Saturday, May 22, 2010

ಅನಂತ ವೇದನೆಯ ರಾಣಿ-೬

ಮೇಡಮ್:

ಇತ್ತೀಚೆಗೆ ಸುಚಿತ್ರ ನನ್ನೊಡನೆ ಸರಿಯಾಗಿ ಮಾತಾಡುತ್ತಿಲ್ಲ, ಪ್ರಭಂದಕ್ಕೆ ಅವಳು ಸೂಚಿಸಿದ ಶೀರ್ಷಿಕೆಯನ್ನು ನಾನು ಒಪ್ಪಿರದ ಕಾರಣಕ್ಕೇ ಇರಬೇಕು. ನಾನಾದರೂ ಏನು ಮಾಡಲಿ? ರಾಣಿ ಸಂಪೂರ್ಣ ಸುಖಿಯಾಗಿದ್ದಳು ಅನ್ನಲಾರೆ ಆದರೆ ‘ಅನಂತ ವೇದನೆಯ ರಾಣಿ’ ಎಂದವಳನ್ನು ಸಂಭೋದಿಸಿ ಅವಳಿಗೆ ಸಂಭಂದಪಟ್ಟ ಪ್ರಭಂದಕ್ಕೆ ಅನ್ಯಾಯ ಮಾಡಿದಹಾಗಾಗುತ್ತದೆ ಎಂದು ನನ್ನನಿಸಿಕೆ. ನಿಯತಿ ರಾಣಿಯ ಸೆರಗಿನಲ್ಲಿ ದುಖಃವನ್ನೇ ಸುರಿದಿದೆ ಅನ್ನುವುದು ಸುಚಿತ್ರಾಳ ಅಭಿಪ್ರಾಯ, ಅವಳ ನಿಷ್ಕರ್ಶೆ ತಪ್ಪು, ತನ್ನ ತಪ್ಪುಗಳನ್ನು ಸುಧಾರಿಸಿಕೊಳ್ಳುವ ಅನೇಕ ಅವಕಾಶಗಳು ರಾಣಿಗೆ ಸಿಕ್ಕಿದ್ದವು, ಆಕೆಯ ತಾಯಿಯ ಚಾಣಾಕ್ಷ ಸೂಚನೆಗಳು ಅವಳಿಗೆ ಆಗ್ಗಿಂದಾಗ್ಗೆ ಸಿಗುತ್ತಿದ್ದವು, ಲೂಯಿಯ ಬೆಂಬಲದಿಂದ ರಾಜ್ಯಕ್ಕೆ ವಾರಸುದಾರ ಸಿಕ್ಕಮೇಲಂತೂ ಪ್ರಜೆಗಳಿಗೆ ರಾಣಿಯ ಮೇಲಿನ ಅಸಂತೋಷ ಕಡಿಮೆಯಾಗಿ ಅವಳ ಎಲ್ಲ ಅಪರಾಧಗಳನ್ನವರು ಕ್ಷಮಿಸಿದ್ದರು. ಆಗಲಾದರೂ ರಾಣಿ ಪರಿಸ್ಥಿಯನ್ನು ಅರ್ಥಮಾಡಿಕೊಂಡು ತ್ರಿಯೋನಾದ ಅರಮನೆ, ನಾಟ್ಯಗೃಹ, ಹಾಗೂ ಆ ಪಾರ್ಟಿಗಳನ್ನು ಬಿಟ್ಟು ಫ಼್ರಾನ್ಸಿಗೆ ಮರಳಿ ಬರಬೇಕಿತ್ತು. ಆದರೆ ರಾಣಿ ಅಕ್ಕಪಕ್ಕದ ಪರಿಸರ ಕ್ಷಣಕ್ಷಣಕ್ಕೂ ಸ್ಫೋಟಕವಾಗುತ್ತಿದೆ ಅನ್ನುವ ಕಲ್ಪನೆಯೂ ಇರದಷ್ಟು ತನ್ನದೇ ಕಲ್ಪನಾ ಲೋಕದಲ್ಲೇ ವಿಹರಿಸುತ್ತಿದ್ದಳು.

ಇಲ್ಲಿ ರಾಣಿಯ ವ್ಯಕ್ತಿತ್ವವನ್ನು ಪರಿಗಣಿಸುವುದರ ಜೊತೆಗೆ ಫ಼್ರಾನ್ಸಿನ ಐತಿಹಾಸಿಕ ಪಾರ್ಶ್ವಭೂಮಿಯನ್ನೂ ಅಭ್ಯಸಿಸುವುದು ಮುಖ್ಯವಾಗಿದೆ.
ವರ್ಷಾನುವರ್ಷ ವಸಾಹತುಗಳ ಮೇಲೆ ರಾಜ್ಯವನ್ನಾಳುತ್ತ ನಿಸರ್ಗ ತನ್ನ ಮುಕ್ತ ಹಸ್ತದಿಂದ ಚೆಲ್ಲಿದ ಸೌಂದರ್ಯವನ್ನು ಬಳಸುತ್ತ ಯುರೋಪಿನಲ್ಲಿ ಇಂಗ್ಲೆಂಡಿನಷ್ಟೆ ಫ಼್ರನ್ಸ ಕೂಡ ಮಹಾಸತ್ತೆಯಾಗಿ ಪರಿಣಮಿಸಿತ್ತು. ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆ ಲಭಿಸಿದ ಈ ದೇಶ ಇತರ ದೇಶಗಳಿಗೆ ಆದರ್ಶ ಕೂಡ. ದೇಶವಿದೇಶದ ರಾಜಪುತ್ರರಿಗೆ ಇತರ ವಿದ್ಯೆಯೊಂದಿಗೆ ಫ಼್ರೆಂಚ್ ಭಾಷೆ ಕಲಿಯಲೇ ಬೇಕೆನ್ನುವ ಕಾನೂನಿದ್ದ ದಿನಗಳವು. ಇಂಗ್ಲೆಂಡ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಇದು ಇವರ ಪೂರ್ವಜರ ಸಾಧನೆ. ಮುಂದಿನ ಪೀಳಿಗೆಯವರು ಈ ಸಾಧನೆಯನ್ನು, ಪರಂಪರೆಯನ್ನು ಮುಂದುವರೆಸಿಕೊಂಡು ಹೋದರೆ ಹಣ, ಅಧಿಕಾರ ಕೈಯಲ್ಲಿರಲು ಸಾಧ್ಯ. ಆದರೆ ದುರ್ದೈವವಶಾತ್ ಹಾಗಾಗದೆ ಮುಂದಿನ ಪೀಳಿಗೆಯ ರಾಜರು ಐಶಾರಾಮದ ಜೀವನ ತಮ್ಮದಾಗಿಸಿಕೊಂಡರು. ಲೂಯಿ ಕೂಡ ಇವರಲ್ಲೊಬ್ಬ. ಜನಹಿತಕ್ಕಿಂತ ಸ್ವಹಿತಕ್ಕೆ ಪ್ರಾಮುಖ್ಯತೆ ಕೊಟ್ಟು ನಿಯೋಜನೆಯ ಅಭಾವ ಹಾಗೂ ಬೇಕಾಬಿಟ್ಟಿ ಕರಗಳನ್ನು ಹೇರಿದ್ದರಿಂದ ಫ಼್ರಾನ್ಸ ಅವನತಿಯತ್ತ ಹೆಜ್ಜೆಯಿಡತೊಡಗಿತು. ರಾಣಿಯ ಕಾಲದಲ್ಲಂತೂ ಫ಼್ರಾನ್ಸನ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ನೆಲ ಕಚ್ಚುವಂತಾಯಿತು. ರೈತರು, ಕಾರ್ಮಿಕರು ಬುದ್ಧಿ ಜೀವಿಗಳು ಕರಗಳನ್ನು ತುಂಬುತ್ತ ಹೋದಂತೆ ಇತ್ತ ರಾಜ ಪರಿವಾರ ಹಾಗೂ ಮೇಲ್ವರ್ಗದ ಧರ್ಮಗುರು ಹಾಗೂ ಶ್ರೀಮಾಂತ ಉಮರಾವ್‌ಗಳು ವಿಲಾಸದಲ್ಲಿ ಮಗ್ನರಾದರು. ಫ಼್ರೆಂಚ್ ಜನತೆಗಂತೂ ಕಷ್ಟ ಪಟ್ಟು ದುಡಿಯುವ ಅಭ್ಯಾಸವಿದ್ದೇಯಿತು. ಈ ಪರಿಸ್ಥಿಯಲ್ಲಿ ವಿಲಕ್ಷಣ ಬುದ್ಧಿಮತ್ತೆಯಿದ್ದ ರೂಸೋ ಹಾಗೂ ವ್ಹಾಲ್ಟೋರಂತಹ ವೈಚಾರಿಕ ರಾಜಕಾರಣಿಗಳು ಎಚ್ಚೆತ್ತುಕೊಂಡು ಜನತೆಯನ್ನು ಎಚ್ಚರಿಸಲಾರಂಭಿಸಿದರು. ಇವರೀರ್ವರ ಎದುರು ಅಮೇರಿಕಾದ ರಾಜ್ಯಕ್ರಾಂತಿಯ ಯಶಸ್ಸಿನ ಉದಾಹರಣೆಯಿತ್ತು. ದೇಶದ ಏಳಿಗೆ ರಾಜನ ಪೂಜೆ ಮಾಡುವುದರಿಂದಾಗದೆ ಸ್ವಾತಂತ್ರ್ಯ, ಸಮತಾ ಹಾವ ಹಾಗೂ ಬಂಧುತ್ವ ಅನ್ನುವ ಮೂರು ತತ್ವಗಳಿಂದಾಗುತ್ತದೆ ಆನುವುದನ್ನವರು ಜನರ ಮನಸ್ಸಿನಲ್ಲಿ ಬಿಂಬಿಸಿದರು. ತಮ್ಮ ಪಕ್ಕದ ರಾಜ್ಯವಾದ ಇಂಗ್ಲೆಂಡ್‌ನ ಜನರ ಸುಂದರ ಚಿತ್ರವನ್ನು ಮನಸ್ಸಿನಲ್ಲಿಟ್ಟು ಮಾನವನಿಗೆ ಮಾನವನಾಗಿ ಬದುಕಲು ಅವಕಾಶ ಕೊಡುವ ಲೋಕಶಾಹಿಯನ್ನು ಫ಼್ರಾನ್ಸನಲ್ಲಿ ತರಲು ಅವರು ಕಟಿಬದ್ದರಾದರು. ಇದೇ ಕಾಲದಲ್ಲಿ ಫ಼್ರೆಂಚ್ ಸಾಮ್ರಾಜ್ಯದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುವ ಸುವರ್ಣಾವಕಾಶ ರಾಣಿಗೆ ಸಿಕ್ಕಿತ್ತು, ಆಕೆಯ ತಾಯಿಯಂತೆ ಆಕೆ ಕೂಡ ತನ್ನ ರಾಜ್ಯದ ವಹಿವಾಟನ್ನು ವಹಿಸಿಕೊಳ್ಳಲಿ ಅನ್ನುವುದನ್ನು ಜನತೆ ಬಯಸಿತ್ತು. ಕಡೆಗೊಂದು ದಿನ ತನ್ನ ಹಿತಚಿಂತಕರ ಸೂಚನೆಯಂತೆ ಆಕೆ ರಾಜ್ಯಸಭೆಯ ಕಾರ್ಯಕಲಾಪಗಳಲ್ಲಿ ಹಾಜರಿರಲು ಪ್ರಾಂಭಿಸಿದಳಾದರೂ ತನ್ನ ಮರ್ಜಿಯಲ್ಲಿದ್ದವರಿಗೆ ಅವರಿಚ್ಛೆಯಂತೆ ರಾಜ್ಯದ ಕೆಲವು ಮುಖ್ಯ ಹುದ್ದೆಗಳನ್ನು ಹಂಚಿ ದೊಡ್ಡ ತಪ್ಪು ಮಾಡಿದಳು. ಇದು ಫ಼್ರನ್ಸ ವಿನಾಶದ ದೆಸೆಯಲ್ಲಿ ಇಟ್ಟ ಮೊದಲ ಹೆಜ್ಜೆ. ಇದರಿಂದ ನಿಜವಾಗಿಯೂ ಕಳಕಳಿಯಿಂದ ಜನತೆಯನ್ನು ಪ್ರತಿನಿಧಿಸುವ ಕಾರ್ಯಕರ್ತರು ಪಕ್ಕಕ್ಕೆ ತಳ್ಳಲ್ಪಟ್ಟರು.
ಕೆಲವೇ ದಿನಗಳಲ್ಲಿ ಕಷ್ಟಪಟ್ಟು ಬೆವರು ಸುರಿಸುವ ಜನತೆಗೆ ನಮ್ಮ ರಾಜ ಮೂರ್ಖ, ರಾಣಿ ವಿಲಾಸಿನಿ, ಈ ರಾಷ್ಟ್ರ ಸಾಲದ ಹೊರೆಯಡಿಯಿದ್ದರೂ ಅರಮನೆಯಲ್ಲಿ ಬಣ್ಣಬಣ್ಣದ ಪಾರ್ಟಿಗಳು ನಡೆಯುತ್ತಿವೆ ಅನ್ನುವ ಸೂಕ್ಷ ವಿಷಯಗಳು ಅರ್ಥವಾಗತೊಡಗಿದವು. ಇದೇ ಕಾಲದಲ್ಲಿ ರಾಣಿ ತನ್ನ ತಮ್ಮ ಜೋಸೆಫ಼್ ನ ಕಷ್ಟ ಸಮಯದಲ್ಲಿ ಸಹಾಯ ಮಾಡಲು ಲಕ್ಷಕ್ಕೂ ಅಧಿಕ ಬೆಲೆಯುಳ್ಳ ಚಿನ್ನದ ನಾಣ್ಯಗಳನ್ನು ಗುಪ್ತ ಮಾರ್ಗವಾಗಿ ಆಸ್ಟ್ರೀಯಾಗೆ ಕಳಿಸಿದಳು. ಇದರಿಂದ ಕಾಮಾಂಧ ಹಾಗೂ ವ್ಯಸನಾಧೀನಳಾದ ರಾಣಿಯ ಕಿರೀಟದಲ್ಲಿ ದೇಶದ್ರೋಹದ ಗರಿಯನ್ನೂ ಅಳವಡಿಸಲಾಯಿತು. ದಿನೇ ದಿನೇ ಜನತೆಯ ಮನಸ್ಸಿನಲ್ಲಿ ಸಂತೋಷ ಹೊಗೆಯಾಡಲಾರಂಭಿಸಿತ್ತು. ಅಮೇರಿಕಾದಿಂದ ಮರಳಿದ ಫ಼್ರಾನ್ಸಿನ ರಾಜಕಾರಣಿಗಳು ವಿಭಿನ್ನವಾದ ಎಂದೂ ಕೇಳಿರದ ವಾರ್ತೆಗಳನ್ನು ತಂದಿದ್ದರು. ‘ಅಮೇರಿಕಾದಲ್ಲಿ ರಾಜಾ-ರಾಣಿಯರೇ ಇಲ್ಲವಂತೆ, ಶ್ರೀಮಂತರೂಯಿಲ್ಲ., ಉಮರಾವ್‌ರೂ ಇಲ್ಲ, ಧರ್ಮಗುರುಗಳ ವರ್ಚಸ್ಸಿಲ್ಲ, ಅಲ್ಲಿ ಕೇವಲ ನಾಗರೀಕರಿರುತ್ತಾರೆ,ಅವರು ಕಷ್ಟಪಟ್ಟು ದುಡಿದದ್ದನ್ನು ತಮಗಾಗಿ ಹಾಗೂ ಸಮಾಜಕ್ಕಾಗಿ ಉಪಯೋಗಿಸುತ್ತಾರೆ, ಅಲ್ಲಿಯೂ ಬಡತನವಿದೆ ಆದರೆ ಜನ ಸುಖವಾಗಿ ತಿಂದುಂಡು ಸ್ವತಂತ್ರವಾಗಿದ್ದಾರೆ, ಅವರ ಬೆವರಿಗೆ ಸುಗಂಧವಿದೆ, ಅವರ ಕಷ್ಟಕ್ಕೆ ಬೆಲೆಯಿದೆ’ ಅನ್ನುವ ಅನೇಕ ವಿಷಯಗಳು ಫ಼್ರಾನ್ಸನ ಜನತೆಯ ಕಿವಿ ತಲುಪುತ್ತಿದ್ದವು. ‘ಡಿಗ್ನಿಟಿ ಆಫ಼್ ಲೇಬರ್’ ನ ಪರಿಕಲ್ಪನೆ ಪ್ರಪ್ರಥಮವಾಗಿ ಫ಼್ರಾನ್ಸ ಜನತೆಯ ಮನಸ್ಸು ತಟ್ಟಿತು. ರೂಸೋ ತನ್ನ ಸೋಷಿಯಲ್ ಕಾಂಟ್ರಾಕ್ಟನಿಂದ ಅದನ್ನು ತುಂಬ ಪ್ರಭಾವಶಾಲಿಯಾಗಿ ಎತ್ತಿ ಹಿಡಿದ. ರಾಜಾ ರಾಣಿಯರ ಹುದ್ದೆಯ ಅಸ್ತಿತ್ವವನ್ನು ಮೊದಲ ಬಾರಿಗೆ ವಿರೋಧಿಸಲಾಯಿತು. ಜನತೆಯ ಪ್ರತಿನಿಧಿತ್ವವನ್ನು ಸ್ವಿಕರಿಸಿದ `ನ್ಯಾಷನಲ್ ಅಸೆಂಬ್ಲಿಯ' ಕೆಲಸಗಳು ದಿನೇದಿನೇ ಆಕ್ರಮವಾಗುತ್ತ ಹೋದರೂ ರಾಣಿಗೆ ಇದ್ಯಾವುದರ ಸುಳಿವು ಕೂಡ ಇರಲಿಲ್ಲ. ದೀರ್ಘ ನಿದ್ದೆಯಲ್ಲಿರುವ ಭೂಮಿಗತ ಕಪ್ಪೆ ಕೂಡ ಮಳೆಯ ಆಗಮನದ ಸೂಚನೆಯನ್ನು ಗುರುತಿಸಿ ಭೂಮಿಯ ಮೇಲೆ ಬರುತ್ತದೆ ಅದರೆ ರಾಣಿ ಮಾತ್ರ ರಾತ್ರಿ ಹತ್ತರ ನಂತರ ಯಾವುದೇ ಪತ್ರಗಳನ್ನು ಅಥವಾ ಸಂದೇಶಗಳನ್ನು ದೂತರು ಒಳಗೆ ತರುವಂತಿಲ್ಲ ಅನ್ನುವ ಕಟ್ಟಪ್ಪಣೆಯನ್ನು ಹೊರಡಿಸಿದ್ದಳು. ಕ್ರಾಂತಿಕಾರರು ಬ್ಯಾಸಿಲ್‌ನ ಕೋಟೆಯನ್ನು ವಶಪಡಿಸಿಕೊಂಡು ಅಲ್ಲಿಯ ಸರದಾರನ ತಲೆ ತುಂಡರಿಸಿ ಅದನ್ನು ಪ್ಯಾರಿಸ್‌ನ ಗಲ್ಲಿಗಲ್ಲಿಗಳಲ್ಲಿ ವಿಜಯ ಪತಾಕೆಯಂತೆ ಮೆರವಣಿಗೆ ಮಾಡಿದರೂ ಈ ವಾರ್ತೆ ತರುವ ದೂತರು ಮಾತ್ರ ಅರಮನೆಯ ಹೊರಗೆ ಬೆಳಗಾಗುವ ಪ್ರತೀಷೆಯಲ್ಲಿ ನಿಂತಿದ್ದರು. ಎಷ್ಟು ನಾಚಿಕೆಗೇಡುತನ. ಇಷ್ಟೆಲ್ಲ ನಡೆದರೂ ರಾಣಿ ಮಾತ್ರ ತನ್ನದೇ ಇನ್ಸ್ಟಿಂಕ್ಟ ಮೇಲೆ ಅವಲಂಬಿತಳಾಗಿದ್ದಳು. ಜನ್ಮದಿಂದ ಅಥವಾ ಕರ್ಮದಿಂದ ಸಿಗದ ಆದರೆ ಕೇವಲ ಹಣೇಬರಹದಿಂದ ಸಿಕ್ಕಿದ್ದ ರಾಣಿತ್ವದ ಮೇಲೆ ತಳಊರಿದ್ದಳು. ಕ್ರಾಂತಿ, ಮಾನವೀಯ ಹಕ್ಕು, ಲೇಖನ ಸ್ವಾತಂತ್ರ್ಯ, ಈ ಶಬ್ದಗಳನ್ನಾಕೆ ಎಂದೂ ಕೇಳಿರಲೇಯಿಲ್ಲ. ನಾನು ಆಸ್ಟ್ರಿಯನ್ ಆದ್ದರಿಂದ ನನ್ನನ್ನು ದ್ವೇಶಿಸುತ್ತಿರುವ ಇವರು ತಲೆಹಿಡುಕರು ಅನ್ನುವ ದೃಷ್ಟಿಯಿಂದಲೇ ಆಕೆ ಕ್ರಾಂತಿಕಾರರನ್ನು ಕಂಡಳು. ಅವಳಂದುಕೊಂಡಂತೆ ಈ ವರ್ಗ ಅಷ್ಟು ತಲೆಹಿಡುಕು ಅಥವಾ ಧೈರ್ಯಹೀನವಾಗಿರಲಿಲ್ಲ, ಬಡವರಾಗಿದ್ದರೂ ಸತ್ವಹೀನರಾಗಿರಲಿಲ್ಲ, ಅವರ ಪ್ರತಿನಿಧಿಗಳು ಬುದ್ಧಿವಂತರೂ ಮುತ್ಸದ್ದಿಗಳೂ ಆಗಿದ್ದರು. ಮಿರಾಬೋ, ಲಾಫ಼ಾಯತ್, ಲುತ್ಸಾಲೋ, ಮೋರಾ ಇವರುಗಳು ಕಾರ್ಯಕರ್ತರಲ್ಲಿ ಮುಖ್ಯರು.
ಮುಂದೆ ಈ ಕ್ರಾಂತಿಯನ್ನು ಮಟ್ಟ ಹಾಕಲು ರಾಣಿ ಸಾಕಷ್ಟು ನಿಕೃಷ್ಟವಾದ ಕೆಲಸ ಮಾಡಿದಳು. ಕ್ರಾಂತಿಕಾರರನ್ನು ತೊಲಗಿಸಲು ರಾಣಿ ಹೊರದೇಶದಿಂದ ಸೈನ್ಯ ತರಿಸಿ ಅವರ ಹೊಟ್ಟೆ ಪಾಡಿಗಾಗಿ ನೀರಿನಂತೆ ಹಣ ಖರ್ಚು ಮಾಡಿದಳು. ದೇಶದಲ್ಲಿ ಜೀವನಾವಶ್ಯಕ ವಸ್ತುಗಳು ಕಾಣೆಯಾಗುತ್ತಿದ್ದುವಾದರೆ ಅರಮನೆಯಲ್ಲಿ ಬಾಡಿಗೆಯ ಸೈನಿಕರಿಗಾಗಿ ಉತ್ತನ ಊಟ, ಸಾರಾಯಿ ಸರಬರಾಜಾಗುತ್ತಿತ್ತು. ಕ್ರಾಂತಿಯನ್ನು ಮಟ್ಟ ಹಾಕಲು ರಾಣಿ ಎಲ್ಲ ತಯಾರಿಯನ್ನು ಪೂರ್ಣಗೊಳೊಸಿದಳು, ರಕ್ತದ ಕಾಲುವೆಯೇ ಹರಿಯಿತು, ಏನೇ ಬಂದರೂ ಸ್ವಾತಂತ್ರ್ಯ ಅಥವಾ ಸಾವು ಅನ್ನುವ ಜಿದ್ದಿನಿಂದ ಸಮಸ್ತ ಫ಼ೆಂಚ್ ಜನತೆ ಟೊಂಕ ಕಟ್ಟಿ ನಿಂತಿತು. ಜನತೆಯ ಕ್ಷೋಭೆಯ ಎದುರು ರಾಜಾ ರಾಣಿಯರಿಗೆ ತಲೆಬಾಗಿಸಲೇ ಬೇಕಾಯಿತು. ಈರ್ವರನ್ನು ಬಂಧಿಸಿ ಪ್ಯಾರಿಸ್‌ನಲ್ಲಿಟ್ಟಾಗ ರಾಣಿ ಅಲ್ಲಿಂದ ಓಡಿ ಹೋಗುವ ಪ್ರಯತ್ನದಲ್ಲಿ ಲಂಚ ಕೊಡಮಾಡಿದಳು. ಹೊರ ದೇಶದ ಶತೃಗಳೊಂದಿಗೆ ಸಂಧಾನ ನಡೆಸಿಯೂ ವಿಫ಼ಲಳಾದಳು. ಇದೆಲ್ಲದರ ಕೊನೆ ಅವಳ ವಧೆಯಲ್ಲಾಯಿತು.
ರಾಜಾ ರಾಣಿಯರ ವಧೆಯಿಂದ ಹುಕುಮಶಾಹಿಯ ಅಂತ್ಯವಾಗಿತ್ತಲ್ಲದೆ ಈ ಕಠೋರ ನಿರ್ಣಯದಲ್ಲಿಯೇ ಫ಼್ರಾನ್ಸಿನ ಭವಿಷ್ಯ ಅವಲಂಬಿಸಿತ್ತು. ಈ ನಿಭಂದದ ನನ್ನ ನಿಲುವು ಯಾವುದೇ ಪಕ್ಷದ ಧೋರಣೆಯಲ್ಲ, ಅದು ವಸ್ತು ಸ್ಥಿಯ ಮೇಲೆ ಬಹುಶಃ ಫ಼್ರಾನ್ಸ ಮಾಡಿದ ಪ್ರಗತಿಯ ಮೇಲೆ ಆಧರಿಸಿದೆ.
(ಮುಂದುವರೆಯುತ್ತದೆ)

5 comments:

  1. akshata.,

    ಅದೇಕೋ ಒಂದು ಸಾಲು ಅರ್ಧ ಮುಚ್ಚಿಹೋಗಿರುವುದರಿಂದ ಓದಲಾಗಲಿಲ್ಲ..

    ReplyDelete
  2. ಚೆನ್ನಾಗಿದೆ. ಆದರೆ ಅಕ್ಷರಗಳು ಸರಿಯಾಗಿ ಓದಲಾಗುತ್ತಿಲ್ಲ, ಅನೇಕ ಕಡೆ junk characterಗಳು ಅಡ್ಡಬಂದು ಕಿರಿಕಿರಿ ಆಗುತ್ತದೆ. ನೀವು ಬರಹ, ಲೋದ್ಯಾಶಿ (www.lodyaashi.com - ಇವರೂ ಕೂಡ ಕನ್ನಡ ಬ್ಲಾಗಿಗರು), www.kannadaslate.com ನಂತಹ ಸಾಫ್ಟ್‍ವೇರ್/ಸೈಟ್‍ಗಳನ್ನು ಬಳಸಿ

    ReplyDelete
  3. ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ ದೀಪಸ್ಮಿತ, ನೀವು ಕೊಟ್ಟಿರುವ ಲಿಂಕನ್ನ ಟ್ರೈ ಮಾಡ್ತಿನಿ.
    ಅಕ್ಷತ.

    ReplyDelete
  4. ಅಕ್ಷತಾವ್ರೇ...ದೀಪಸ್ಮಿತಾ ಹೇಳಿದ ಮಾತನ್ನೇ ನಾನು ಬಹಳ ಹಿಂದೆ ನಿಮ್ಮ ಬ್ಲಾಗಿನಲ್ಲಿ ಕಾಮೆತ್ತಿಸಿದ್ದೆ...(ಕಾಮೆಂಟ್ ಹಾಕಿದ್ದೆ ಅನ್ನೋದಕ್ಕೆ ನನ್ನದೇ ಪ್ರಯೋಗ)....ಅಕ್ಷರಗಳು ಬಹಳ ಚಿಕ್ಕವು ಅದರಲ್ಲೂ ೩೫+ ಇರೋರಿಗೆ ಬಹುಶಃ ಕಾನದು ಕನ್ನಡಕ ಉಪಯೋಗಿಸದೇ...ಹಹಹ...
    ಆದ್ರೆ ಕಥೆಚನ್ನಾಗು ಮೂಡಿ ಬರ್ತಿದೆ...ಅಕ್ಷರ ಗಾತ್ರ ಹೆಚ್ಚಿಸಿ.

    ReplyDelete