Thursday, April 8, 2010

ಅನಂತ ವೇದನೆಯ ರಾಣಿ-೪

ಅನಂತ ವೇದನೆಯ ರಾಣಿ-೪

ಸುಚಿತ್ರ:

ಈ ನಿಭಂದಕ್ಕೆ ಸಹಾಯ ಮಾಡಲು ನಾನು ಒಪ್ಪದಿದ್ದಿದ್ದರೆ ಬಹುಶಃ ನನ್ನ ಮನಸ್ಸಿನಲ್ಲಿದ್ದ ಮೇಡಂನವರ ಪ್ರತಿಮೆಗೆ ಧಕ್ಕೆ ಬರುತ್ತಿರಲಿಲ್ಲ. ಮೇಡ್ಂನವರ ತೀಕ್ಷ್ಣ ಬುದ್ಧಿಮತ್ತೆ, ಗಂಭೀರ ವ್ಯಕ್ತಿತ್ವ, ಎಲ್ಲ ಹೆಣ್ಣುಮಕ್ಕಳಿಗೂ ಅಭಿಮಾನವೆನಿಸುವಂತಹ ಅವರ ಸಾಧನೆಗೆ ನಾನು ಬಹಳ ಮಾರು ಹೋಗಿದ್ದೆ, ಆದರೆ ಈಗದು ಸಾಧ್ಯವಾಗುತ್ತಿಲ್ಲ. ಕಾರಣ ಅವರ ಬುದ್ಧಿಮತ್ತೆಯ ಹಿಂದಿರುವ ಭಾವನೆಯ ಕೊರತೆ. ಬಹುಶಃ ಅದಕ್ಕೇ ಅವರು ಅವಿವಾಹಿತರಾಗಿಯೇ ಉಳಿದಿರಬೇಕು.

ಬಣ್ಣಬಣ್ಣದ ಹೊದಿಕೆಯ ಹಾಗಿದೆ ರಾಣಿಯ ಜೀವನ, ಅವಳ ಜೀವನದಲ್ಲಿ ಪ್ರವೇಶಿಸಿದ್ದ ಪ್ರತಿಯೊಂದು ವ್ಯಕ್ತಿಯ ಬಣ್ಣ ಅಲ್ಲಿದ್ದರೂ ಆಕೆ ತನ್ನ ಆತ್ಮದ ಬಣ್ಣವನ್ನು ಬಹು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾಳೆ ಅನ್ನುವುದನ್ನು ಮೇಡಂ ಒಪ್ಪಲೇಬೇಕು.

ಫ಼್ರೆಂಚ್ ಜನತೆಗಾಗಿ ರಾಣಿ ಏನನ್ನೂ ಮಾಡಲಿಲ್ಲ, ಆಕೆ ಮೂರ್ಖಳಿದ್ದಳು ಅನ್ನುವುದು ನಿಜವಾದರೂ ಆಕೆ ಎಂದೂ ಕ್ರೂರಳಾಗಿರಲಿಲ್ಲ. ಮೋಝಾರ್ಥನ ಜೊತೆ ಮದುವೆಯಾಗಿ ಆಕೆಯೂ ಸುಖವಾಗಿರಬಹುದಿತ್ತು. ರಾಜಕಾರಣದಲ್ಲಿ, ಲೋಕಕಲ್ಯಾಣದಲ್ಲಿ ಆಕೆ ಎಂದೂ ಮೂಗು ತೂರಿಸಲಿಲ್ಲ. ಸಾಮಾನ್ಯ ಸ್ತ್ರೀಯಂತೆ ಆಕೆ ಸಂಸಾರಸ್ಥ ಜೀವನ ನಡೆಸುತ್ತಿದ್ದಳು. ಸಿಂಹಾಸನದ, ಅಧಿಕಾರದ ಮೋಹ ರಾಣಿಗಿತ್ತು ಅನ್ನುವ ಒಂದಂಶದ ಪುರಾವೆಯೂ ಮೇಡಂನವರಿಗೆ ಎಲ್ಲೂ ಸಿಕ್ಕಿಲ್ಲ. ಚಿಕ್ಕ ವಯಸ್ಸಿನಲ್ಲೇ ಅಪರಿಚಿತ ಸಂಸ್ಕೃತಿಯ ಮನುಷ್ಯನೊಂದಿಗೆ ಆದ ವಿವಾಹ, ಅವನೊಂದಿಗೆ ಹೊಂದಿಕೊಂಡು ಹೋಗುವಾಗ ಆಕೆ ಪಟ್ಟ ಬವಣೆ, ಜೊತೆಗೆ ನಿಷ್ಕ್ರೀಯ ಪತಿ ಇವುಗಳಿಂದ ಆಕೆ ಎಷ್ಟು ಹೆದರಿರಬಹುದು! ಎಷ್ಟು ನೊಂದಿರಬಹುದು! ಆಗಿನ ಕಾಲದಲ್ಲಿ ೧೪-೧೫ ವರ್ಷದ ಹುಡುಗಿಯರು ಇಂದಿನಂತೆ ಸ್ವತಂತ್ರವಾಗಿ, ಸ್ವಚ್ಛಂದವಾಗಿರಲು ಸ್ಸಾಧ್ಯವಿರಲಿಲ್ಲ ಅನ್ನುವುದನ್ನು ಗಮನಕ್ಕೆ ತೆಗೆದುಕೊಂಡರೆ ರಾಣಿಯ ಅವಸ್ಥೆ ಅರ್ಥವಾಗುತ್ತದೆ. ವಯಸ್ಸಿನ ಹದಿನಾರನೆಯ ವರ್ಷದ ಮಹತ್ವ ಅನ್ನುವುದಕ್ಕಿಂತ ಆ ವಯಸ್ಸಿನಲ್ಲಾಗಬಹುದಾದಂತಹ ಅನಾಹುತದ ಬಗ್ಗೆ ಮಾನ್ಯತೆ ಕೊಡುವ ನಮ್ಮ ಸಂಸ್ಕೃತಿ ರಾಣಿ ಹೀಗೇಕೆ ವರ್ತಿಸಿದಳು ಅನ್ನುವುದರ ಮೇಲೆ ಬೆಳಕು ಬೀರುತ್ತದೆ. ರಾಣಿ ಕಡೆಯವರೆಗೆ ಹಸಿದೇಯಿದ್ದಳು. ಆ ಹಸಿವು ಕೇವಲ ಶರೀರ ಸುಖದ್ದಾಗಿರಲಿಲ್ಲ, ಅದರ ಜೊತೆಗೆ ಪ್ರಸ್ಥಾಪಿಸಲ್ಪಡುವ ಸಹಜೀವನದ ಬಂಧನ ಆಕೆಗೆ ಅಪರಿಚಿತವಾಗಿಯೇ ಉಳಿಯಿತು. ದೇಹ ಹಾಗೂ ಮನಸ್ಸಿನಿಂದ ದೂರವಾಗುತ್ತಿದ್ದ ಪತಿಯನ್ನಾಕೆ ಎಂದೋ ಸ್ವೀಕರಿಸಿಯಗಿತ್ತು, ಆದರೆ ಒಳತುಡಿತವನ್ನು ಮೆಟ್ಟಿ ನಿಲ್ಲುವುದು ಸಾಧ್ಯವಿತ್ತೆ? ಇಂತಹ ಪರಿಸ್ಥಿಯಲ್ಲಿ ಮುಂದೆ ಆರಂಭವಾಗಿತ್ತು ಅಲ್ಪವಯಸ್ಸಿನಲ್ಲೇ ಸುಖಕ್ಕಾಗಿ ಹುಡುಕಾಟ. ಶ್ರೀಮಂತ ರಾಜಮನೆತನಕ್ಕೆ ಸೇರಿದ್ದವಳಾದ್ದರಿಂದ ಆಕೆ ಇಂತಹ ಶೋಕಿಗಳನ್ನು ಪೂರೈಸಿಕೊಳ್ಳಬಲ್ಲವಳಾಗಿದ್ದಳು ಅನ್ನುವುದು ಅವಳ ಸುದೈವ ಹಾಗೂ ದುರ್ದೈವ ಕೂಡ. ಅವಳ ಬಿಡಿ ಬಿಡಿ ಜೀವನವನ್ನು ಒಂದು ಸೂತ್ರದಲ್ಲಿ ಬಂಧಿಸಿಡಲು ಆಕೆಗೊಂದು ಮಗು ಕೂಡ ಅನೇಕ ವರ್ಷಗಳ ಕಾಲ ಹುಟ್ಟಲಿಲ್ಲ. ಅವಳನ್ನು ಹೆದರಿಸಿ, ಬೆದರಿಸಿ ಸರಿದಾರಿಗೆ ತರುವ ಅಥವಾ ಪ್ರೀತಿಯ ನಾಲ್ಕು ಮಾತುಗಳನಾಡುವವರೂ ಯಾರೂ ಇರಲಿಲ್ಲ. ಅವಳ ತಾಯಿಯನ್ನು ಬಿಟ್ಟರೆ, ತಾಯಿಗಿಂತ ಆಸ್ಟ್ರಿಯಾದ ಮಹಾರಾಣಿ ಥೆರೇಸಾ ಎಂದೇ ಅವಳ ಪರಿಚಯ ರಾಣಿಗಿದ್ದದ್ದು. ಫ಼್ರಾನ್ಸನ ಸಿಂಹಾಸನದ ಜವಾಬ್ದಾರಿ ಹೊರುವ ಜಾಣ್ಮೆ, ಕೆಚ್ಚೆದೆ ಲೂಯಿಗಾಗಲಿ, ಅಥವಾ ಮಾರಿಗಾಗಲಿ ಇರಲಿಲ್ಲ ಅನ್ನುವುದು ಥೆರೇಸಾಗೆ ಚನ್ನಾಗಿ ಗೊತ್ತಿತ್ತು. ಆದ್ದರಿಂದ ಆಕೆ ತನ್ನ ಮಗಳಿಗೆ ಪತ್ರಗಳ ಮೂಲಕ ಸೂಚನೆಗಳನ್ನು ಕೊಡುತ್ತಿದ್ದಳು.

‘ರಾಜನ ಸಾಧಾರಣ ಬದುಕು ಎಲ್ಲರಿಗೂ ಗೊತ್ತು, ಆದ್ದರಿಂದ ನಾಳೆ ಫ಼್ರಾನ್ಸ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದರೆ ನಿನ್ನ ಈ ಖರ್ಚುಗಳ ಲೆಕ್ಕಾಚಾರಕ್ಕೆ ನೀನೇ ಉತ್ತರಿಸಬೇಕಾಗುತ್ತದೆ, ಅದಕ್ಕಾಗಿ ಪ್ರಜೆಗಳು ನಿನ್ನ ರುಂಡ ಹಾರಿಸಲಿಕ್ಕೂ ಸಾಕು’ ಎಂದೆಲ್ಲ ಎಚ್ಚರಿಸುತ್ತಿದ್ದಳು. ಆದರೆ ಇವೆಲ್ಲ ಚಿಕ್ಕ ರಾಣಿಗೆ ಹೇಗೆ ಅರ್ಥವಾಗಬೇಕು? ಕೆಲವು ವಿಷಯಗಳು ಅನುಭವದಿಂದಲೇ ಅರ್ಥವಾಗುತ್ತವೆ ಅನ್ನುವುದು ನಿಜ, ಆಗಲೇ ಮಾನವ ಅನುಭವಸ್ಥ ಅನಿಸಿಕೊಳ್ಳುತ್ತಾನೆ.

ತ್ರಿಯೋನಾದ ಹಸಿರು ಹುಲ್ಲಿನ ಮೇಲೆ ಮಲಗಿದ ರಾಣಿಗೆ ದೇಶದ ಹಿತ, ಜನ ಹಿತದ ಬಗ್ಗೆ ಯಾವುದೇ ಚಿಂತೆಯಿರಲಿಲ್ಲ ಅನ್ನುವುದಕ್ಕಿಂತ ಆ ವಿಚಾರ ಅವಳಿಗೆಂದೂ ಗೊತ್ತೇಯಿರಲಿಲ್ಲ ಅನ್ನಬಹುದು. ಈಗಿನ ಸ್ತ್ರೀಯರು ತುಂಬ ಬುದ್ಧಿವಂತರು ಅನ್ನುವುದು ಮೇಡಂನವರ ಅಂಬೋಣ. ವೈಮಾನಿಕರು, ಡಾಕ್ಟರು, ಹಾಗೂ ಮೇಡಂನವರಂತೆ ಹೊರ ಜಗತ್ತಿನಲ್ಲಿ ಹೆಸರು ಗಳಿಸಿರುವ ಸ್ತ್ರೀಯರ ಹಾಗೆ ಸಂಸಾರದ ಮಾತುಕತೆಗಳಲ್ಲಿ ಸುಖ ಕಾಣುವ ಸ್ತ್ರೀಯರು ಕೂಡ ಬಹಳಷ್ಟಿದ್ದಾರೆ. ರಾಣಿಯೂ ಅವರಲ್ಲೊಬ್ಬಳು. ಆದರೆ ಸ್ತ್ರೀ ಸಾಧನೆಯ ಕನ್ನಡಿಯಿಂದ ರಾಣಿಯನ್ನು ನೋಡುವಾಗ ಮೇಡಂ ಆಕೆಯ ಸೌಂದರ್ಯ ದೃಷ್ಟಿ ಹಾಗೂ ಆಕೆಯ ಕಲಾ ಸಂಪನ್ನತೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಅವರ ಪ್ರಕಾರ ಇವೆಲ್ಲವನ್ನೂ ದುಡ್ಡಿನಿಂದ ಕೊಳ್ಳಬಹುದು. ಆದರೆ ಮೇಡಂ, ತ್ರಿಯೋನಾದ ಅರಮನೆ ಕೇವಲ ವಿಲಾಸದ ಚೈನಿಯ ಸ್ಥಳವಾಗಿರಲಿಲ್ಲ.

ಅಲ್ಲಿ ರಾಣಿ ನಾಟ್ಯ ಪರಂಪರೆಯ ಒಂದು ಚಳುವಳಿಯನ್ನೇ ಪ್ರಾರಂಭಿಸಿದ್ದಳು. ದೇಶವಿದೇಶದ ಹೆಸರಾಂತ ಕಲಾವಿದರು ತಮ್ಮ ಕಲೆಯನ್ನು ಸಾದರಪಡಿಸಲು ಒಂದು ದೊಡ್ಡ ಥಿಯೇಟರನ್ನೇ ನಿರ್ಮಿಸಿದಳು ರಾಣಿ. ತನ್ನ ವಿನಂತಿಗೆ ಬೆಲೆಕೊಟ್ಟು ಬರುವ ಕಲಾವಿದರಿಗಾಗಿ ಉತ್ತಮವಾದ ವ್ಯವಸ್ಥೆಯನ್ನು ಏರ್ಪಡಿಸಿದ್ದಳು. ಅನೇಕ ನಾಟ್ಯ ಪ್ರಯೋಗಗಳು ಏರ್ಪಡಿಸಲ್ಪಡುತ್ತಿದ್ದವು. ಕೆಲವು ನಾಟಕಗಳಲ್ಲಿ ರಾಣಿಯೂ ಅಭಿನಯಿಸಿದ್ದಳು. ತನ್ನ ಅಪೂರ್ಣ ಕನಸು, ಆಕಾಂಕ್ಷೆಗಳನ್ನಾಕೆ ತನ್ನ ಪಾತ್ರಗಳ ಮೂಲಕ ಸಾದರಪಡಿಸುತ್ತಿದ್ದಳು. ಕಲಾವಿದರಿಗೆ ತಮ್ಮ ಕಲೆಯನ್ನು ಸಾದರಪಡಿಸಲು ಹುರುಪು ಬರಲೆಂದು ಅಕ್ಕಪಕ್ಕದ ಪರಿಸರವನ್ನು ಪ್ರೇಕ್ಷಣಿಯ ಹಾಗೂ ರಮಣೀಯವಾಗಿ ಮಾರ್ಪಡಿಸಿದಳು. ಆಗಾಗ ನಾಟ್ಯ ಶಿಬಿರಗಳನ್ನು ಆಯೋಜಿಸಿ ನಾಟ್ಯ ಶಾಲೆಗಳನ್ನು ನಿರ್ಮಿಸಿದಳು. ಮೇಡಂ ನಿಮ್ಮ ದೃಷ್ಟಿಯಲ್ಲಿ ಇವಕ್ಕೆಲ್ಲ ಜನತೆಯ ಹದಿನಾಲ್ಕು ಸಾವಿರ ಪೌಂಡ್ ಖರ್ಚಾಯಿತು, ಆದರೆ ನನ್ನ ದೃಷ್ಟಿಯಲ್ಲಿ ಅನೇಕ ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ದೊರಕಿತು. ಮುಂದೆ ಫ಼್ರಾನ್ಸನಲ್ಲಿ ವಿಕಸಿತವಾದ ಥಿಯೇಟರ್ ಮುವ್‌ಮೆಂಟ್‌ನ ಅಡಿಪಾಯ ರಾಣಿಯೇ ಭದ್ರಪಡಿಸಿದಳು.

ರಾಣಿಗೆ ಸಿಂಹಾಸನದ ಆಸೆ ಇದ್ದಿದ್ದರೆ, ಅಥವಾ ತನ್ನ ತಾಯಿಯಂತೆ ಕುಟಿಲ ನೀತಿಗಳನ್ನು ಬಲ್ಲವಳಾಗಿದ್ದರೆ ಆಕೆ ಫ಼್ರಾನ್ಸಿನ ದರ್ಬಾರಿನಲ್ಲಿ ದೊಡ್ಡ ಅಧಿಕಾರಿಗಳನ್ನು ಅಂತೆಯೇ ಮುಂದೆ ಕ್ರಾಂತಿಯ ಕಾಲದಲ್ಲಿ ಲೋಕಪ್ರತಿನಿಧಿಗಳನ್ನು ಸೇರಿಸಿಕೊಳ್ಳಬಹುದಿತ್ತು. ಆದರೆ ಆ ಸಾಮಾನ್ಯ ಹೆಂಗಸಿಗೆ ಕುಟಿಲ ನೀತಿಗಳನ್ನು ರಚಿಸಲಾಗಲೇಯಿಲ್ಲ. ರಾಜನು ರಾಜ್ಯ ಕಾರುಭಾರನ್ನು ನೋಡಿಕೊಳ್ಳುವುದು ಹಾಗೂ ರಾಣಿ ಮಕ್ಕಳನ್ನು ಹಾಗೂ ಮನೆತನದ ರೀತಿನೀತಿಗಳನ್ನು ಸಂಭಾಳಿಸಿಕೊಂಡು ತಮ್ಮಹವ್ಯಾಸ ಹಾಗೂ ಕಲೆ ಜೋಪಾನ ಮಾಡುವುದು ಅನ್ನುವುದು ಸಮಾಜದ ಪ್ರತಿಯೊಂದು ಸಮೂಹದಲ್ಲಿ, ರಾಜ್ಯದಲ್ಲಿ ಪ್ರಂಪರಾಗತವಾಗಿ ನಡೆದು ಬಂದಿದೆ. ಇಂದು ಕೂಡ ಎಷ್ಟೋ ಉದ್ಯೋಗಿಗಳ, ರಾಜಕಾರಣಿಗಳ ಪತ್ನಿಯರು ತಮ್ಮ ಪತಿಯ ಕಾರ್ಯದಲ್ಲಿ ಸ್ವಲ್ಪವೂ ಆಸಕ್ತಿಯಿಲ್ಲದವರು ವಿವಿಧ ಕಲಾಕ್ಷೇತ್ರದಲ್ಲಿ ಸ್ವತಂತ್ರವಾಗಿ ಸಾಧನೆ ಮಾಡುವುದನ್ನು ನೋಡುತ್ತೇವೆ. ಹೀಗಿದ್ದ ಮೇಲೆ ಹದಿನೆಂಟು ವರ್ಷದ ರಾಣಿ ಮಾತ್ರ ತನ್ನ ಪತಿ ಜೀವಂತವಾಗಿರುವಾಗ, ಆರೋಗ್ಯವಂತನಾಗಿರುವಾಗ ರಾಜ್ಯವನ್ನಾಳಬೇಕು ಅನ್ನುವ ಅಪೇಕ್ಷೆಯೆಕೆ?

ರಾಣಿಗೆ ಸ್ವೈರಾಚಾರಿ ಅನ್ನುವ ಲೇಬಲ್ ಅಂಟಿಸಿ ಫ಼್ರೆಂಚ್ ಜನತೆಯ ದುಖಃಕ್ಕೆ ರಾಣಿಯೇ ಕಾರಣ ಅನ್ನುವಂತಹ ಆರೋಪಗಳನ್ನು ರಾಣಿಯ ಮೇಲೆ ಹೊರಿಸುವ ಮೇಡಂನವರ ದೃಷ್ಟಿಕೋನ ಒನ್ ವೇ ಹಾಗೂ ಹಟಮಾರಿತನದ್ದು ಅನಿಸುತ್ತದೆ.

Friday, April 2, 2010

ಅನಂತ ವೇದನೆಯ ರಾಣಿ-೩

ಅನಂತ ವೇದನೆಯ ರಾಣಿ-೩


ಮೇಡಂ:
ಹೌದು ರಾಣಿ ನಿಂಫೋಮೇನಿಯಾಕ್ ಅನ್ನುವುದನ್ನು ಸಾಬೀತುಪಡಿಸುವ ಸಾಕಷ್ಟು ಪುರಾವೆಗಳನ್ನು ಅಭ್ಯಸಿಸಿದ್ದೇನೆ ನಾನು. ರಾಣಿಗೆ ಬರೀ ಸುಖ ಬೇಕಿತ್ತು, ಬೇರೆ ಬೇರೆ ರೀತಿಯಿಂದ ಪಡೆಯಲ್ಪಡುವ ಸುಖ. ಯಾರ ಮುಲಾಜಿಲ್ಲದೆ ಆ ಸುಖವನ್ನಾಕೆ ಪಡೆದುಕೊಂಡಳು ಕೂಡ. ‘ಏಳು ವರ್ಷಗಳು ಆಕೆ ಮಕ್ಕಳಿಲ್ಲದೆ ದುಖಃ ಪಡುತ್ತಿದ್ದಳು’ ಅನ್ನುವ ಸುಚಿತ್ರಾಳ ದಾವೆಯನ್ನು ನಾನು ಒಪ್ಪುವುದಿಲ್ಲ. ಅವಳದೇ ಆದ ಸುಖಮಯ ಜೀವನದಲ್ಲಿ ಅಳುವುದು ವ್ಯಥೆ ಪಡುವುದು ಇರಲೇಯಿಲ್ಲ.
ನಿಶಾಚರ ಪ್ರಾಣಿಗಳ ತರಹ ಅವಳ ದಿನ ಕೂಡ ರಾತ್ರಿಯೇ ಆರಂಭವಾಗುತ್ತಿತ್ತು. ನಾಟಕ, ಬಾಲ್ ಡಾನ್ಸ್, ಇಸ್ಪಿಟ್ ಆಡುವುದು, ಮುಂದೊಂದು ದಿನವಂತೂ ‘ಆರ್ಜಿ’ ಪಾರ್ಟಿಗಳು’, ಹೀಗೆ ಅವಳ ಸುಖಕರ ಪ್ರವಾಸ ಸಾಗಿತ್ತು. ಬಾಲ್ ಡಾನ್ಸ್‌ಗಾಗಿ ಬರುತ್ತಿದ್ದ ಎಷ್ಟೋ ಸುಂದರ ತರುಣರು ಅವಳ ಸಹವಾಸಕ್ಕಾಗಿ ಹಾತೊರೆಯುತ್ತಿದ್ದರು. ಎಷ್ಟೋ ಶ್ರೀಮಂತ ಉಮರಾವ್‌ರು ಬರೆದಿಟ್ಟ ತಮ್ಮ ನೆನಪಿನ ಹೊತ್ತಿಗೆಗಳಲ್ಲಿ ರಾಣಿಯ ಜೊತೆ ಉಂಡ ಸುಖದ ವರ್ಣನೆಯಿದೆ. ಅದೆಲ್ಲ ಸುಳ್ಳು ಹೇಗಾಗುತ್ತದೆ? ದಿನಗಳೆದಂತೆ ತನ್ನದೇ ವಯಸ್ಸಿನ ಗಂಡಸರ ಆಕರ್ಷಣೆ ಆಕೆಗೆ ಅನಿವಾರ್ಯವಾಗುತ್ತ ಬಂತು. ವಿಲಾಸಿ ಜೀವನದ ಜೊತೆಗೆ ಬೇಕಾದಷ್ಟು ಸಮಯ ಕೂಡ ಸಿಗುತ್ತಿತ್ತು.
ತಂತಮ್ಮ ಕೆಲಸಗಳನ್ನು ಮುಗಿಸಿ ಮನೆಗೆ ಮರಳುವ ಪ್ರಜಾಜನರ ಸುಸ್ತಾದ ಮುಖಗಳನ್ನಾಕೆ ದಿನಾ ನೋಡುತ್ತಿದ್ದಳು. ಅವರ ನಮಸ್ಕಾರಗಳನ್ನು ದಿಮಾಖಿನಿಂದ ಸ್ವೀಕರಿಸುತ್ತಿದ್ದಳೇ ವಿನಹ ಚಳಿಯಲ್ಲಿ ನಡುಗುತ್ತಿದ್ದ ಬಡ ಪ್ರಜೆಗಾಗಿ ಆಕೆಯ ಮನಸ್ಸು ಎಂದೂ ಮರುಗಲಿಲ್ಲ. ತಾನು ಮಾಡುತ್ತಿರುವ ಈ ಮೋಜು ಈ ಸಾಮಾನ್ಯ ಜನ ಕಟ್ಟುತ್ತಿರುವ ಕರದ ದುಡ್ಡಿನಿಂದ ಅನ್ನುವುದವಳಿಗೆ ಅರ್ಥವಾಗಲೇಯಿಲ್ಲ. ಅವಳ ನೆನಪಿನಲ್ಲಿದ್ದದ್ದು ಪ್ಯಾರಿಸ್‌ನಲ್ಲಾದ ಅವಳ ಭವ್ಯ ಸ್ವಾಗತ, ಪ್ಯಾರಿಸ್‌ನ ಝಗಮಗಿಸುವ ರೂಪ. ಕಷ್ಟಪಟ್ಟು ಜೀವನ ಸಾಗಿಸುತ್ತಿರುವ ಜನತೆಯತ್ತ ಆಕೆ ಕಣ್ಣೆತ್ತಿಯೂ ನೋಡಲಿಲ್ಲ. ಅವರ ಕಷ್ಟಗಳನ್ನೆಂದೂ ಅರ್ಥಮಾಡಿಕೊಳ್ಳಲಿಲ್ಲ.
ಮನಸ್ಸು ಮಾಡಿದ್ದಿದ್ದರೆ ಆಕೆ ಫ಼್ರಾನ್ಸಿನ ಮಹಾರಣಿಯಾಗಬಹುದಿತ್ತು. ಅವಳ ಆಕರ್ಷಕ ರೂಪ, ಅವಳ ಮೊದಲ ದರ್ಶನ ಜನತೆಯ ಮನಸ್ಸಿನಲ್ಲಿ ಅಚ್ಚೊತ್ತಿತ್ತು, ಬೆಳ್ಳಗಿನ ತ್ವಚೆಯ ಫ಼್ರೆಂಚ್ ಜನತೆಗೆ ರಾಣಿಯ ಅಸಾಮಾನ್ಯ ಗುಲಾಬಿ ಬಣ್ಣದ ಪೋರ್ಚೆಲಿನ್ ವರ್ಣ, ನೀಲಿ ಕಣ್ಣುಗಳು, ಹಂಸ ನಡಿಗೆಗಳ ಆಕರ್ಷಣೆ ಮೊದಲ ಕೆಲವು ದಿನ ಬಹಳಷ್ಟಿತ್ತು. ಪಾರ್ಲಿಮೆಂಟಿನ ಯಾವುದೇ ಸಭೆಗಾಕೆ ಹಾಜರಾಗಲಿಲ್ಲ, ಯವುದೇ ರೀತಿಯ ರಾಜಕೀಯ ಚರ್ಚೆಗಳಲ್ಲಿ ಭಾಗವಹಿಸಲಿಲ್ಲ, ಹಾಗೂ ಪ್ರಶಾಸನದ ಯಾವುದೇ ಕಾಗದ ಪತ್ರಗಳನ್ನಾಕೆ ತನ್ನ ಕೈಯಲ್ಲಿ ಹಿಡಿಯಲಿಲ್ಲ.
ಇವೆಲ್ಲದಕ್ಕೆ ಬೇಕಾದ ಸ್ಥಿರಚಿತ್ತ ವೃತ್ತಿ ಹಾಗೂ ಅಪಾರ ಬುದ್ಧಿಮತ್ತೆ ರಾಣಿಯಲ್ಲಿರಲಿಲ್ಲ. ಅವಳ ಚಂಚಲ ಮನಸ್ಸು ಬರೀದೇ ಇಂದ್ರೀಯ ಸುಖಕ್ಕಾಗಿ ಹಾತೊರೆಯುತ್ತಿತ್ತು. ಈ ವಿಧಾನಕ್ಕೆ ಪುಷ್ಟಿ ಕೊಡುವ ಅನೇಕ ಉದಾಹರ‍ಣೆಗಳು ದೊರೆಯುತ್ತವೆ. ರಾಣಿಯ ಚರಿತೆಯನ್ನು ಅಭ್ಯಸಿಸುವಾಗ ನಾನು ಆ ಕಾಲದ ಭೌಗೋಲಿಕ ಪಾರ್ಶ್ವಭೂಮಿಯನ್ನು ಗಮನದಲ್ಲಿಟ್ಟು ಅಭ್ಯಸಿಸಿದಾಗ ನೊಂದಾಯಿಸಿಡುವಂತಹ ಒಂದು ಪ್ರಸಂಗ ನನ್ನ ಗಮನಕ್ಕೆ ಬಂತು. ಅದೇ ಹೆಕ್ಸಾಗೋನ್. ಅಂದರೆ ಷಟ್ಕೋನಿ ಆಕಾರದ ಫ಼್ರಾನ್ಸಿನಲ್ಲಿ ರಾಣಿ ಕೇವಲ ಆರು ಪ್ರಾಂತ್ಯಗಳಲ್ಲೇ ವಿಹರಿಸಿದ್ದಾಳೆ. ಈ ಪ್ರಾಂತ್ಯಗಳು ಮತ್ತು ಆಕೆಯ ವಾಸ್ತವ್ಯ ಇದರ ಪುರಾವೆಯನ್ನು ನಾನು ಫ಼್ರಾನ್ಸನ ನಕ್ಷೆಯಲ್ಲಿ ನಮೂದಿಸಿದ್ದೇನೆ. ಇದರಿಂದ, ತಾನು ಯಾವ ದೇಶದ ರಾಣಿಯೋ ಆ ದೇಶದಲ್ಲಿ ವಾಸಿಸುತ್ತಿರುವ ಜನತೆ, ಅವರ ಸಂಸ್ಕೃತಿ ಹಾಗೂ ಪ್ರಾಂತ್ಯದ ರಚನೆಗಳನ್ನು ತಾನು ತಿಳಿದುಕೊಳ್ಳಬೇಕು ಅನ್ನುವ ಬುದ್ಧಿ ಕೂಡ ರಾಣಿಗಿರಲಿಲ್ಲಲ ಅನ್ನುವುದು ಗೊತ್ತಾಗುತ್ತದೆ.
ಅವಳ ‘ತ್ರಿಯೋನಾ’ ದ ಅರಮನೆ. ಭೋಗವಿಲಾಸವೇ ಮೂರ್ತಿವೆತ್ತ ಪ್ರತೀಕವದು. ಅರಮನೆಯ ಹೊರಗೆ ಜಪಾನಿ ಲ್ಯಾಂಡ್ ಸ್ಕೇಪ್, ನೀಲಿ ಸರೋವರ, ಏಶಿಯಾದಿಂದ ತರಿಸಿದ್ದ ನವಿಲುಗಳು, ಚೈನಾದಿಂದ ಜೋಪಾನವಾಗಿ ತರಿಸಿದ್ದ ಚಿನ್ನದ ಹೊಳಪುಳ್ಳ ಮೀನುಗಳು, ಹಾಗೂ ಆಫ಼್ರಿಕಾದಿಂದ ತರಿಸಿದ್ದ ರಾಜಹಂಸಗಳು ಇವುಗಳಿಂದಾಗಿ ಆ ಅರಮನೆಗೆಗೊಂದು ಸುಂದರ ಮೆರಗು ಬಂದಿತ್ತು. ಅರಮನೆಯ ಗೋಡೆಗಳು, ಫ಼ರ್ನಿಚರ್ ಹಾಗೂ ಕಲಾಕುಸುರಿಯ ವಸ್ತುಗಳನ್ನು ಅತ್ಯಂತ ಜೋಪಾನವಾಗಿ ಮಂಡಿಸಲಾಗಿತ್ತು. ಸಾವಿರ ಕಪಾಟುಗಳಲ್ಲಿ ಚಿನ್ನಾಭರಣಗಳು, ಬಗೆಬಗೆ ವಿನ್ಯಾಸದ ವಸ್ತುಗಳು ತುಂಬಿತುಳುಕುತ್ತಿದ್ದವು. ಸುಚಿತ್ರಾಗೆ ಇವುಗಳಲ್ಲಿ ರಾಣಿಯ ಉಚ್ಚ ಅಭಿರುಚಿ ಕಾಣಿಸುತ್ತದೆ, ನಿಜಕ್ಕೂ ಸುಚಿತ್ರಾಳ ಇನ್ನೋಸೆನ್ಸ್ ಬಗ್ಗೆ ಆಶ್ಚರ್ಯವಾಗುತ್ತದೆ. ಇದರಲ್ಲಿ ರಾಣಿಯ ಸೌಂದರ್ಯ ಸೃಷ್ಟಿ ಎಲ್ಲಿಂದ ಬಂತು? ಎಲ್ಲ ಹಣದ ಮಹಿಮೆ, ದುಡ್ಡು ಬಿಸಾಕಿದರೆ ಬೇಕಾದ್ದು ಸಿಗುತ್ತದೆ ಅನ್ನುವುದೊಂದು ಸುಲಭದ ಸಮೀಕರಣ. ರಾಣಿಯ ಹತ್ತಿರ ಸಾಕಷ್ಟು ದುಡ್ಡಿತ್ತು, ಭಾರಿ ವಸ್ತುಗಳನ್ನು ಖರೀದಿಸಿ ‘ಹಣ ಪಾವತಿಸತಕ್ಕದ್ದು’ ಎಂದು ಬರೆದು ಸಹಿ ಮಾಡಿದರೆ ಮುಗಿಯಿತು, ಆದರೆ ಆ ಹಣ ಪಾವತಿಸಲು ಬಡ ಜನತೆ ಹಗಲು ರಾತ್ರಿ ದುಡಿಯುತ್ತದೆ ಅನ್ನುವುದು ಅವಳಿಗೆ ಅರ್ಥವಾಗುತ್ತಿರಲಿಲ್ಲವೆ?
ಒಂದಂತೂ ನಿಜ ಭಾರತೀಯ ನವಾಬರಂತೆ ರಾಣಿ ತನ್ನ ಒಡವೆಗಳನ್ನು ಬೀರುವಿನಲ್ಲಿ ಕೂಡಿ ಹಾಕಲಿಲ್ಲ, ದಿನದ ಪ್ರತಿ ಪ್ರಹರದಲ್ಲೂ ವಿವಿಧ ರೀತಿಯ ಶೃಂಗಾರ ಮಾಡಿಕೊಂಡು ಅವುಗಳನ್ನು ಉಪಯೋಗಿಸುತ್ತಿದ್ದಳು. ಬೆಳಿಗ್ಗೆ ನಾಲ್ಕು ಘಂಟೆಗೆ ಅರಮನೆಗೆ ಮರಳುತ್ತಿದ್ದ ರಾಣಿ ಸೂರ್ಯ ನೆತ್ತಿಗೇರಿದ ಮೇಲೆಯೇ ಏಳುತ್ತಿದ್ದದ್ದು. ತದನಂತರ ‘ಬೆರ್ತ್ಯಾ ಹಾಗೂ ಲಿಯೋನಾರ್ದ’ ಅನ್ನುವ ತನ್ನ ಡ್ರೆಸ್ ಡಿಸೈನರ್ ಜೊತೆ ಆ ದಿನದ ವಿವಿಧ ಉಡುಪುಗಳ, ಕೇಶಾಲಂಕಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸುತ್ತಿದ್ದಳು. ಲಿಯೋನಾರ್ದ ಮಣ್ಣಿನ ವಿವಿಧ ಮೂರ್ತಿಗಳನ್ನು ತಯಾರಿಸುವಂತೆ ರಾಣಿಯ ಕೂದಲಿನ ಬೇರೆಬೇರೆ ಚಿತ್ರವಿಚಿತ್ರ ವಿನ್ಯಾಸಗಳನ್ನು ರಚಿಸುತ್ತಿದ್ದ, ಮತ್ತೆ ಬಿಚ್ಚುತ್ತಿದ್ದ. ಕೆಲವೊಮ್ಮೆ ಎಂಟು ಗಂಟುಗಳ ರಚನೆ, ಕೆಲವೊಮ್ಮೆ ಕೂದಲುಗಳನ್ನು ಗುಂಗುರು ಮಾಡಿ ಬಿಡುತ್ತಿದ್ದ. ತ್ರಿಯೋನಾದ ಅರಮನೆಯಲ್ಲಿ ಖಾಸಾ ಸಮಾರಂಭಗಳಲ್ಲಿ ಖಾಸಾ ಥೀಮ್ಸಗಳಿರುತ್ತಿದ್ದವು. ಅದಕ್ಕನುಸಾರವಾಗಿ ರಾಣಿಯ ವಸ್ತ್ರವಿನ್ಯಾಸ ಹಾಗೂ ಕೇಶವಿನ್ಯಾಸವಿರುತ್ತಿತ್ತು. ಒಮ್ಮೆಯಂತೂ ಬಹು ಉದ್ದದ ಮೇಣದ ಬತ್ತಿಯನ್ನು ತಲೆಯಮೇಲಿಟ್ಟು ಅದರ ಸುತ್ತ ಕೂದಲನ್ನು ಸುತ್ತಿ ಒಂದು ರೀತಿಯ ಟಾವರನ್ನೇ ರಚಿಸಲಾಗಿತ್ತು. ಇಷ್ಟೆಲ್ಲ ಮಾಡಿದ ಮೇಲೆ ಆ ಟವರನ್ನು ಹೊತ್ತು ಹೋಗುವುದಕ್ಕೆ ಅರಮನೆಯ ಬಾಗಿಲುಗಳು ಸಾಕಷ್ಟು ಎತ್ತರವಾಗಿಲ್ಲ ಅನ್ನುವುದು ಗಮನಕ್ಕೆ ಬಂದು ತಕ್ಷಣವೇ ಕೆಲಸಗಾರರನ್ನು ಕರೆದು ಒಂದೇ ರಾತ್ರಿಯಲ್ಲಿ ಬಾಗಿಲುಗಳನ್ನು ಒಡೆದು ಅವುಗಳ ಚೌಕಟ್ಟನ್ನು ಎತ್ತರಿಸಿದಳು ರಾಣಿ. ಇದೆಲ್ಲವನ್ನು ನೋಡಿಯೂ ಕೂಡ ಎಲ್ಲರೂ ಸುಮ್ಮನಿರಬೇಕಾಯಿತೇ ಹೊರತು ಏನೂ ಮಾಡುವಂತಿರಲಿಲ್ಲ. ರಾಜ್ಯ ಶಕ್ತಿಯ ಎದುರು ಯಾವ ಶಕ್ತಿಯೂ ನಿಲ್ಲಲಾರದು.

ಹೀಗೆ ತನ್ನ ಚಿತ್ರ ವಿಚಿತ್ರ ಶೋಕಿಗಳನ್ನು ಪೂರೈಸಿಕೊಳ್ಳಲು, ಅದಕ್ಕಾಗಿ ಹಣ ಗಳಿಸಲು ರಾಣಿ ಇಸ್ಪಿಟ್ ಆಡಲಾರಾಂಭಿಸಿದಳು. ಹಾಕಿದ ಹಣವನ್ನು ಕಳೆದುಕೊಂಡಿದ್ದೇ ಅಲ್ಲದೆ ಗೆದ್ದ ಹಣವನ್ನೂ ಇದಕ್ಕೇ ಸುರಿದಳು.

ದುದೈವದಿಂದ ಸುಚಿತ್ರ ಈ ಎಲ್ಲ ಸತ್ಯದಿಂದ ದೂರ ಓಡುತ್ತಿದ್ದಾಳೆ. ರಾಣಿಯ ಚರ್ಚೆಯನ್ನು ವಸ್ತುನಿಷ್ಠವಾಗಿ ಮಾಡುವುದನ್ನು ಬಿಟ್ಟು ತುಂಬಾ ಭಾವನಾತ್ಮಕವಾಗಿ ವರ್ತಿಸುತ್ತಿದ್ದಾಳೆ. ಕಳೆದ ಎರಡು ದಿನಗಳಿಂದ ಅಂದರೆ ರಾಣಿಯ ವಾಸ್ತವ್ಯವಿದ್ದ ವರ್ಸಾಯದ ಅರಮನೆ, ಅವಳ ಅಂತಃಪುರ, ಅವಳ ಕತ್ತಲ ಕೋಣೆಗಳನ್ನು ನೋಡಿ ಬಂದಂದಿನಿಂದ ತುಂಬ ಹಳಹಳಿಸುತ್ತಿದ್ದಾಳೆ. ರಾಣಿಯ ಈ ರೀತಿಯ ನಡತೆಗೆ ಕಾರಣಗಳನ್ನು ಹುಡುಕಬೇಕು ಅನ್ನುತ್ತಿದ್ದಾಳೆ. ರಾಣಿಯ ತಪ್ಪು ವರ್ತನೆಯ ಬಗ್ಗೆ ಪೂಷ್ಟಿ ಕೊಡುವ, ಯುಕ್ತಿವಾದವನ್ನು ಮಂಡಿಸುವ ನಿಂಭಂದವನ್ನು ಬರೆಯುವ ಬದಲು ಅವಳ ನಿಜವಾದ ವ್ಯಕ್ತಿತ್ವ, ಅವಳ ನಡತೆಯಿಂದ ಫ಼್ರಾನ್ಸಿನ ಇತಿಹಾಸಕ್ಕೆ ಸಿಕ್ಕ ಹೊಸ ಆಯಾಮ, ತಾತ್ಕಾಲಿಕ ಸಮಾಜ ಜೀವನದ ಮೇಲಾದ ಪರಿಣಾಮಗಳು ಇವುಗಳೇ ನಿಭಂದದ ವಿಷಯಗಳಾಗಬೇಕು ಅನ್ನುವುದು ನನ್ನನಿಸಿಕೆ. ಈ ನಿಭಂದಕ್ಕೆ ಸುಚಿತ್ರಾಳ ಸಹಾಯ ಬಯಸಿ ನಾನು ತಪ್ಪು ಮಾಡಿದೆನೆ?

(ಮುಂದುವರೆಯುವುದು).