಗೆ ಯಾವುದೇ ಅಂದಾಜಿರಲಿಲ್ಲ. ಹಾಗೆಂದು ನಾನಾತನಿಗೆ ಹೇಳಿದಾಗ ಆತ ಭಾವುಕನಾಗಿ,
‘ಸರ್, ನಮ್ಮ ಪರಿಸ್ಥಿತಿ ಎಲ್ಲರ ಕಣ್ಣಿಗೆ ಕಾಣಲೇ ಬೇಕೆ? ನಮ್ಮ ಕಷ್ಟ, ಬದುಕನ್ನು ನೋಡಿ ಎಲ್ಲರಿಂದ ‘ಅಯ್ಯೋ’ ಅನಿಸಿಕೊಳ್ಳುವುದರಲ್ಲೇನರ್ಥವಿದೆ? ಇವತ್ತು ಕೂಡ ನನಗೆ ಅನೇಕ ಪಾರಿತೋಷಕಗಳು ಸಿಗಲಿವೆಯಾದರೂ ನನ್ನ ಮುಂದಿನ ಓದಿಗೆ ಅವು ಸಹಾಯವಾಗಲಾರವು, ಅದಕ್ಕಾಗಿ ನಾನೇ ಕಷ್ಟ ಪಡಬೇಕಿದೆ. ಟೆಲಿವಿಜನ್‌ನವರು ಬಂದು ಹೋದರು, ಯಾವುದೋ ಕ್ಲಬ್ಬಿನ ಅಧ್ಯಕ್ಷರಂತೂ ಅವರ ಕಾರ್ ಒಳಗೆ ಬರುವುದಿಲ್ಲವೆಂದರಿತು ಒಳಗೆ ಬರುವ ಗೊಡವೆಗೇ ಹೋಗದೆ ಹಾಗೇ ಹೊರಟು ಹೋದರು. ಸರ್, ಪರಿಸ್ಥಿತಿ ಮನುಷ್ಯನನ್ನು ಇರುವುದಕ್ಕಿಂತ ಹೆಚ್ಚು ದೊಡ್ಡವನನ್ನಾಗಿ ಮಾಡುತ್ತದೆ’ ಅಂದ.
ಸಲೀಲ್‌ನ ಹೊಳಪು ಆತನ ಜಾಣತನಕ್ಕಷ್ಟೇ ಸೀಮಿತವಾಗಿರದೆ ಅದು ಆತನ ಪ್ರತಿಯೊಂದು ವಾಕ್ಯದಿಂದಲೂ, ಆತನ ಕಣ್ಣಿನಿಂದಲೂ ಹೊರಸೂಸುತ್ತಿತ್ತು.
‘ಎಲ್ಲಿಂದ ಕಲಿತೆ ಇದನ್ನೆಲ್ಲ?’ ತಡೆಯಲಾರದೆ ಕೇಳಿದೆ.
‘ಅಕ್ಕಪಕ್ಕದ ಮಕ್ಕಳಿಂದ ಸರ್’ ಅಂದ.
ಅರ್ಥವಾಗದೆ ಅವನನ್ನು ಹಾಗೇ ನೋಡಿದೆ.
ಇವರುಗಳು ಯಾವ ಕೆಲಸಕ್ಕೂ ಬಾರದ ಮಕ್ಕಳು ಸರ್, ಯಾವತ್ತು ನೋಡಿದರೂ ಒಂದೋ ಇಸ್ಪಿಟ್ ಆಡುತ್ತಿರುತ್ತಾರೆ ಇಲ್ಲವೆ ಕುಡಿದು ಜಗಳ ಕಾಯುತ್ತಿರುತ್ತಾರೆ, ಸಮಯ ಹಾಳು ಮಾಡುವುದೊಂದೇ ಇವರಿಗಿರುವ ಕೆಲಸ. ಓದಕ್ಕೆ ಬರೀಯಕ್ಕಂತೂ ಮೊದಲೇ ಬರೋಲ್ಲ, ಆ ಹಬ್ಬ ಈ ಹಬ್ಬ ಅನ್ನುತ್ತ ಜನರಿಂದ ದೇಣಿಗೆಯ ರೂಪದಲ್ಲಿ ಹಣ ಕಿತ್ತು ಕಂಠಪೂರ್ತಿ ಕುಡಿದು ರಾತ್ರಿಯೆಲ್ಲ ಎಲ್ಲಂದರಲ್ಲಿ ಬಿದ್ದಿರುತ್ತಾರೆ. ಇದನ್ನೆಲ್ಲ ನೋಡುತ್ತ ಬೆಳೆದ ನಾನು ಅವರಂತಾಗಬಾರದೆಂದು ನಿರ್ಧರಿಸಿದೆ. ಏಳನೆಯ ತರಗತಿಯಲ್ಲಿದ್ದಾಗ ತೆಗೆದುಕೊಂಡ ಈ ನಿರ್ಧಾರ ನನ್ನನ್ನಿಂದು ಇಷ್ಟೆತ್ತರಕ್ಕೆ ಬೆಳೆಸಿತು ಸರ್, ಏಳನೆಯ ತರಗತಿಯಲ್ಲಿದ್ದಾಗಲೇ ನಿಮೋನಿಯಾದಿಂದ ನನ್ನ ತಾಯಿ ತೀರಿಕೊಂಡರು, ಇಲ್ಲೇ ಸಿವಿಲ್ ಆಸ್ಪತ್ರೆಯಲ್ಲಿ’ ಅಂದ.
ಈ ಪರಿಸ್ಥಿತಿ ಕೂಡ ಬದಲಾಗಬಹುದು ಅನ್ನುವ ಆಶ್ವಾಸನೆಯೊಂದನ್ನೇ ನಾನಾಗ ಆತನಿಗೆ ಕೊಟ್ಟಿದ್ದೆ. ಅದಕ್ಕಾತ ತಕ್ಷಣ,
‘ಬದಲಾಗ್ತಿದೆ ಸರ್, ಬಡತನದ ಬಗ್ಗೆ ಯೋಚಿಸುವುದಕ್ಕೆ ಸಮಯವೆಲ್ಲಿದೆ? ಅಂದ. ಆತನ ಮಾತಿಗೆ ನಾನು ಕಷ್ಟಪಟ್ಟು ಕಣ್ಣೀರು ತಡೆದೆ. ಹಾಗೆ ನೋಡಿದರೆ ನನ್ನ ಕಣ್ಣುಗಳು ತುಂಬಿ ಬರುವುದು ಬಹಳ ಕಡಿಮೆ, ಹೃದಯದಲ್ಲಿ ಅವಿತಿಟ್ಟ ಕಣ್ಣೀರು ಕಣ್ಣುರೆಪ್ಪೆಗಳನ್ನು ತೋಯಿಸುವುದು ಬಹಳ ವಿರಳ.