Wednesday, December 29, 2010

ಅನೇಕ ತಿಂಗಳುಗಳಿಂದ ನನ್ನ ಪಿಸಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಹಾಗಾಗಿ ಬ್ಲಾಗ್ ಬರೆಯಲಾಗಲಿಲ್ಲ. ಈಗ ಮುಂದುವರೆಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಮೊದಲಿನಂತೆಯೇ ನನಗೆ ಸಿಗುತ್ತದೆ ಅನ್ನುವ ಭರವಸೆಯಿದೆ.

Thursday, June 10, 2010

ಅನಂತ ವೇದನೆಯ ರಾಣಿ-೭

ರಾಣಿ:

ಫ಼ರ್‌ಸಾನ್! ಫ಼ರ್ಸಾನ್!.... ಈ ಗಾಢಾಂಧಕಾರ ಕೋಣೆಯಲ್ಲಿ ನನ್ನ ಧ್ವನಿ ಪ್ರತಿಧ್ವನಿಸಿ ದೈತ್ಯನ ಹಾಗೆ ನನ್ನ ಮೇಲೆ ದಾಳಿ ನಡೆಸುತ್ತಿರುವಂತಿದೆ. ಮಧ್ಯರಾತ್ರಿ ಫ಼ರ್‌ಸಾನ್‌ನ ಹೆಸರು ಕೂಗುತ್ತ ಹೆದರಿ ಏಳುವುದು ಇದು ನಾಲ್ಕನೆಯ ಸಲ. ಅವನ ನೆನಪು ತುಂಬ ಕಾಡುತ್ತಿದೆ. ಎಲ್ಲಿರಬಹುದು ಅವನು? ಏನು ಮಾಡುತ್ತಿರಬಹುದು? ಈಗಷ್ಟೆ ಕನಸಿನಲ್ಲಿ ಕಾಣಿಸಿಕೊಂಡಿದ್ದನಲ್ಲವೆ? ಅವನ ಕೈಯಲ್ಲಿದ್ದ ವಜ್ರದ ಹಾರವನ್ನು ಕಂಡೆ. ನಿನ್ನೆ ಸಾಯಂಕಾಲವೇ ಜೈಲಿನ ಅಧಿಕಾರಿಗಳು ನನ್ನ ಮೈಮೇಲಿರುವ ಅಳಿದುಳಿದ ಆಭರಣಗಳನ್ನೂ ಕಳಚಿಕೊಂಡು ಹೋದರು. ಈ ಕಲ್ಲಿನ ಕೊಠಡಿಯಲ್ಲಿ ರವಾನಿಸಲ್ಪಟ್ಟ ಮಹತ್ವದ ಅಪರಾಧಿ ನಾನು. ತನ್ನ ಯಾವುದೇ ವ್ಯಯಕ್ತಿಕ ವಸ್ತುಗಳನ್ನು ತನ್ನ ಬಳಿ ಇಟ್ಟುಕೊಳ್ಳುವ ಹಕ್ಕಿಲ್ಲದವಳು. ನನ್ನಲ್ಲಿದ್ದ ವಜ್ರ ವೈಡೂರ್ಯಗಳನ್ನವರು ಎಂದೋ ಲೂಟಿ ಮಾಡಿದ್ದರು. ಕತ್ತಿನಲ್ಲಿದ್ದ ಚಿನ್ನದ ಚೈನ್ ಇದ್ದ ಗಡಿಯಾರ, ಅಮ್ಮ ಕೊಟ್ಟಿದ್ದು ಅದು. ಕೈಬೆರಳಲ್ಲಿದ್ದ ನಾಜೂಕಿನ ಮಾಣಿಕ್ಯದ ಉಂಗುರ, ಕಿವಿಯ ಓಲೆಗಳು ಇವೆಲ್ಲವುಗಳ ಮೇಲಿಂದ ನಾನು ನೀರು ಬಿಡಬೇಕಾಯಿತು. ಆಭೂಷಣಗಳಿಲ್ಲದೆ ಎಲ್ಲ ಖಾಲಿಖಾಲಿ ಅನಿಸಿದರೂ ಹಗುರವೆನಿಸುತ್ತಿದೆ.

ಯೌವ್ವನದ ಹೊಸ್ತಿಲಿನಲ್ಲಿದ್ದಾಗ ನಾನು ಒಡವೆಗಳ ಹುಚ್ಚಿಯಾಗಿದ್ದೆ. ಆದರೆ ಫ಼ರ್‌ಸಾನ್ ಕೊಟ್ಟ ವಜ್ರದ ಸಪ್ತರ್ಷಿ ಸರದ ಬೆಲೆ ಯಾವುದಕ್ಕೂ ಸಮಾನವಲ್ಲ. ಆ ಸರ ಇಂದಿಗೂ ನನ್ನ ಕಣ್ಣೆದುರು ನಳನಳಿಸುತ್ತಿದೆ. ಸರ ಚಿಕ್ಕದಾಗಿದ್ದರೂ ಅದರಲ್ಲಿ ಎಣಿಸಿ ಸುಸ್ತಾಗುವಷ್ಟು ವಜ್ರಗಳಿದ್ದವು. ನಾನು ಆ ಸರದಲ್ಲಿ ಕರಗಿ ಹೋಗುತ್ತ,

‘ಫ಼ರ್ಸಾನ್, ನನಗಾಗಿ ಯಾಕಿಷ್ಟು ಬೆಲೆಬಾಳುವ ಸರ?’ ಅಂದಿದ್ದೆ. ಅದಕ್ಕಾತ ನಗುತ್ತ, ‘ಇಂದಿನವರೆಗೆ ನಾನು ನೀನು ಎಷ್ಟು ಸಲ ಭೇಟಿಯಾಗಿದ್ದೆವೆಯೋ ಅಷ್ಟು ವಜ್ರಗಳಿವೆ ಈ ಸರದಲ್ಲಿ’ ಅಂದಿದ್ದ. ಅವನ ಮಾತು ಕೇಳಿ ಕಣ್ಣೀರಿಳಿಸುತ್ತ ಅವನನ್ನೇ ನೋಡುತ್ತ ನಿಂತೆ. ಕೆಲವೇ ದಿನಗಳಲ್ಲಿ ನಾವು ಒಬ್ಬರಿಗೊಬ್ಬರು ಇಷ್ಟು ಹತ್ತಿರವಾದೆವೆ? ಅನ್ನುವ ಪ್ರಶ್ನ್ನೆಯ ಉತ್ತರಕ್ಕಾಗಿ ನಾನು ಅವನ ಕಣ್ಣಲ್ಲಿ ಇಣುಕಲು ಪ್ರಯತ್ನಿಸಿದೆ. ವಜ್ರದ ಹೊಳಪಿನಿಂದಲೋ ಅಥವಾ ಅವನ ಕಣ್ಣಿನ ಹುಟ್ಟು ತೇಜಸ್ಸೋ ಏನೋ ಅವನ ಕಣ್ಣುಗಳು ಹೊಳೆಯುತ್ತಿದ್ದವು. ನನ್ನ ಇಡೀ ಜೀವನದಲ್ಲಿ ನಾನು ಸಂಪೂರ್ಣವಾಗಿ ನಂಬಿದ್ದ ಮನುಷ್ಯ ಫ಼ರ್‌ಸಾನ್. ಈತ ಎಂದೂ ನನಗೆ ದ್ರೋಹ ಬಗೆಯಲಿಲ್ಲ. ಉಚ್ಚ ಮನೆತನದ, ಉಚ್ಚ ಶಿಕ್ಷಣವುಳ್ಳ, ತೀಕ್ಷ್ಣ ಬುದ್ಧಿಮತ್ತೆಯುಳ್ಳ, ಗ್ರೀಕ್ ದೇವರ ಲಕ್ಷಣವುಳ್ಳ ಸ್ವೀಡನ್ನಿನ ಈ ಸುಂದರ ಉಮ್‌ರಾವ್‌ನ ಪರಿಚಯ ಒಂದು ಪಾರ್ಟಿಯಲ್ಲಾಯಿತು. ಆ ಪರಿಚಯ ಸ್ನೇಹದಲ್ಲಿ ತದನಂತರ ಪ್ರೀತಿಯಲ್ಲಿ ಪರಿವರ್ತನೆಯಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕ್ರಾಂತಿಯ ಕಾಲದಲ್ಲಿ ನಾನೀತನ ಭುಜದ ಮೇಲೆ ತಲೆಯಿಟ್ಟು ಅತ್ತಿದ್ದೇನೆ. ಇವನೇ ಅವನು ನನ್ನ ಜೀವಾಳ. ಶಾರೀರಿಕವಾಗಿ ನಾವು ಬಹಳ ಕಡಿಮೆ ಸಲ ಸೇರಿದ್ದೆವು ಏಕೆಂದರೆ ಅದಕ್ಕಿಂತ ಶ್ರೇಷ್ಠವಾದ ನಮ್ಮಿಬ್ಬರ ಆತ್ಮ ಮಿಲನ ಎಂದೋ ನಡೆದು ಹೋಗಿತ್ತು. ಶುಧಃ ಅಂತಃಕರಣದಿಂದ ಪ್ರೀತಿಸಿದ ಈ ಫ಼ರ್‌ಸಾನ್ ನನ್ನ ಜೀವನದ ಮೊದಲ ಹಾಗೂ ಕೊನೆಯ ಪುರುಷ. ಮುಂದೆ ಯಾರನ್ನೂ ನಾನು ನನ್ನ ಸನಿಹ ಸುಳಿಯಗೊಡಲಿಲ್ಲ ಅನ್ನುವುದು ನಿಜವಾದರೂ ನನ್ನ ಯೌವ್ವನದ ಗೆಳೆಯ ಮೋಝಾರ್ತನ ನೆನಪನ್ನು ನಾನೆಂದೂ ನನ್ನಿಂದ ಬೇರ್ಪಡಿಸಲಿಲ್ಲ. ಕಳೆದ ಅನೇಕ ತಿಂಗಳುಗಳಿಂದ ಫ಼ರ್ಸಾನ್‍ನನ್ನು ನೋಡಲು ಕೂಡ ಸಾಧ್ಯವಾಗಿಲ್ಲ.

ಆ ಸಾಯಂಕಾಲ ನನಗೆ ಚನ್ನಾಗಿ ನೆನಪಿದೆ. ಆಗಷ್ಟೆ ಫ಼ರ್ಸಾನ್ ನನಗೆ ಸರ ಕೊಟ್ಟು ಹೋಗಿದ್ದ. ಬರುವ ವಾರದಲ್ಲಿ ನಾವು ಮತ್ತೆ ಭೇಟಿಯಾಗುವವರಿದ್ದೆವು. ಅದೇ ಯೋಚನೆಯಲ್ಲಿ ನಾನು ಉದ್ಯಾನವನದಲ್ಲಿ ವಿಹರಿಸುತ್ತಿದ್ದೆ. ಚಳಿಗಾಲದ ಆಗಮನದ ಸುಳಿವು ಕೊಡುತ್ತ ತಣ್ಣನೆಯ ಗಾಳಿ ಬೀಸುತ್ತಿತ್ತು. ಗಗನದ ಬೂದು ಬಣ್ಣ ನನ್ನ ತಿಳಿನೀಲಿ ಸರೋವರದಲ್ಲೂ ತೇಲುತ್ತಿತ್ತು. ಬಣ್ಣಬಣ್ಣದ ಮೀನುಗಳು ನಾನು ಹಾಕಿದ ಆಹಾರ ತಿನ್ನಲು ನೀರಿನ ಮೇಲ್ಭಾಗಕ್ಕೆ ಬರುತ್ತಿದ್ದವು. ಅಕ್ಕಪಕ್ಕದಲ್ಲಿ ನವಿಲು ನೃತ್ಯ ಹಂಸದ ವಯ್ಯಾರ ನಡಿಗೆ ನಡೆದಿತ್ತು. ಲಿಲ್ಲಿ ಗಿಡ ಆ ಋತುವಿನ ಕೊನೆ ಹೂ ಬಿಟ್ಟಿತ್ತು. ಇದನ್ನೆಲ್ಲ ನೋಡಿ ನನಗೆ ಅಳು ಬಂತು, ಈ ಮೀನುಗಳಂತೆ, ಹಾರಾಡುವ ಹಕ್ಕಿಗಳಂತೆ ನನ್ನ ಜೀವನವೂ ಶಾಂತ, ನಿರಾಳ, ನಿಶ್ಚಿಂತತೆಯಿಂದ ಕೂಡಿರಬೇಕಿತ್ತು ಅನಿಸಿತು. ಅಷ್ಟರಲ್ಲಿ ಏನೋ ಗದ್ದಲ ಕೇಳಿಸಿತು. ನನ್ನ ನಿಷ್ಠಾವಂತ ಸೇವಕ ಓಡಿ ಬಂದು ‘ಕ್ರಾಂತಿಕಾರರೆಲ್ಲರೂ ಅರಮನೆಯ ಮೇಲೆ ದಂಡೆತ್ತಿ ಬರುತ್ತಿದ್ದಾರೆ, ನಾನು ಇಲ್ಲಿಂದ ಓಡಿ ಹೋಗತಕ್ಕದ್ದು’. ಅನ್ನುವ ಸಂದೇಶವನ್ನು ತಂದಿದ್ದ. ಅದನ್ನು ಕೇಳಿದ್ದೆ ನಾನು ಹುಚ್ಚಿಯ ಹಾಗೆ ಓಡತೊಡಗಿದೆ. ಆದರೆ ಅದು ಹೇಗೋ ಹುಲ್ಲಿನಲ್ಲಿ ಕಾಲು ಸಿಕ್ಕಿ ಬಿದ್ದುಬಿಟ್ಟೆ. ಹಾಗೇ ಹಿಂತಿರುಗಿ ನೋಡಿದೆ. ನಾನೆ ಕಟ್ಟಿ ಬೆಳೆಸಿದ್ದ ನನ್ನ ಅತ್ಯಂತ ಪ್ರೀತಿಯ ತ್ರಿಯೋನಾದ ನಾಟ್ಯಗೃಹ, ನನ್ನ ಅರಮನೆ, ಆ ಲ್ಯಾಂಡ್ ಸ್ಕೇಪ್, ನೀಲಿ ಸರೋವರ, ಅದರಲ್ಲಿದ್ದ ಚಿನ್ನದ ಹೊಳಪಿದ್ದ ಮೀನುಗಳು, ಆ ಪರಿಸರ, ಎಲ್ಲವನ್ನೂ ಕಣ್ತುಂಬ ನೋಡುತ್ತ ಇದ್ದುಬಿಟ್ಟೆ. ಬಹುಶಃ ನಾನಿವುಗಳನ್ನು ಮತ್ತೆ ನೋಡುತ್ತೇನೋ ಇಲ್ಲವೋ ಅನಿಸಿತು. ಹಾಗಾದರೆ ಆಹಾರ ಹಾಕುವವರಿಲ್ಲದೆ ಈ ನನ್ನ ಮೀನುಗಳ ಗತಿ? ನಾಟಕದ ರಿಹರ್ಸಲ್ ಯಾರು ನೋಡಿಕೊಳ್ಳುತ್ತಾರೆ? ಎಂದೆಲ್ಲ ಯೋಚಿಸುತ್ತಿದ್ದಂತೆ,

‘ರಾಣಿ ಸಾಹೇಬರೆ, ಬೇಗ ಹೊರಡಿ,’ ಎಂದು ಆ ಸೇವಕ ದೀನನಾಗಿ ಬೇಡಿಕೊಂಡ.

‘ಪರಮೇಶ್ವರ, ನನ್ನ ಕನಸುಗಳನ್ನು ನಿನ್ನ ಕೈಗೆ ಒಪ್ಪಿಸುತ್ತಿದ್ದೇನೆ, ಅವುಗಳನ್ನು ಜೋಪಾನ ಮಾಡು’, ಎಂದು ನನ್ನ ಮನಸ್ಸು ರೋದಿಸಿತು.

ಕೊನೆಗೂ ಜನತೆಗೆ ಅವರ ಪ್ರತಿಫ಼ಲ ಸಿಕ್ಕಿತು. ನಮ್ಮನ್ನು ಸೆರೆ ಹಿಡಿದು ಎತ್ತಿನ ಗಾಡಿಯಲ್ಲಿ ಫ಼್ರಾನ್ಸಗೆ ತಂದಾಗ ಎಲ್ಲರೂ ವಿಜಯೋತ್ಸಾಹದಿಂದ ಮೈಮರೆತು ಕುಣಿಯುತ್ತಿದ್ದರು.

ಲುಯಿಲರಿಯ ಅರಮನೆಗೆ ನಮ್ಮ ರವಾನೆಯಾಯಿತು. ಆ ಅರಮನೆಯ ಅವಸ್ಥೆ ಹೇಳತೀರದು, ನಮ್ಮ ಗೈರುಹಾಜರಿಯಲ್ಲಿ ಫ಼ರ್ನಿಚರ್ ಮತ್ತಿತರ ಬೆಲೆಬಾಳುವ ಸಾಮಾನುಗಳ ಲೂಟಿಯಾಗಿತ್ತು. ಒಂದು ಕಾಲದಲ್ಲಿ ವೈಭವದಿಂದ ಮೆರೆದ ಅರಮನೆ ಈಗ ದನದ ದೊಡ್ಡಿಯಂತೆ ತೋರುತ್ತಿತ್ತು.
`ಶೀ...! ನಾವು ಇಂತಹ ಹೊಲಸು ಜಾಗದಲ್ಲಿರಬೇಕೆ?’ ಯುವರಾಜರು ನನ್ನನ್ನು ಅಲುಗಾಡಿಸುತ್ತ ಕೇಳುತ್ತಿದ್ದರು. ಅವರ ಪ್ರಶ್ನೆಯಿಂದ ನನ್ನುಸಿರು ಕಟ್ಟಿದಹಾಗಾಯ್ತು. ಏನು ಉತ್ತರಿಸಲಿ ನನ್ನ ಕರುಳ ಕುಡಿಗೆ?
‘ಹೌದು, ನಾವೀಗ ಇದೇ ಜಾಗಕ್ಕೆ ಒಗ್ಗಿಕೊಳ್ಳಬೇಕು’, ಎಂದು ಲೂಯಿ ಶಾಂತವಾಗಿ ಹೇಳಿದಾಗ ಯುವರಾಜರು ಒಪ್ಪಿದಂತೆ ತೋರಿತು. ಆದರೆ ನನ್ನ ಇಡೀ ಮೈ ಉರಿದು ಹೋಯಿತು. ಯಾಕೆ? ಯಾಕೆ ನಾವು ಈ ಜೀವನವನ್ನು ಒಪ್ಪಿಕೊಳ್ಳಬೇಕು? ಒತ್ತಾಯದಿಂದ ಹೇರಿದ ಜೀವನ ನನಗೆ ಬೇಡವಾಗಿತ್ತು. ನಮ್ಮ ಇಚ್ಛೆಯ ವಿರುದ್ಧ ನಮ್ಮನ್ನಿಲ್ಲಿ ಕರೆತರಲಾಗಿತ್ತಾದ್ದರಿಂದ ನಾನು ಬಹಳ ಅಸ್ವಸ್ಥಳಾಗಿದ್ದೆ. ಅದಕ್ಕೂ ಮಿಗಿಲಾಗಿ ಲೂಯಿಯ ತಣ್ಣನೆಯ ಪ್ರತಿಕ್ರಿಯೆ ನನ್ನ ಪಿತ್ತ ನೆತ್ತಿಗೇರಿಸಿತು. ‘ಆತ್ಮ ಸಮ್ಮಾನ’ ಅನ್ನುವ ಶಬ್ದ ಈತನ ಬದುಕಿನಲ್ಲಿರಲೇಯಿಲ್ಲ. ನಾನು ತೀರ ಹತಾಶಳಾದೆ, ಫ಼ರ್ಸಾನ್ ಮಾತ್ರ ನಮ್ಮ ಬಿಡುಗಡೆಗಾಗಿ ಏನೆಲ್ಲ ಮಾಡುತ್ತಿದ್ದ. ಹೊರಗಿದ್ದುಕೊಂಡೇ ನಮ್ಮ ಪಲಾಯನದ ಯೋಜನೆಯನ್ನು ತಯಾರಿಸಿದ್ದ. ನಿಯತಿಯ ಮನಸ್ಸಿನಲ್ಲಿದ್ದಿದ್ದರೆಆ ಆ ಯೋಜನೆ ಸಫ಼ಲವೂ ಆಗುತ್ತಿತ್ತು. ಆದರೆ ಫ಼್ರಾನ್ಸನ ಸೀಮೆ ದಾಟಲು ಇನ್ನು ಕೆಲವೇ ಕಿಲೋಮೀಟರ್‌ಗಳಿರುವಾಗ ನಾವು ಬಂಧಿತರಾದೆವು. ದುರ್ದೈವ, ಕೇವಲ ನಮ್ಮ ದುರ್ದೈವ.
(ಮುಂದುವರೆಯುವುದು.)

Saturday, May 22, 2010

ಅನಂತ ವೇದನೆಯ ರಾಣಿ-೬

ಮೇಡಮ್:

ಇತ್ತೀಚೆಗೆ ಸುಚಿತ್ರ ನನ್ನೊಡನೆ ಸರಿಯಾಗಿ ಮಾತಾಡುತ್ತಿಲ್ಲ, ಪ್ರಭಂದಕ್ಕೆ ಅವಳು ಸೂಚಿಸಿದ ಶೀರ್ಷಿಕೆಯನ್ನು ನಾನು ಒಪ್ಪಿರದ ಕಾರಣಕ್ಕೇ ಇರಬೇಕು. ನಾನಾದರೂ ಏನು ಮಾಡಲಿ? ರಾಣಿ ಸಂಪೂರ್ಣ ಸುಖಿಯಾಗಿದ್ದಳು ಅನ್ನಲಾರೆ ಆದರೆ ‘ಅನಂತ ವೇದನೆಯ ರಾಣಿ’ ಎಂದವಳನ್ನು ಸಂಭೋದಿಸಿ ಅವಳಿಗೆ ಸಂಭಂದಪಟ್ಟ ಪ್ರಭಂದಕ್ಕೆ ಅನ್ಯಾಯ ಮಾಡಿದಹಾಗಾಗುತ್ತದೆ ಎಂದು ನನ್ನನಿಸಿಕೆ. ನಿಯತಿ ರಾಣಿಯ ಸೆರಗಿನಲ್ಲಿ ದುಖಃವನ್ನೇ ಸುರಿದಿದೆ ಅನ್ನುವುದು ಸುಚಿತ್ರಾಳ ಅಭಿಪ್ರಾಯ, ಅವಳ ನಿಷ್ಕರ್ಶೆ ತಪ್ಪು, ತನ್ನ ತಪ್ಪುಗಳನ್ನು ಸುಧಾರಿಸಿಕೊಳ್ಳುವ ಅನೇಕ ಅವಕಾಶಗಳು ರಾಣಿಗೆ ಸಿಕ್ಕಿದ್ದವು, ಆಕೆಯ ತಾಯಿಯ ಚಾಣಾಕ್ಷ ಸೂಚನೆಗಳು ಅವಳಿಗೆ ಆಗ್ಗಿಂದಾಗ್ಗೆ ಸಿಗುತ್ತಿದ್ದವು, ಲೂಯಿಯ ಬೆಂಬಲದಿಂದ ರಾಜ್ಯಕ್ಕೆ ವಾರಸುದಾರ ಸಿಕ್ಕಮೇಲಂತೂ ಪ್ರಜೆಗಳಿಗೆ ರಾಣಿಯ ಮೇಲಿನ ಅಸಂತೋಷ ಕಡಿಮೆಯಾಗಿ ಅವಳ ಎಲ್ಲ ಅಪರಾಧಗಳನ್ನವರು ಕ್ಷಮಿಸಿದ್ದರು. ಆಗಲಾದರೂ ರಾಣಿ ಪರಿಸ್ಥಿಯನ್ನು ಅರ್ಥಮಾಡಿಕೊಂಡು ತ್ರಿಯೋನಾದ ಅರಮನೆ, ನಾಟ್ಯಗೃಹ, ಹಾಗೂ ಆ ಪಾರ್ಟಿಗಳನ್ನು ಬಿಟ್ಟು ಫ಼್ರಾನ್ಸಿಗೆ ಮರಳಿ ಬರಬೇಕಿತ್ತು. ಆದರೆ ರಾಣಿ ಅಕ್ಕಪಕ್ಕದ ಪರಿಸರ ಕ್ಷಣಕ್ಷಣಕ್ಕೂ ಸ್ಫೋಟಕವಾಗುತ್ತಿದೆ ಅನ್ನುವ ಕಲ್ಪನೆಯೂ ಇರದಷ್ಟು ತನ್ನದೇ ಕಲ್ಪನಾ ಲೋಕದಲ್ಲೇ ವಿಹರಿಸುತ್ತಿದ್ದಳು.

ಇಲ್ಲಿ ರಾಣಿಯ ವ್ಯಕ್ತಿತ್ವವನ್ನು ಪರಿಗಣಿಸುವುದರ ಜೊತೆಗೆ ಫ಼್ರಾನ್ಸಿನ ಐತಿಹಾಸಿಕ ಪಾರ್ಶ್ವಭೂಮಿಯನ್ನೂ ಅಭ್ಯಸಿಸುವುದು ಮುಖ್ಯವಾಗಿದೆ.
ವರ್ಷಾನುವರ್ಷ ವಸಾಹತುಗಳ ಮೇಲೆ ರಾಜ್ಯವನ್ನಾಳುತ್ತ ನಿಸರ್ಗ ತನ್ನ ಮುಕ್ತ ಹಸ್ತದಿಂದ ಚೆಲ್ಲಿದ ಸೌಂದರ್ಯವನ್ನು ಬಳಸುತ್ತ ಯುರೋಪಿನಲ್ಲಿ ಇಂಗ್ಲೆಂಡಿನಷ್ಟೆ ಫ಼್ರನ್ಸ ಕೂಡ ಮಹಾಸತ್ತೆಯಾಗಿ ಪರಿಣಮಿಸಿತ್ತು. ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆ ಲಭಿಸಿದ ಈ ದೇಶ ಇತರ ದೇಶಗಳಿಗೆ ಆದರ್ಶ ಕೂಡ. ದೇಶವಿದೇಶದ ರಾಜಪುತ್ರರಿಗೆ ಇತರ ವಿದ್ಯೆಯೊಂದಿಗೆ ಫ಼್ರೆಂಚ್ ಭಾಷೆ ಕಲಿಯಲೇ ಬೇಕೆನ್ನುವ ಕಾನೂನಿದ್ದ ದಿನಗಳವು. ಇಂಗ್ಲೆಂಡ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಇದು ಇವರ ಪೂರ್ವಜರ ಸಾಧನೆ. ಮುಂದಿನ ಪೀಳಿಗೆಯವರು ಈ ಸಾಧನೆಯನ್ನು, ಪರಂಪರೆಯನ್ನು ಮುಂದುವರೆಸಿಕೊಂಡು ಹೋದರೆ ಹಣ, ಅಧಿಕಾರ ಕೈಯಲ್ಲಿರಲು ಸಾಧ್ಯ. ಆದರೆ ದುರ್ದೈವವಶಾತ್ ಹಾಗಾಗದೆ ಮುಂದಿನ ಪೀಳಿಗೆಯ ರಾಜರು ಐಶಾರಾಮದ ಜೀವನ ತಮ್ಮದಾಗಿಸಿಕೊಂಡರು. ಲೂಯಿ ಕೂಡ ಇವರಲ್ಲೊಬ್ಬ. ಜನಹಿತಕ್ಕಿಂತ ಸ್ವಹಿತಕ್ಕೆ ಪ್ರಾಮುಖ್ಯತೆ ಕೊಟ್ಟು ನಿಯೋಜನೆಯ ಅಭಾವ ಹಾಗೂ ಬೇಕಾಬಿಟ್ಟಿ ಕರಗಳನ್ನು ಹೇರಿದ್ದರಿಂದ ಫ಼್ರಾನ್ಸ ಅವನತಿಯತ್ತ ಹೆಜ್ಜೆಯಿಡತೊಡಗಿತು. ರಾಣಿಯ ಕಾಲದಲ್ಲಂತೂ ಫ಼್ರಾನ್ಸನ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ನೆಲ ಕಚ್ಚುವಂತಾಯಿತು. ರೈತರು, ಕಾರ್ಮಿಕರು ಬುದ್ಧಿ ಜೀವಿಗಳು ಕರಗಳನ್ನು ತುಂಬುತ್ತ ಹೋದಂತೆ ಇತ್ತ ರಾಜ ಪರಿವಾರ ಹಾಗೂ ಮೇಲ್ವರ್ಗದ ಧರ್ಮಗುರು ಹಾಗೂ ಶ್ರೀಮಾಂತ ಉಮರಾವ್‌ಗಳು ವಿಲಾಸದಲ್ಲಿ ಮಗ್ನರಾದರು. ಫ಼್ರೆಂಚ್ ಜನತೆಗಂತೂ ಕಷ್ಟ ಪಟ್ಟು ದುಡಿಯುವ ಅಭ್ಯಾಸವಿದ್ದೇಯಿತು. ಈ ಪರಿಸ್ಥಿಯಲ್ಲಿ ವಿಲಕ್ಷಣ ಬುದ್ಧಿಮತ್ತೆಯಿದ್ದ ರೂಸೋ ಹಾಗೂ ವ್ಹಾಲ್ಟೋರಂತಹ ವೈಚಾರಿಕ ರಾಜಕಾರಣಿಗಳು ಎಚ್ಚೆತ್ತುಕೊಂಡು ಜನತೆಯನ್ನು ಎಚ್ಚರಿಸಲಾರಂಭಿಸಿದರು. ಇವರೀರ್ವರ ಎದುರು ಅಮೇರಿಕಾದ ರಾಜ್ಯಕ್ರಾಂತಿಯ ಯಶಸ್ಸಿನ ಉದಾಹರಣೆಯಿತ್ತು. ದೇಶದ ಏಳಿಗೆ ರಾಜನ ಪೂಜೆ ಮಾಡುವುದರಿಂದಾಗದೆ ಸ್ವಾತಂತ್ರ್ಯ, ಸಮತಾ ಹಾವ ಹಾಗೂ ಬಂಧುತ್ವ ಅನ್ನುವ ಮೂರು ತತ್ವಗಳಿಂದಾಗುತ್ತದೆ ಆನುವುದನ್ನವರು ಜನರ ಮನಸ್ಸಿನಲ್ಲಿ ಬಿಂಬಿಸಿದರು. ತಮ್ಮ ಪಕ್ಕದ ರಾಜ್ಯವಾದ ಇಂಗ್ಲೆಂಡ್‌ನ ಜನರ ಸುಂದರ ಚಿತ್ರವನ್ನು ಮನಸ್ಸಿನಲ್ಲಿಟ್ಟು ಮಾನವನಿಗೆ ಮಾನವನಾಗಿ ಬದುಕಲು ಅವಕಾಶ ಕೊಡುವ ಲೋಕಶಾಹಿಯನ್ನು ಫ಼್ರಾನ್ಸನಲ್ಲಿ ತರಲು ಅವರು ಕಟಿಬದ್ದರಾದರು. ಇದೇ ಕಾಲದಲ್ಲಿ ಫ಼್ರೆಂಚ್ ಸಾಮ್ರಾಜ್ಯದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುವ ಸುವರ್ಣಾವಕಾಶ ರಾಣಿಗೆ ಸಿಕ್ಕಿತ್ತು, ಆಕೆಯ ತಾಯಿಯಂತೆ ಆಕೆ ಕೂಡ ತನ್ನ ರಾಜ್ಯದ ವಹಿವಾಟನ್ನು ವಹಿಸಿಕೊಳ್ಳಲಿ ಅನ್ನುವುದನ್ನು ಜನತೆ ಬಯಸಿತ್ತು. ಕಡೆಗೊಂದು ದಿನ ತನ್ನ ಹಿತಚಿಂತಕರ ಸೂಚನೆಯಂತೆ ಆಕೆ ರಾಜ್ಯಸಭೆಯ ಕಾರ್ಯಕಲಾಪಗಳಲ್ಲಿ ಹಾಜರಿರಲು ಪ್ರಾಂಭಿಸಿದಳಾದರೂ ತನ್ನ ಮರ್ಜಿಯಲ್ಲಿದ್ದವರಿಗೆ ಅವರಿಚ್ಛೆಯಂತೆ ರಾಜ್ಯದ ಕೆಲವು ಮುಖ್ಯ ಹುದ್ದೆಗಳನ್ನು ಹಂಚಿ ದೊಡ್ಡ ತಪ್ಪು ಮಾಡಿದಳು. ಇದು ಫ಼್ರನ್ಸ ವಿನಾಶದ ದೆಸೆಯಲ್ಲಿ ಇಟ್ಟ ಮೊದಲ ಹೆಜ್ಜೆ. ಇದರಿಂದ ನಿಜವಾಗಿಯೂ ಕಳಕಳಿಯಿಂದ ಜನತೆಯನ್ನು ಪ್ರತಿನಿಧಿಸುವ ಕಾರ್ಯಕರ್ತರು ಪಕ್ಕಕ್ಕೆ ತಳ್ಳಲ್ಪಟ್ಟರು.
ಕೆಲವೇ ದಿನಗಳಲ್ಲಿ ಕಷ್ಟಪಟ್ಟು ಬೆವರು ಸುರಿಸುವ ಜನತೆಗೆ ನಮ್ಮ ರಾಜ ಮೂರ್ಖ, ರಾಣಿ ವಿಲಾಸಿನಿ, ಈ ರಾಷ್ಟ್ರ ಸಾಲದ ಹೊರೆಯಡಿಯಿದ್ದರೂ ಅರಮನೆಯಲ್ಲಿ ಬಣ್ಣಬಣ್ಣದ ಪಾರ್ಟಿಗಳು ನಡೆಯುತ್ತಿವೆ ಅನ್ನುವ ಸೂಕ್ಷ ವಿಷಯಗಳು ಅರ್ಥವಾಗತೊಡಗಿದವು. ಇದೇ ಕಾಲದಲ್ಲಿ ರಾಣಿ ತನ್ನ ತಮ್ಮ ಜೋಸೆಫ಼್ ನ ಕಷ್ಟ ಸಮಯದಲ್ಲಿ ಸಹಾಯ ಮಾಡಲು ಲಕ್ಷಕ್ಕೂ ಅಧಿಕ ಬೆಲೆಯುಳ್ಳ ಚಿನ್ನದ ನಾಣ್ಯಗಳನ್ನು ಗುಪ್ತ ಮಾರ್ಗವಾಗಿ ಆಸ್ಟ್ರೀಯಾಗೆ ಕಳಿಸಿದಳು. ಇದರಿಂದ ಕಾಮಾಂಧ ಹಾಗೂ ವ್ಯಸನಾಧೀನಳಾದ ರಾಣಿಯ ಕಿರೀಟದಲ್ಲಿ ದೇಶದ್ರೋಹದ ಗರಿಯನ್ನೂ ಅಳವಡಿಸಲಾಯಿತು. ದಿನೇ ದಿನೇ ಜನತೆಯ ಮನಸ್ಸಿನಲ್ಲಿ ಸಂತೋಷ ಹೊಗೆಯಾಡಲಾರಂಭಿಸಿತ್ತು. ಅಮೇರಿಕಾದಿಂದ ಮರಳಿದ ಫ಼್ರಾನ್ಸಿನ ರಾಜಕಾರಣಿಗಳು ವಿಭಿನ್ನವಾದ ಎಂದೂ ಕೇಳಿರದ ವಾರ್ತೆಗಳನ್ನು ತಂದಿದ್ದರು. ‘ಅಮೇರಿಕಾದಲ್ಲಿ ರಾಜಾ-ರಾಣಿಯರೇ ಇಲ್ಲವಂತೆ, ಶ್ರೀಮಂತರೂಯಿಲ್ಲ., ಉಮರಾವ್‌ರೂ ಇಲ್ಲ, ಧರ್ಮಗುರುಗಳ ವರ್ಚಸ್ಸಿಲ್ಲ, ಅಲ್ಲಿ ಕೇವಲ ನಾಗರೀಕರಿರುತ್ತಾರೆ,ಅವರು ಕಷ್ಟಪಟ್ಟು ದುಡಿದದ್ದನ್ನು ತಮಗಾಗಿ ಹಾಗೂ ಸಮಾಜಕ್ಕಾಗಿ ಉಪಯೋಗಿಸುತ್ತಾರೆ, ಅಲ್ಲಿಯೂ ಬಡತನವಿದೆ ಆದರೆ ಜನ ಸುಖವಾಗಿ ತಿಂದುಂಡು ಸ್ವತಂತ್ರವಾಗಿದ್ದಾರೆ, ಅವರ ಬೆವರಿಗೆ ಸುಗಂಧವಿದೆ, ಅವರ ಕಷ್ಟಕ್ಕೆ ಬೆಲೆಯಿದೆ’ ಅನ್ನುವ ಅನೇಕ ವಿಷಯಗಳು ಫ಼್ರಾನ್ಸನ ಜನತೆಯ ಕಿವಿ ತಲುಪುತ್ತಿದ್ದವು. ‘ಡಿಗ್ನಿಟಿ ಆಫ಼್ ಲೇಬರ್’ ನ ಪರಿಕಲ್ಪನೆ ಪ್ರಪ್ರಥಮವಾಗಿ ಫ಼್ರಾನ್ಸ ಜನತೆಯ ಮನಸ್ಸು ತಟ್ಟಿತು. ರೂಸೋ ತನ್ನ ಸೋಷಿಯಲ್ ಕಾಂಟ್ರಾಕ್ಟನಿಂದ ಅದನ್ನು ತುಂಬ ಪ್ರಭಾವಶಾಲಿಯಾಗಿ ಎತ್ತಿ ಹಿಡಿದ. ರಾಜಾ ರಾಣಿಯರ ಹುದ್ದೆಯ ಅಸ್ತಿತ್ವವನ್ನು ಮೊದಲ ಬಾರಿಗೆ ವಿರೋಧಿಸಲಾಯಿತು. ಜನತೆಯ ಪ್ರತಿನಿಧಿತ್ವವನ್ನು ಸ್ವಿಕರಿಸಿದ `ನ್ಯಾಷನಲ್ ಅಸೆಂಬ್ಲಿಯ' ಕೆಲಸಗಳು ದಿನೇದಿನೇ ಆಕ್ರಮವಾಗುತ್ತ ಹೋದರೂ ರಾಣಿಗೆ ಇದ್ಯಾವುದರ ಸುಳಿವು ಕೂಡ ಇರಲಿಲ್ಲ. ದೀರ್ಘ ನಿದ್ದೆಯಲ್ಲಿರುವ ಭೂಮಿಗತ ಕಪ್ಪೆ ಕೂಡ ಮಳೆಯ ಆಗಮನದ ಸೂಚನೆಯನ್ನು ಗುರುತಿಸಿ ಭೂಮಿಯ ಮೇಲೆ ಬರುತ್ತದೆ ಅದರೆ ರಾಣಿ ಮಾತ್ರ ರಾತ್ರಿ ಹತ್ತರ ನಂತರ ಯಾವುದೇ ಪತ್ರಗಳನ್ನು ಅಥವಾ ಸಂದೇಶಗಳನ್ನು ದೂತರು ಒಳಗೆ ತರುವಂತಿಲ್ಲ ಅನ್ನುವ ಕಟ್ಟಪ್ಪಣೆಯನ್ನು ಹೊರಡಿಸಿದ್ದಳು. ಕ್ರಾಂತಿಕಾರರು ಬ್ಯಾಸಿಲ್‌ನ ಕೋಟೆಯನ್ನು ವಶಪಡಿಸಿಕೊಂಡು ಅಲ್ಲಿಯ ಸರದಾರನ ತಲೆ ತುಂಡರಿಸಿ ಅದನ್ನು ಪ್ಯಾರಿಸ್‌ನ ಗಲ್ಲಿಗಲ್ಲಿಗಳಲ್ಲಿ ವಿಜಯ ಪತಾಕೆಯಂತೆ ಮೆರವಣಿಗೆ ಮಾಡಿದರೂ ಈ ವಾರ್ತೆ ತರುವ ದೂತರು ಮಾತ್ರ ಅರಮನೆಯ ಹೊರಗೆ ಬೆಳಗಾಗುವ ಪ್ರತೀಷೆಯಲ್ಲಿ ನಿಂತಿದ್ದರು. ಎಷ್ಟು ನಾಚಿಕೆಗೇಡುತನ. ಇಷ್ಟೆಲ್ಲ ನಡೆದರೂ ರಾಣಿ ಮಾತ್ರ ತನ್ನದೇ ಇನ್ಸ್ಟಿಂಕ್ಟ ಮೇಲೆ ಅವಲಂಬಿತಳಾಗಿದ್ದಳು. ಜನ್ಮದಿಂದ ಅಥವಾ ಕರ್ಮದಿಂದ ಸಿಗದ ಆದರೆ ಕೇವಲ ಹಣೇಬರಹದಿಂದ ಸಿಕ್ಕಿದ್ದ ರಾಣಿತ್ವದ ಮೇಲೆ ತಳಊರಿದ್ದಳು. ಕ್ರಾಂತಿ, ಮಾನವೀಯ ಹಕ್ಕು, ಲೇಖನ ಸ್ವಾತಂತ್ರ್ಯ, ಈ ಶಬ್ದಗಳನ್ನಾಕೆ ಎಂದೂ ಕೇಳಿರಲೇಯಿಲ್ಲ. ನಾನು ಆಸ್ಟ್ರಿಯನ್ ಆದ್ದರಿಂದ ನನ್ನನ್ನು ದ್ವೇಶಿಸುತ್ತಿರುವ ಇವರು ತಲೆಹಿಡುಕರು ಅನ್ನುವ ದೃಷ್ಟಿಯಿಂದಲೇ ಆಕೆ ಕ್ರಾಂತಿಕಾರರನ್ನು ಕಂಡಳು. ಅವಳಂದುಕೊಂಡಂತೆ ಈ ವರ್ಗ ಅಷ್ಟು ತಲೆಹಿಡುಕು ಅಥವಾ ಧೈರ್ಯಹೀನವಾಗಿರಲಿಲ್ಲ, ಬಡವರಾಗಿದ್ದರೂ ಸತ್ವಹೀನರಾಗಿರಲಿಲ್ಲ, ಅವರ ಪ್ರತಿನಿಧಿಗಳು ಬುದ್ಧಿವಂತರೂ ಮುತ್ಸದ್ದಿಗಳೂ ಆಗಿದ್ದರು. ಮಿರಾಬೋ, ಲಾಫ಼ಾಯತ್, ಲುತ್ಸಾಲೋ, ಮೋರಾ ಇವರುಗಳು ಕಾರ್ಯಕರ್ತರಲ್ಲಿ ಮುಖ್ಯರು.
ಮುಂದೆ ಈ ಕ್ರಾಂತಿಯನ್ನು ಮಟ್ಟ ಹಾಕಲು ರಾಣಿ ಸಾಕಷ್ಟು ನಿಕೃಷ್ಟವಾದ ಕೆಲಸ ಮಾಡಿದಳು. ಕ್ರಾಂತಿಕಾರರನ್ನು ತೊಲಗಿಸಲು ರಾಣಿ ಹೊರದೇಶದಿಂದ ಸೈನ್ಯ ತರಿಸಿ ಅವರ ಹೊಟ್ಟೆ ಪಾಡಿಗಾಗಿ ನೀರಿನಂತೆ ಹಣ ಖರ್ಚು ಮಾಡಿದಳು. ದೇಶದಲ್ಲಿ ಜೀವನಾವಶ್ಯಕ ವಸ್ತುಗಳು ಕಾಣೆಯಾಗುತ್ತಿದ್ದುವಾದರೆ ಅರಮನೆಯಲ್ಲಿ ಬಾಡಿಗೆಯ ಸೈನಿಕರಿಗಾಗಿ ಉತ್ತನ ಊಟ, ಸಾರಾಯಿ ಸರಬರಾಜಾಗುತ್ತಿತ್ತು. ಕ್ರಾಂತಿಯನ್ನು ಮಟ್ಟ ಹಾಕಲು ರಾಣಿ ಎಲ್ಲ ತಯಾರಿಯನ್ನು ಪೂರ್ಣಗೊಳೊಸಿದಳು, ರಕ್ತದ ಕಾಲುವೆಯೇ ಹರಿಯಿತು, ಏನೇ ಬಂದರೂ ಸ್ವಾತಂತ್ರ್ಯ ಅಥವಾ ಸಾವು ಅನ್ನುವ ಜಿದ್ದಿನಿಂದ ಸಮಸ್ತ ಫ಼ೆಂಚ್ ಜನತೆ ಟೊಂಕ ಕಟ್ಟಿ ನಿಂತಿತು. ಜನತೆಯ ಕ್ಷೋಭೆಯ ಎದುರು ರಾಜಾ ರಾಣಿಯರಿಗೆ ತಲೆಬಾಗಿಸಲೇ ಬೇಕಾಯಿತು. ಈರ್ವರನ್ನು ಬಂಧಿಸಿ ಪ್ಯಾರಿಸ್‌ನಲ್ಲಿಟ್ಟಾಗ ರಾಣಿ ಅಲ್ಲಿಂದ ಓಡಿ ಹೋಗುವ ಪ್ರಯತ್ನದಲ್ಲಿ ಲಂಚ ಕೊಡಮಾಡಿದಳು. ಹೊರ ದೇಶದ ಶತೃಗಳೊಂದಿಗೆ ಸಂಧಾನ ನಡೆಸಿಯೂ ವಿಫ಼ಲಳಾದಳು. ಇದೆಲ್ಲದರ ಕೊನೆ ಅವಳ ವಧೆಯಲ್ಲಾಯಿತು.
ರಾಜಾ ರಾಣಿಯರ ವಧೆಯಿಂದ ಹುಕುಮಶಾಹಿಯ ಅಂತ್ಯವಾಗಿತ್ತಲ್ಲದೆ ಈ ಕಠೋರ ನಿರ್ಣಯದಲ್ಲಿಯೇ ಫ಼್ರಾನ್ಸಿನ ಭವಿಷ್ಯ ಅವಲಂಬಿಸಿತ್ತು. ಈ ನಿಭಂದದ ನನ್ನ ನಿಲುವು ಯಾವುದೇ ಪಕ್ಷದ ಧೋರಣೆಯಲ್ಲ, ಅದು ವಸ್ತು ಸ್ಥಿಯ ಮೇಲೆ ಬಹುಶಃ ಫ಼್ರಾನ್ಸ ಮಾಡಿದ ಪ್ರಗತಿಯ ಮೇಲೆ ಆಧರಿಸಿದೆ.
(ಮುಂದುವರೆಯುತ್ತದೆ)

Sunday, May 2, 2010

ಅನಂತ ವೇದನೆಯ ರಾಣಿ-೫

ಅನಂತ ವೇದನೆಯ ರಾಣಿ-೫


ರಾಣಿ:


ಇತಿಹಾಸಕರರನ್ನು ದೂಷಿಸಲೆ? ಕೊನೆಯ ಮೂರು ವರ್ಷ ಕಠಿಣ ಶಿಕ್ಡ್ಶೆ ಅನುಭವಿಸುತ್ತಿರುವಾಗ ನನ್ನ ಹೆಸರು ಹಾಗೂ ಸಾಧನೆ ಫ಼್ರಾನ್ಸನ ಇತಿಹಾಸದಲ್ಲಿ ಕಪ್ಪು ಮಸಿಯಲ್ಲಿ ಬರೆಯಲ್ಪಡುತ್ತದೆ ಅನ್ನುವುದು ನನಗೆ ಮನದಟ್ಟಗಿತ್ತಾದರೂ ನಾನು ಅಸಹಾಯಕಳಾಗಿದ್ದೆ. ಏನೂ ಮಾಡುವ ಹಾಗಿರಲಿಲ್ಲ. ನನ್ನ ನಡತೆ, ಕೃತ್ಯ ಹಾಗೇ ಇತ್ತಲ್ಲ, ಬರೀ ಕಪ್ಪು ಕಪ್ಪು. ಸಮಾಜದ ಮೌಲ್ಯಗಳ ವಿರುದ್ಧ ಮಾಡಿದ ಹೇಯ ಕೃತ್ಯಗಳು, ಆದರೆ ಮನಸ್ಸಿನಾಳದಿಂದ ಹೇಳುತ್ತಿದ್ದೇನೆ ನಾನು ಮಾಡಿದ್ದೆಲ್ಲ ಕೇವಲ ‘ಸ್ವಂತ ಸುಖಾಯ’ ಅನ್ನುವ ಭಾವನೆಯಿಂದ ಮಾತ್ರ, ಇತರರಿಗೆ ಉಪದ್ರವ ಕೊಡುವ ಉದ್ದೇಶದಿಂದಲ್ಲ.


ನಮ್ಮ ತ್ರಿಯೋನಾದ ಅರಮನೆಯಲ್ಲಿ ‘ಆರ್ಜಿ’ ಪಾರ್ಟಿಗಳು ನಡೆಯುತ್ತವೆ ಅನ್ನುವ ಅನುಮಾನ ಜನತೆಗಿತ್ತು, ನಿಜವಾಗಿಯೂ ನಾನವುಗಳನ್ನು ಉದ್ದೇಶಪೂರ್ವಕವಾಗಿ ನಡೆಸಲಿಲ್ಲ. ನಾವೆಲ್ಲ ಹಾಡಿ, ಕುಣಿದಾಡಿ ಆನಂದಿಸುತ್ತಿದ್ದೆವು. ಸುಂದರ ಗಟ್ಟಿಮುಟ್ಟಾದ ಪುರುಷರು, ಅವರೊಂದಿಗೆ ಸುಂದರ ತರುಣ ಸ್ತ್ರೀಯರು, ಮಧ್ಯರಾತ್ರಿಯ ಗೂಢ ಚಳಿಯಲ್ಲಿ ಸಂಗೀತದ ಮಂದ ಸ್ವರಗಳ ಮತ್ತೇರುತ್ತಿತ್ತು. ಆ ಒಂದು ಮತ್ತಿನಲ್ಲಿ ಅವರಿಗೂ ಗೊತ್ತಾಗದ ಕ್ಷಣದಲ್ಲಿ ಆರಂಭವಾಗುತ್ತಿತ್ತು ಪ್ರೇಮಿಗಳ ವಿಲಾಸ. ಅಕ್ಕಪಕ್ಕದ ಪರಿಸರ, ಇಡೀ ದಿನದ ಕಷ್ಟ ಆಗ ಮರೆಯಲ್ಪಡುತ್ತಿದ್ದವು. . ಅಲ್ಲಿ ಕೇವಲ ನಮ್ಮ ಪ್ರೀತಿಯ ವ್ಯಕ್ತಿಯ ಸಹವಾಸವಿರುತ್ತಿತ್ತಲ್ಲದೆ ಆ ಕೆಲವೇ ಕ್ಷಣಗಳ ಸುಖ ಹೀರಿ ತೃಪ್ತರಾಗುವ ತುಡಿತ ಕೂಡ ಪ್ರತಿಯೊಬ್ಬರ ಮನಸ್ಸಿನಲ್ಲಿರುತ್ತಿತ್ತು. ಸುಖ ಬಯಸಿ ನಾನು ಅಪರಾಧಿಯಾಗುತ್ತಿದ್ದೇನೆ ಎಂದು ನನಗೆಂದೂ ಅನಿಸಲಿಲ್ಲ. ಮದುವೆಯ ನಂತರ ನಾವು ಗಂಡ ಹೆಂಡತಿ ಸೇರಿ ಸೂರೆಗೊಳ್ಳಬೇಕಿದ್ದ ಸುಖವನ್ನು ಇತರ ಜೋಡಿಗಳು ಅನುಭವಿಸುವುದನ್ನು ನೋಡಿ ನಾಚಿಕೆ ಅಥವಾ ಹಿಂಸೆ ಅನಿಸಲಿಲ್ಲ. ಏಕೆಂದರೆ ಆ ಭಾವನೆ ಎಂದೂ ವಿಕೃತವಾಗಿರಲಿಲ್ಲ. ಮೊದಮೊದಲು ನಾನು ಅನೇಕ ಸುಂದರ ಪುರುಷರಲ್ಲಿ ಆಕರ್ಷಿತಳಾಗುತ್ತಿದ್ದೆ, ಆದರೆ ಉದಯಿಸುತ್ತಿರುವ ಸೂರ್ಯನನ್ನು ನೋಡಿ ರಾತ್ರಿಯೆಲ್ಲ ಕಿಚಗುಡುವ ಕಿಟಕಗಳು ತಮ್ಮ ಅರಚಾಟ ನಿಲ್ಲಿಸಿಬಿಡುವ ಹಾಗೆ ಕೆಲಸ ಮುಗಿದೊಡನೆ ಆ ಕ್ಷುದ್ರ ಜೀವಿಗಳು ನನಗೆ ಬೆನ್ನು ತೋರಿಸಿ ಹೊರಟುಬಿಡುತ್ತಿದ್ದರು. ಅವರ ಮನಸ್ಸು ಶರೀರ ಎರಡು ತೃಪ್ತವಾಗುತ್ತಿದ್ದವಾದರೆ ನಾನು ಮಾತ್ರ ಎಲ್ಲವನ್ನೂ ಪಡೆದೂ ಖಾಲಿಖಾಲಿಯಾಗಿರುತ್ತಿದ್ದೆ. ಆಗ ವಿಚಿತ್ರ ತಳಮಳ, ಗೊಂದಲ ಕಾಡುತ್ತಿತ್ತು, ಹೀಗೆಕೆ? ಇಷ್ಟಪಟ್ಟ ಪುರುಷನ ಜೊತೆ ರಾತ್ರಿಯೆಲ್ಲ ಸುಖಿಸಿಯೂ ನಾನು ಅತೃಪ್ತಳೇಕೆ? ನನಗೆ ತೃಪ್ತಿಯೇ ಇಲ್ಲವೆ? ನನಗೆ ನಿಜವಾಗಿ ಬೇಕಾದ್ದೇನು? ಕೇವಲ ಕಾಮಕ್ರಿಡೆಯೆ? ಅಥವಾ ಇನ್ನೇನಾದರು? ಅನ್ನುವ ಗೊಂದಲದ ಸುಳಿಯಲ್ಲಿದ್ದಗ ಲ್ಯಾಂಬೆಲ್ ನನ್ನ ಜೀವನದಲ್ಲಿ ಪ್ರವೇಶಿಸಿದಳು. ಸ್ವಚ್ಛ, ಸುಂದರ, ಹಾಗೂ ನಾಜೂಕಿನ ಶರೀರದ ಲ್ಯಾಂಬೆಲ್ ನನ್ನ ತಳಮಳವನ್ನು ಕೇಳದೆಯೇ ತಿಳಿದುಕೊಂಡಿದ್ದಳು. ಇತರರ ಹಾಗೆ ನನ್ನಲ್ಲಿದ್ದ ಹಣ, ಅಧಿಕಾರ ಆಕೆಗೆ ಬೇಕಿರಲಿಲ್ಲ, ಅವಳೇ ನಿಜವಾದ ಅರ್ಥದಲ್ಲಿ ನನ್ನನ್ನು ಅರ್ಥಮಾಡಿಕೊಂಡಿದ್ದಳು. ಸುರಿಸಿದಷ್ಟು ಹೆಚ್ಚಾಗುವ ನನ್ನ ಕಣ್ಣಿರನ್ನು ತನ್ನ ಪುಟ್ಟ ಕರವಸ್ತ್ರದಿಂದ ಒರೆಸಿತ್ತಿದ್ದಳು. ಅವಳು ನನ್ನ ತಾಯಿಯಷ್ಟೇಯಲ್ಲ ನನ್ನ ಗೆಳತಿ ಕೂಡ ಹಾಂ....ನನ್ನ ಪ್ರೇಯಸಿ ಕೂಡ ಆಗಿದ್ದವಳು. ನಾನೊಬ್ಬ ಸ್ತ್ರೀಯಾಗಿ ಇನ್ನೊಬ್ಬ ಸ್ತ್ರೀಯಲ್ಲಿ ಆಕರ್ಷಿತಳಾಗುವುದು ಸಮಾಜದ ದೃಷ್ಟಿಯಿಂದ ಒಂದು ಮಹಾಪರಾಧ. ಆದರೆ ನನಗದರಲ್ಲಿ ವಿಪರೀತವೇನೂ ಅನಿಸಲಿಲ್ಲ, ಇಂದಿಗೂ ಅನಿಸುವುದಿಲ್ಲ. ಏಕೆಂದರೆ ಶರೀರಕ್ಕಿಂತ ಆಕೆ ನನ್ನ ಮನಸ್ಸಿಗೆ ಹತ್ತಿರವಾಗಿದ್ದಳು, ನನಗಾಗಿ ಮಿಡಿಯುವ ಒಂದು ಮನಸ್ಸಿದ್ದಿದ್ದೇ ಆದರೆ ಅದು ಲ್ಯಾಂಬೆಲ್‌ಳದ್ದು ಅನ್ನುವ ನಂಬಿಕೆ ನನಗೆ. ಈ ವಿಶ್ವಾಸದ ಭಾವನೆಯೇ ನನಗೆ ಬೇಕಾದದ್ದು. ಸ್ವಚ್ಛ್ಂದವಾಗಿ ಆಡಿಕೊಂಡಿರಬೇಕಾಗಿದ್ದ ವಯಸ್ಸಿನಲ್ಲಿ ಲೈಂಗಿಕ ದೋಷವಿದ್ದ, ಮನಸಿಕ ದುರ್ಬಲನಾಗಿದ್ದ ಒಬ್ಬ ಮನುಷ್ಯನಿಗೆ ನನ್ನನ್ನು ಕಟ್ಟಿದರು, ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ವರ್ಗಾಯಿಸಲ್ಪಡುವ ವಸ್ತುವಿನಂತೆ ನಾನು ಆಸ್ಟ್ರಿಯಾದಿಂದ ಫ಼್ರಾನ್ಸ್‌ಗೆ ವರ್ಗಾಯಿಸಲ್ಪಟ್ಟೆ, ಭಾಷೆಯೇ ಗೊತ್ತಿರದ ಸಂಸ್ಕೃತಿಯ ಅರಿವಿಲ್ಲದ ಒಂದು ಬೇರೆಯೇ ಸಮಾಜದಲ್ಲಿ ಬಂದು ಸೇರಿದಾಗ ಅಸುರಕ್ಷಿತತೆಯ ಭಾವನೆ ತೀವ್ರವಾಗಿ ಕಾಡುತ್ತಿತ್ತು. ಅಂತಹ ಸಮಯದಲ್ಲಿ ಸ್ವಲ್ಪ ಪ್ರೀತಿಯಿಂದ ಮಾತನಾಡುವ ಪ್ರತಿಯೊಬ್ಬ ಗಂಡಸಿಗೆ ನಾನು ಸ್ವಾಧೀನಳಾಗುತ್ತಿದ್ದೆ. ಲ್ಯ್ಂಬೆಲ್ ಮಾತ್ರ ನನ್ನೊಂದಿಗೆ ಪ್ರಾಮಾಣಿಕವಾಗಿದ್ದಳು. ನಮ್ಮಿಬ್ಬರ ಈ ಸಂಭಂದ ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಾಗಲಿಲ್ಲ, ಸಾಧ್ಯವಿದ್ದರೂ ನಾನದನ್ನು ಮುಚ್ಚಿಡಲಿಲ್ಲ. ನನಗೆಂದು ಅದರ ಪಶ್ಚ್ಛಾತ್ತಾಪವಿಲ್ಲ, ನಾನು ಮಾಡಿದ್ದು ಪಾಪವೇ ಆಗಿರಬಹುದು ಆದರೆ ನಾನದನ್ನು ಕದ್ದುಮುಚ್ಚಿ ಮಾಡಲಿಲ್ಲ. ಈ ಕೃತ್ಯವನ್ನು ನಾನೆಂದೂ ಹೊಗಳಿಕೊಳ್ಳಲಿಲ್ಲ ಕೂಡ. ನಾನಿದ್ದ ಬಂದಿಸ್ತ ವಾತಾವರಣದಲ್ಲಿ ಶುಭ್ರ ಮುಕ್ತ ಗಾಳಿಗಾಗಿ ನಾನು ತೆಗೆದುಕೊಂಡ ಉಸಿರಾಗಿತ್ತದು. ಇದೇ ನನಗೂ ಪಾಪಕ್ಕೂ ಇದ್ದ ಸಂಬಂಧ.

ವರ್ಸಾಯದ ಅರಮನೆಯಲ್ಲಿ ನನ್ನ ಕೊದಲ ಕೆಲವು ದಿನಗಳು ಬಹಳ ನೀರಸವಾಗಿ ಕಳೆದವು. ಸೂರ್ಯೋದಯಕ್ಕೆ ಮೊದಲು ಎದ್ದು ರಾಜಮನೆತನದ ವೃದ್ಧ ಸ್ತ್ರೀಯರು ಹಾಗೂ ದಾಸಿತರೊಡನೆ ಚರ್ಚಗೆ ಹೋಗುವುದು, ಮಧ್ಯಾಹ್ನ ಹೊಲಿಗೆ ಾಡುವುದು ಇಲ್ಲವೆ ಧಾರ್ಮಿಕ ಗ್ರಂಥಗಳನ್ನು ಓದುವುದು, ಸಾಯಂಕಾಲ ಹೊಸ ಸೊಸೆಯನ್ನು ನೋಡಲು ಬರುವ ಅನೇಕ ಅಪರಿಚಿತರೆದುರು ಕುಳಿತುಕೊಳ್ಳುವುದು, ರಾತ್ರಿ ದಿಂಬಿಗೂ ತನಗೂ ಸಾಮ್ಯವಿದ್ದಂತೆ ಮಲಗುತ್ತಿದ್ದ ನನ್ನ ನಿಷ್ಕ್ರೀಯ ಪತಿಯನ್ನು ನೋಡಿ ಕಣ್ಣಿರು ಸುರಿಸುವುದು, ಇದೇ ನನ್ನ ಕೆಲಸ. ಸೂರ್ಯಾಸ್ತದ ಸಮಯದಲ್ಲಿ ಸಾವಿರುಗಟ್ಟಲೆ ಕಿಟಕಿಗಳಿದ್ದ ವರ್ಸಾಯದ ಅರಮನೆಯಲ್ಲಿ ನಿಶಃಬ್ದ ಬದುಕು ಬಾಳಬೇಕಾಗಿ ಬಂದಾಗ ಶೃಂಗಾರ ಮಾಡಿಕೊಂಡು ನಿಂತಿರುವ ಈ ರಾಣಿ ಯಾರೋ ಪರಸ್ತ್ರೀ, ಪರಿಚಯವಿಲ್ಲದ ಹೆಣ್ಣು ಅನಿಸಿ ಜೀವ ಹೆದರಿ ಹೋಗುತ್ತಿತ್ತು. ಕೈಯಲ್ಲಿ ಅಮ್ಮನ ಪತ್ರಗಳಿರುತ್ತಿದ್ದವು. ಅದರಲ್ಲೇನಿರುತ್ತಿರಲಿಲ್ಲ? ಸಾವಿರ ಸೂಚನೆಗಳ ಪಟ್ಟಿಯೇ ಅಲ್ಲಿರುತ್ತಿತ್ತು. ರಾಜಮನೆತನದ ಮತ್ಸರದ ಬಗ್ಗೆ, ಸಂಕುಚಿತ ಭಾವನೆಯುಳ್ಳ ಸ್ತ್ರೀಯರನ್ನು ನನ್ನ ಬಾಳಿನಿಂದ ತೆಗೆದು ಹಾಕುವ ಸೂಚನೆ, ಶೃಂಗಾರ ಚೇಷ್ಟೆಗಳ ಮಾಹಿತಿ, ಯಾಕಾಗಿ ಇದೆಲ್ಲ ಅನಿಸುತ್ತಿತ್ತು. ತನ್ನ ಸ್ವಾರ್ಥಕ್ಕಾಗಿ ನನ್ನನ್ನು ಕೊಳಚೆಯಲ್ಲಿ ತಳ್ಳಿದ ತಾಯಿಯ ಈ ಆಟ ನನಗೀಗ ಸಹಿಸಲಸಾಧ್ಯವಾಗಿತ್ತು. ಒಮ್ಮೊಮ್ಮೆಯಂತೂ ಆಕೆ ನನ್ನ ಮೇಲೊಂದು ಕಣ್ಣಿಟ್ಟು ತನ್ನ ಕುತಂತ್ರದಿಂದ ನನ್ನನ್ನು ಕುಣಿಸಿ ಫ಼್ರಾನ್ಸನ್ನು ತನ್ನ ಆಧಿಪತ್ಯದಲ್ಲಿ ಸೇರಿಸಿಕೊಳ್ಳಲು ಹವಣಿಸುತ್ತಿದ್ದಾಳೆಯೆ? ಅನಿಸುತ್ತಿತ್ತು. ಎಲ್ಲ ಗೊತ್ತಿದ್ದೂ ನಾನು ಅಸಹಾಯಕಳಾಗಿದ್ದೆ. ನನ್ನ ಗಂಡನೇ ಶಕ್ತಿಹೀನನಾಗಿರುವಾಗ ನಾನ್ಯಾವ ಮೂಲೆ?
ಕಡೆಗೂ ಏಳು ವರ್ಷದ ಕಠಿಣ ತಪ್ಪಸಿನ ಫ಼ಲವೆಂಬಂತೆ ಲೂಯಿ ಶಸ್ತ್ರಕ್ರಿಯೆಗೆ ತಯಾರಾದಾಗ ನನ್ನ ಮಾತೃತ್ವದ ಮಾರ್ಗವೂ ತೆರೆಯಿತು. ೨೨ ನೆಯ ಆಕ್ಟೋಬರ್ ೧೭೮೧ ರಲ್ಲಿ ನನ್ನ ಚೊಚ್ಚಿಲ ಮಗ ರಾಜಮನೆತನದ ವಾರಸುದಾರ ‘ಏಫ಼ಿನ್’ ಜನನವಾಯಿತು. ಆ ದಿನ ದಿನವೆಲ್ಲ ಚರ್ಚಿನಲ್ಲಿ ಘಂಟಾನಾದವಾಯಿತು, ರೈತರಿಗೆ ಸಾಲ ಮನ್ನಾ ಮಾಡಲಾಯಿತು, ಕೈದಿಗಳು ಮುಕ್ತರಾದರು. ಸುಖವೆಂಬ ರಾಜ್ಯದಲ್ಲಿ ನನ್ನ ಹೆಸರೂ ಸೇರಿಸಲ್ಪಟ್ಟಿತು. ೧೭೮೫ ರಲ್ಲಿ ಎರಡನೆಯ ಮಗ ಹಾಗೂ ಅವನ ಹಿಂದಿಂದೆ ಮಗಳು ಜನಿಸಿದಳು.
ಕಳೆದ ಏಳು ವರ್ಷಗಳಿಂದ ಹಗಲು ರಾತ್ರಿ ಒಂದೇ ರೀತಿ ಕಳೆದ ನನ್ನ ಬಣ್ಣದ ಜೀವನ ಕಡೆಗೆ ಮಾತೃತ್ವಕ್ಕೆ ಸಮರ್ಪಿತವಾಯಿತು.
(ಮುಂದುವರೆಯುವುದು)

Thursday, April 8, 2010

ಅನಂತ ವೇದನೆಯ ರಾಣಿ-೪

ಅನಂತ ವೇದನೆಯ ರಾಣಿ-೪

ಸುಚಿತ್ರ:

ಈ ನಿಭಂದಕ್ಕೆ ಸಹಾಯ ಮಾಡಲು ನಾನು ಒಪ್ಪದಿದ್ದಿದ್ದರೆ ಬಹುಶಃ ನನ್ನ ಮನಸ್ಸಿನಲ್ಲಿದ್ದ ಮೇಡಂನವರ ಪ್ರತಿಮೆಗೆ ಧಕ್ಕೆ ಬರುತ್ತಿರಲಿಲ್ಲ. ಮೇಡ್ಂನವರ ತೀಕ್ಷ್ಣ ಬುದ್ಧಿಮತ್ತೆ, ಗಂಭೀರ ವ್ಯಕ್ತಿತ್ವ, ಎಲ್ಲ ಹೆಣ್ಣುಮಕ್ಕಳಿಗೂ ಅಭಿಮಾನವೆನಿಸುವಂತಹ ಅವರ ಸಾಧನೆಗೆ ನಾನು ಬಹಳ ಮಾರು ಹೋಗಿದ್ದೆ, ಆದರೆ ಈಗದು ಸಾಧ್ಯವಾಗುತ್ತಿಲ್ಲ. ಕಾರಣ ಅವರ ಬುದ್ಧಿಮತ್ತೆಯ ಹಿಂದಿರುವ ಭಾವನೆಯ ಕೊರತೆ. ಬಹುಶಃ ಅದಕ್ಕೇ ಅವರು ಅವಿವಾಹಿತರಾಗಿಯೇ ಉಳಿದಿರಬೇಕು.

ಬಣ್ಣಬಣ್ಣದ ಹೊದಿಕೆಯ ಹಾಗಿದೆ ರಾಣಿಯ ಜೀವನ, ಅವಳ ಜೀವನದಲ್ಲಿ ಪ್ರವೇಶಿಸಿದ್ದ ಪ್ರತಿಯೊಂದು ವ್ಯಕ್ತಿಯ ಬಣ್ಣ ಅಲ್ಲಿದ್ದರೂ ಆಕೆ ತನ್ನ ಆತ್ಮದ ಬಣ್ಣವನ್ನು ಬಹು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾಳೆ ಅನ್ನುವುದನ್ನು ಮೇಡಂ ಒಪ್ಪಲೇಬೇಕು.

ಫ಼್ರೆಂಚ್ ಜನತೆಗಾಗಿ ರಾಣಿ ಏನನ್ನೂ ಮಾಡಲಿಲ್ಲ, ಆಕೆ ಮೂರ್ಖಳಿದ್ದಳು ಅನ್ನುವುದು ನಿಜವಾದರೂ ಆಕೆ ಎಂದೂ ಕ್ರೂರಳಾಗಿರಲಿಲ್ಲ. ಮೋಝಾರ್ಥನ ಜೊತೆ ಮದುವೆಯಾಗಿ ಆಕೆಯೂ ಸುಖವಾಗಿರಬಹುದಿತ್ತು. ರಾಜಕಾರಣದಲ್ಲಿ, ಲೋಕಕಲ್ಯಾಣದಲ್ಲಿ ಆಕೆ ಎಂದೂ ಮೂಗು ತೂರಿಸಲಿಲ್ಲ. ಸಾಮಾನ್ಯ ಸ್ತ್ರೀಯಂತೆ ಆಕೆ ಸಂಸಾರಸ್ಥ ಜೀವನ ನಡೆಸುತ್ತಿದ್ದಳು. ಸಿಂಹಾಸನದ, ಅಧಿಕಾರದ ಮೋಹ ರಾಣಿಗಿತ್ತು ಅನ್ನುವ ಒಂದಂಶದ ಪುರಾವೆಯೂ ಮೇಡಂನವರಿಗೆ ಎಲ್ಲೂ ಸಿಕ್ಕಿಲ್ಲ. ಚಿಕ್ಕ ವಯಸ್ಸಿನಲ್ಲೇ ಅಪರಿಚಿತ ಸಂಸ್ಕೃತಿಯ ಮನುಷ್ಯನೊಂದಿಗೆ ಆದ ವಿವಾಹ, ಅವನೊಂದಿಗೆ ಹೊಂದಿಕೊಂಡು ಹೋಗುವಾಗ ಆಕೆ ಪಟ್ಟ ಬವಣೆ, ಜೊತೆಗೆ ನಿಷ್ಕ್ರೀಯ ಪತಿ ಇವುಗಳಿಂದ ಆಕೆ ಎಷ್ಟು ಹೆದರಿರಬಹುದು! ಎಷ್ಟು ನೊಂದಿರಬಹುದು! ಆಗಿನ ಕಾಲದಲ್ಲಿ ೧೪-೧೫ ವರ್ಷದ ಹುಡುಗಿಯರು ಇಂದಿನಂತೆ ಸ್ವತಂತ್ರವಾಗಿ, ಸ್ವಚ್ಛಂದವಾಗಿರಲು ಸ್ಸಾಧ್ಯವಿರಲಿಲ್ಲ ಅನ್ನುವುದನ್ನು ಗಮನಕ್ಕೆ ತೆಗೆದುಕೊಂಡರೆ ರಾಣಿಯ ಅವಸ್ಥೆ ಅರ್ಥವಾಗುತ್ತದೆ. ವಯಸ್ಸಿನ ಹದಿನಾರನೆಯ ವರ್ಷದ ಮಹತ್ವ ಅನ್ನುವುದಕ್ಕಿಂತ ಆ ವಯಸ್ಸಿನಲ್ಲಾಗಬಹುದಾದಂತಹ ಅನಾಹುತದ ಬಗ್ಗೆ ಮಾನ್ಯತೆ ಕೊಡುವ ನಮ್ಮ ಸಂಸ್ಕೃತಿ ರಾಣಿ ಹೀಗೇಕೆ ವರ್ತಿಸಿದಳು ಅನ್ನುವುದರ ಮೇಲೆ ಬೆಳಕು ಬೀರುತ್ತದೆ. ರಾಣಿ ಕಡೆಯವರೆಗೆ ಹಸಿದೇಯಿದ್ದಳು. ಆ ಹಸಿವು ಕೇವಲ ಶರೀರ ಸುಖದ್ದಾಗಿರಲಿಲ್ಲ, ಅದರ ಜೊತೆಗೆ ಪ್ರಸ್ಥಾಪಿಸಲ್ಪಡುವ ಸಹಜೀವನದ ಬಂಧನ ಆಕೆಗೆ ಅಪರಿಚಿತವಾಗಿಯೇ ಉಳಿಯಿತು. ದೇಹ ಹಾಗೂ ಮನಸ್ಸಿನಿಂದ ದೂರವಾಗುತ್ತಿದ್ದ ಪತಿಯನ್ನಾಕೆ ಎಂದೋ ಸ್ವೀಕರಿಸಿಯಗಿತ್ತು, ಆದರೆ ಒಳತುಡಿತವನ್ನು ಮೆಟ್ಟಿ ನಿಲ್ಲುವುದು ಸಾಧ್ಯವಿತ್ತೆ? ಇಂತಹ ಪರಿಸ್ಥಿಯಲ್ಲಿ ಮುಂದೆ ಆರಂಭವಾಗಿತ್ತು ಅಲ್ಪವಯಸ್ಸಿನಲ್ಲೇ ಸುಖಕ್ಕಾಗಿ ಹುಡುಕಾಟ. ಶ್ರೀಮಂತ ರಾಜಮನೆತನಕ್ಕೆ ಸೇರಿದ್ದವಳಾದ್ದರಿಂದ ಆಕೆ ಇಂತಹ ಶೋಕಿಗಳನ್ನು ಪೂರೈಸಿಕೊಳ್ಳಬಲ್ಲವಳಾಗಿದ್ದಳು ಅನ್ನುವುದು ಅವಳ ಸುದೈವ ಹಾಗೂ ದುರ್ದೈವ ಕೂಡ. ಅವಳ ಬಿಡಿ ಬಿಡಿ ಜೀವನವನ್ನು ಒಂದು ಸೂತ್ರದಲ್ಲಿ ಬಂಧಿಸಿಡಲು ಆಕೆಗೊಂದು ಮಗು ಕೂಡ ಅನೇಕ ವರ್ಷಗಳ ಕಾಲ ಹುಟ್ಟಲಿಲ್ಲ. ಅವಳನ್ನು ಹೆದರಿಸಿ, ಬೆದರಿಸಿ ಸರಿದಾರಿಗೆ ತರುವ ಅಥವಾ ಪ್ರೀತಿಯ ನಾಲ್ಕು ಮಾತುಗಳನಾಡುವವರೂ ಯಾರೂ ಇರಲಿಲ್ಲ. ಅವಳ ತಾಯಿಯನ್ನು ಬಿಟ್ಟರೆ, ತಾಯಿಗಿಂತ ಆಸ್ಟ್ರಿಯಾದ ಮಹಾರಾಣಿ ಥೆರೇಸಾ ಎಂದೇ ಅವಳ ಪರಿಚಯ ರಾಣಿಗಿದ್ದದ್ದು. ಫ಼್ರಾನ್ಸನ ಸಿಂಹಾಸನದ ಜವಾಬ್ದಾರಿ ಹೊರುವ ಜಾಣ್ಮೆ, ಕೆಚ್ಚೆದೆ ಲೂಯಿಗಾಗಲಿ, ಅಥವಾ ಮಾರಿಗಾಗಲಿ ಇರಲಿಲ್ಲ ಅನ್ನುವುದು ಥೆರೇಸಾಗೆ ಚನ್ನಾಗಿ ಗೊತ್ತಿತ್ತು. ಆದ್ದರಿಂದ ಆಕೆ ತನ್ನ ಮಗಳಿಗೆ ಪತ್ರಗಳ ಮೂಲಕ ಸೂಚನೆಗಳನ್ನು ಕೊಡುತ್ತಿದ್ದಳು.

‘ರಾಜನ ಸಾಧಾರಣ ಬದುಕು ಎಲ್ಲರಿಗೂ ಗೊತ್ತು, ಆದ್ದರಿಂದ ನಾಳೆ ಫ಼್ರಾನ್ಸ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದರೆ ನಿನ್ನ ಈ ಖರ್ಚುಗಳ ಲೆಕ್ಕಾಚಾರಕ್ಕೆ ನೀನೇ ಉತ್ತರಿಸಬೇಕಾಗುತ್ತದೆ, ಅದಕ್ಕಾಗಿ ಪ್ರಜೆಗಳು ನಿನ್ನ ರುಂಡ ಹಾರಿಸಲಿಕ್ಕೂ ಸಾಕು’ ಎಂದೆಲ್ಲ ಎಚ್ಚರಿಸುತ್ತಿದ್ದಳು. ಆದರೆ ಇವೆಲ್ಲ ಚಿಕ್ಕ ರಾಣಿಗೆ ಹೇಗೆ ಅರ್ಥವಾಗಬೇಕು? ಕೆಲವು ವಿಷಯಗಳು ಅನುಭವದಿಂದಲೇ ಅರ್ಥವಾಗುತ್ತವೆ ಅನ್ನುವುದು ನಿಜ, ಆಗಲೇ ಮಾನವ ಅನುಭವಸ್ಥ ಅನಿಸಿಕೊಳ್ಳುತ್ತಾನೆ.

ತ್ರಿಯೋನಾದ ಹಸಿರು ಹುಲ್ಲಿನ ಮೇಲೆ ಮಲಗಿದ ರಾಣಿಗೆ ದೇಶದ ಹಿತ, ಜನ ಹಿತದ ಬಗ್ಗೆ ಯಾವುದೇ ಚಿಂತೆಯಿರಲಿಲ್ಲ ಅನ್ನುವುದಕ್ಕಿಂತ ಆ ವಿಚಾರ ಅವಳಿಗೆಂದೂ ಗೊತ್ತೇಯಿರಲಿಲ್ಲ ಅನ್ನಬಹುದು. ಈಗಿನ ಸ್ತ್ರೀಯರು ತುಂಬ ಬುದ್ಧಿವಂತರು ಅನ್ನುವುದು ಮೇಡಂನವರ ಅಂಬೋಣ. ವೈಮಾನಿಕರು, ಡಾಕ್ಟರು, ಹಾಗೂ ಮೇಡಂನವರಂತೆ ಹೊರ ಜಗತ್ತಿನಲ್ಲಿ ಹೆಸರು ಗಳಿಸಿರುವ ಸ್ತ್ರೀಯರ ಹಾಗೆ ಸಂಸಾರದ ಮಾತುಕತೆಗಳಲ್ಲಿ ಸುಖ ಕಾಣುವ ಸ್ತ್ರೀಯರು ಕೂಡ ಬಹಳಷ್ಟಿದ್ದಾರೆ. ರಾಣಿಯೂ ಅವರಲ್ಲೊಬ್ಬಳು. ಆದರೆ ಸ್ತ್ರೀ ಸಾಧನೆಯ ಕನ್ನಡಿಯಿಂದ ರಾಣಿಯನ್ನು ನೋಡುವಾಗ ಮೇಡಂ ಆಕೆಯ ಸೌಂದರ್ಯ ದೃಷ್ಟಿ ಹಾಗೂ ಆಕೆಯ ಕಲಾ ಸಂಪನ್ನತೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಅವರ ಪ್ರಕಾರ ಇವೆಲ್ಲವನ್ನೂ ದುಡ್ಡಿನಿಂದ ಕೊಳ್ಳಬಹುದು. ಆದರೆ ಮೇಡಂ, ತ್ರಿಯೋನಾದ ಅರಮನೆ ಕೇವಲ ವಿಲಾಸದ ಚೈನಿಯ ಸ್ಥಳವಾಗಿರಲಿಲ್ಲ.

ಅಲ್ಲಿ ರಾಣಿ ನಾಟ್ಯ ಪರಂಪರೆಯ ಒಂದು ಚಳುವಳಿಯನ್ನೇ ಪ್ರಾರಂಭಿಸಿದ್ದಳು. ದೇಶವಿದೇಶದ ಹೆಸರಾಂತ ಕಲಾವಿದರು ತಮ್ಮ ಕಲೆಯನ್ನು ಸಾದರಪಡಿಸಲು ಒಂದು ದೊಡ್ಡ ಥಿಯೇಟರನ್ನೇ ನಿರ್ಮಿಸಿದಳು ರಾಣಿ. ತನ್ನ ವಿನಂತಿಗೆ ಬೆಲೆಕೊಟ್ಟು ಬರುವ ಕಲಾವಿದರಿಗಾಗಿ ಉತ್ತಮವಾದ ವ್ಯವಸ್ಥೆಯನ್ನು ಏರ್ಪಡಿಸಿದ್ದಳು. ಅನೇಕ ನಾಟ್ಯ ಪ್ರಯೋಗಗಳು ಏರ್ಪಡಿಸಲ್ಪಡುತ್ತಿದ್ದವು. ಕೆಲವು ನಾಟಕಗಳಲ್ಲಿ ರಾಣಿಯೂ ಅಭಿನಯಿಸಿದ್ದಳು. ತನ್ನ ಅಪೂರ್ಣ ಕನಸು, ಆಕಾಂಕ್ಷೆಗಳನ್ನಾಕೆ ತನ್ನ ಪಾತ್ರಗಳ ಮೂಲಕ ಸಾದರಪಡಿಸುತ್ತಿದ್ದಳು. ಕಲಾವಿದರಿಗೆ ತಮ್ಮ ಕಲೆಯನ್ನು ಸಾದರಪಡಿಸಲು ಹುರುಪು ಬರಲೆಂದು ಅಕ್ಕಪಕ್ಕದ ಪರಿಸರವನ್ನು ಪ್ರೇಕ್ಷಣಿಯ ಹಾಗೂ ರಮಣೀಯವಾಗಿ ಮಾರ್ಪಡಿಸಿದಳು. ಆಗಾಗ ನಾಟ್ಯ ಶಿಬಿರಗಳನ್ನು ಆಯೋಜಿಸಿ ನಾಟ್ಯ ಶಾಲೆಗಳನ್ನು ನಿರ್ಮಿಸಿದಳು. ಮೇಡಂ ನಿಮ್ಮ ದೃಷ್ಟಿಯಲ್ಲಿ ಇವಕ್ಕೆಲ್ಲ ಜನತೆಯ ಹದಿನಾಲ್ಕು ಸಾವಿರ ಪೌಂಡ್ ಖರ್ಚಾಯಿತು, ಆದರೆ ನನ್ನ ದೃಷ್ಟಿಯಲ್ಲಿ ಅನೇಕ ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ದೊರಕಿತು. ಮುಂದೆ ಫ಼್ರಾನ್ಸನಲ್ಲಿ ವಿಕಸಿತವಾದ ಥಿಯೇಟರ್ ಮುವ್‌ಮೆಂಟ್‌ನ ಅಡಿಪಾಯ ರಾಣಿಯೇ ಭದ್ರಪಡಿಸಿದಳು.

ರಾಣಿಗೆ ಸಿಂಹಾಸನದ ಆಸೆ ಇದ್ದಿದ್ದರೆ, ಅಥವಾ ತನ್ನ ತಾಯಿಯಂತೆ ಕುಟಿಲ ನೀತಿಗಳನ್ನು ಬಲ್ಲವಳಾಗಿದ್ದರೆ ಆಕೆ ಫ಼್ರಾನ್ಸಿನ ದರ್ಬಾರಿನಲ್ಲಿ ದೊಡ್ಡ ಅಧಿಕಾರಿಗಳನ್ನು ಅಂತೆಯೇ ಮುಂದೆ ಕ್ರಾಂತಿಯ ಕಾಲದಲ್ಲಿ ಲೋಕಪ್ರತಿನಿಧಿಗಳನ್ನು ಸೇರಿಸಿಕೊಳ್ಳಬಹುದಿತ್ತು. ಆದರೆ ಆ ಸಾಮಾನ್ಯ ಹೆಂಗಸಿಗೆ ಕುಟಿಲ ನೀತಿಗಳನ್ನು ರಚಿಸಲಾಗಲೇಯಿಲ್ಲ. ರಾಜನು ರಾಜ್ಯ ಕಾರುಭಾರನ್ನು ನೋಡಿಕೊಳ್ಳುವುದು ಹಾಗೂ ರಾಣಿ ಮಕ್ಕಳನ್ನು ಹಾಗೂ ಮನೆತನದ ರೀತಿನೀತಿಗಳನ್ನು ಸಂಭಾಳಿಸಿಕೊಂಡು ತಮ್ಮಹವ್ಯಾಸ ಹಾಗೂ ಕಲೆ ಜೋಪಾನ ಮಾಡುವುದು ಅನ್ನುವುದು ಸಮಾಜದ ಪ್ರತಿಯೊಂದು ಸಮೂಹದಲ್ಲಿ, ರಾಜ್ಯದಲ್ಲಿ ಪ್ರಂಪರಾಗತವಾಗಿ ನಡೆದು ಬಂದಿದೆ. ಇಂದು ಕೂಡ ಎಷ್ಟೋ ಉದ್ಯೋಗಿಗಳ, ರಾಜಕಾರಣಿಗಳ ಪತ್ನಿಯರು ತಮ್ಮ ಪತಿಯ ಕಾರ್ಯದಲ್ಲಿ ಸ್ವಲ್ಪವೂ ಆಸಕ್ತಿಯಿಲ್ಲದವರು ವಿವಿಧ ಕಲಾಕ್ಷೇತ್ರದಲ್ಲಿ ಸ್ವತಂತ್ರವಾಗಿ ಸಾಧನೆ ಮಾಡುವುದನ್ನು ನೋಡುತ್ತೇವೆ. ಹೀಗಿದ್ದ ಮೇಲೆ ಹದಿನೆಂಟು ವರ್ಷದ ರಾಣಿ ಮಾತ್ರ ತನ್ನ ಪತಿ ಜೀವಂತವಾಗಿರುವಾಗ, ಆರೋಗ್ಯವಂತನಾಗಿರುವಾಗ ರಾಜ್ಯವನ್ನಾಳಬೇಕು ಅನ್ನುವ ಅಪೇಕ್ಷೆಯೆಕೆ?

ರಾಣಿಗೆ ಸ್ವೈರಾಚಾರಿ ಅನ್ನುವ ಲೇಬಲ್ ಅಂಟಿಸಿ ಫ಼್ರೆಂಚ್ ಜನತೆಯ ದುಖಃಕ್ಕೆ ರಾಣಿಯೇ ಕಾರಣ ಅನ್ನುವಂತಹ ಆರೋಪಗಳನ್ನು ರಾಣಿಯ ಮೇಲೆ ಹೊರಿಸುವ ಮೇಡಂನವರ ದೃಷ್ಟಿಕೋನ ಒನ್ ವೇ ಹಾಗೂ ಹಟಮಾರಿತನದ್ದು ಅನಿಸುತ್ತದೆ.

Friday, April 2, 2010

ಅನಂತ ವೇದನೆಯ ರಾಣಿ-೩

ಅನಂತ ವೇದನೆಯ ರಾಣಿ-೩


ಮೇಡಂ:
ಹೌದು ರಾಣಿ ನಿಂಫೋಮೇನಿಯಾಕ್ ಅನ್ನುವುದನ್ನು ಸಾಬೀತುಪಡಿಸುವ ಸಾಕಷ್ಟು ಪುರಾವೆಗಳನ್ನು ಅಭ್ಯಸಿಸಿದ್ದೇನೆ ನಾನು. ರಾಣಿಗೆ ಬರೀ ಸುಖ ಬೇಕಿತ್ತು, ಬೇರೆ ಬೇರೆ ರೀತಿಯಿಂದ ಪಡೆಯಲ್ಪಡುವ ಸುಖ. ಯಾರ ಮುಲಾಜಿಲ್ಲದೆ ಆ ಸುಖವನ್ನಾಕೆ ಪಡೆದುಕೊಂಡಳು ಕೂಡ. ‘ಏಳು ವರ್ಷಗಳು ಆಕೆ ಮಕ್ಕಳಿಲ್ಲದೆ ದುಖಃ ಪಡುತ್ತಿದ್ದಳು’ ಅನ್ನುವ ಸುಚಿತ್ರಾಳ ದಾವೆಯನ್ನು ನಾನು ಒಪ್ಪುವುದಿಲ್ಲ. ಅವಳದೇ ಆದ ಸುಖಮಯ ಜೀವನದಲ್ಲಿ ಅಳುವುದು ವ್ಯಥೆ ಪಡುವುದು ಇರಲೇಯಿಲ್ಲ.
ನಿಶಾಚರ ಪ್ರಾಣಿಗಳ ತರಹ ಅವಳ ದಿನ ಕೂಡ ರಾತ್ರಿಯೇ ಆರಂಭವಾಗುತ್ತಿತ್ತು. ನಾಟಕ, ಬಾಲ್ ಡಾನ್ಸ್, ಇಸ್ಪಿಟ್ ಆಡುವುದು, ಮುಂದೊಂದು ದಿನವಂತೂ ‘ಆರ್ಜಿ’ ಪಾರ್ಟಿಗಳು’, ಹೀಗೆ ಅವಳ ಸುಖಕರ ಪ್ರವಾಸ ಸಾಗಿತ್ತು. ಬಾಲ್ ಡಾನ್ಸ್‌ಗಾಗಿ ಬರುತ್ತಿದ್ದ ಎಷ್ಟೋ ಸುಂದರ ತರುಣರು ಅವಳ ಸಹವಾಸಕ್ಕಾಗಿ ಹಾತೊರೆಯುತ್ತಿದ್ದರು. ಎಷ್ಟೋ ಶ್ರೀಮಂತ ಉಮರಾವ್‌ರು ಬರೆದಿಟ್ಟ ತಮ್ಮ ನೆನಪಿನ ಹೊತ್ತಿಗೆಗಳಲ್ಲಿ ರಾಣಿಯ ಜೊತೆ ಉಂಡ ಸುಖದ ವರ್ಣನೆಯಿದೆ. ಅದೆಲ್ಲ ಸುಳ್ಳು ಹೇಗಾಗುತ್ತದೆ? ದಿನಗಳೆದಂತೆ ತನ್ನದೇ ವಯಸ್ಸಿನ ಗಂಡಸರ ಆಕರ್ಷಣೆ ಆಕೆಗೆ ಅನಿವಾರ್ಯವಾಗುತ್ತ ಬಂತು. ವಿಲಾಸಿ ಜೀವನದ ಜೊತೆಗೆ ಬೇಕಾದಷ್ಟು ಸಮಯ ಕೂಡ ಸಿಗುತ್ತಿತ್ತು.
ತಂತಮ್ಮ ಕೆಲಸಗಳನ್ನು ಮುಗಿಸಿ ಮನೆಗೆ ಮರಳುವ ಪ್ರಜಾಜನರ ಸುಸ್ತಾದ ಮುಖಗಳನ್ನಾಕೆ ದಿನಾ ನೋಡುತ್ತಿದ್ದಳು. ಅವರ ನಮಸ್ಕಾರಗಳನ್ನು ದಿಮಾಖಿನಿಂದ ಸ್ವೀಕರಿಸುತ್ತಿದ್ದಳೇ ವಿನಹ ಚಳಿಯಲ್ಲಿ ನಡುಗುತ್ತಿದ್ದ ಬಡ ಪ್ರಜೆಗಾಗಿ ಆಕೆಯ ಮನಸ್ಸು ಎಂದೂ ಮರುಗಲಿಲ್ಲ. ತಾನು ಮಾಡುತ್ತಿರುವ ಈ ಮೋಜು ಈ ಸಾಮಾನ್ಯ ಜನ ಕಟ್ಟುತ್ತಿರುವ ಕರದ ದುಡ್ಡಿನಿಂದ ಅನ್ನುವುದವಳಿಗೆ ಅರ್ಥವಾಗಲೇಯಿಲ್ಲ. ಅವಳ ನೆನಪಿನಲ್ಲಿದ್ದದ್ದು ಪ್ಯಾರಿಸ್‌ನಲ್ಲಾದ ಅವಳ ಭವ್ಯ ಸ್ವಾಗತ, ಪ್ಯಾರಿಸ್‌ನ ಝಗಮಗಿಸುವ ರೂಪ. ಕಷ್ಟಪಟ್ಟು ಜೀವನ ಸಾಗಿಸುತ್ತಿರುವ ಜನತೆಯತ್ತ ಆಕೆ ಕಣ್ಣೆತ್ತಿಯೂ ನೋಡಲಿಲ್ಲ. ಅವರ ಕಷ್ಟಗಳನ್ನೆಂದೂ ಅರ್ಥಮಾಡಿಕೊಳ್ಳಲಿಲ್ಲ.
ಮನಸ್ಸು ಮಾಡಿದ್ದಿದ್ದರೆ ಆಕೆ ಫ಼್ರಾನ್ಸಿನ ಮಹಾರಣಿಯಾಗಬಹುದಿತ್ತು. ಅವಳ ಆಕರ್ಷಕ ರೂಪ, ಅವಳ ಮೊದಲ ದರ್ಶನ ಜನತೆಯ ಮನಸ್ಸಿನಲ್ಲಿ ಅಚ್ಚೊತ್ತಿತ್ತು, ಬೆಳ್ಳಗಿನ ತ್ವಚೆಯ ಫ಼್ರೆಂಚ್ ಜನತೆಗೆ ರಾಣಿಯ ಅಸಾಮಾನ್ಯ ಗುಲಾಬಿ ಬಣ್ಣದ ಪೋರ್ಚೆಲಿನ್ ವರ್ಣ, ನೀಲಿ ಕಣ್ಣುಗಳು, ಹಂಸ ನಡಿಗೆಗಳ ಆಕರ್ಷಣೆ ಮೊದಲ ಕೆಲವು ದಿನ ಬಹಳಷ್ಟಿತ್ತು. ಪಾರ್ಲಿಮೆಂಟಿನ ಯಾವುದೇ ಸಭೆಗಾಕೆ ಹಾಜರಾಗಲಿಲ್ಲ, ಯವುದೇ ರೀತಿಯ ರಾಜಕೀಯ ಚರ್ಚೆಗಳಲ್ಲಿ ಭಾಗವಹಿಸಲಿಲ್ಲ, ಹಾಗೂ ಪ್ರಶಾಸನದ ಯಾವುದೇ ಕಾಗದ ಪತ್ರಗಳನ್ನಾಕೆ ತನ್ನ ಕೈಯಲ್ಲಿ ಹಿಡಿಯಲಿಲ್ಲ.
ಇವೆಲ್ಲದಕ್ಕೆ ಬೇಕಾದ ಸ್ಥಿರಚಿತ್ತ ವೃತ್ತಿ ಹಾಗೂ ಅಪಾರ ಬುದ್ಧಿಮತ್ತೆ ರಾಣಿಯಲ್ಲಿರಲಿಲ್ಲ. ಅವಳ ಚಂಚಲ ಮನಸ್ಸು ಬರೀದೇ ಇಂದ್ರೀಯ ಸುಖಕ್ಕಾಗಿ ಹಾತೊರೆಯುತ್ತಿತ್ತು. ಈ ವಿಧಾನಕ್ಕೆ ಪುಷ್ಟಿ ಕೊಡುವ ಅನೇಕ ಉದಾಹರ‍ಣೆಗಳು ದೊರೆಯುತ್ತವೆ. ರಾಣಿಯ ಚರಿತೆಯನ್ನು ಅಭ್ಯಸಿಸುವಾಗ ನಾನು ಆ ಕಾಲದ ಭೌಗೋಲಿಕ ಪಾರ್ಶ್ವಭೂಮಿಯನ್ನು ಗಮನದಲ್ಲಿಟ್ಟು ಅಭ್ಯಸಿಸಿದಾಗ ನೊಂದಾಯಿಸಿಡುವಂತಹ ಒಂದು ಪ್ರಸಂಗ ನನ್ನ ಗಮನಕ್ಕೆ ಬಂತು. ಅದೇ ಹೆಕ್ಸಾಗೋನ್. ಅಂದರೆ ಷಟ್ಕೋನಿ ಆಕಾರದ ಫ಼್ರಾನ್ಸಿನಲ್ಲಿ ರಾಣಿ ಕೇವಲ ಆರು ಪ್ರಾಂತ್ಯಗಳಲ್ಲೇ ವಿಹರಿಸಿದ್ದಾಳೆ. ಈ ಪ್ರಾಂತ್ಯಗಳು ಮತ್ತು ಆಕೆಯ ವಾಸ್ತವ್ಯ ಇದರ ಪುರಾವೆಯನ್ನು ನಾನು ಫ಼್ರಾನ್ಸನ ನಕ್ಷೆಯಲ್ಲಿ ನಮೂದಿಸಿದ್ದೇನೆ. ಇದರಿಂದ, ತಾನು ಯಾವ ದೇಶದ ರಾಣಿಯೋ ಆ ದೇಶದಲ್ಲಿ ವಾಸಿಸುತ್ತಿರುವ ಜನತೆ, ಅವರ ಸಂಸ್ಕೃತಿ ಹಾಗೂ ಪ್ರಾಂತ್ಯದ ರಚನೆಗಳನ್ನು ತಾನು ತಿಳಿದುಕೊಳ್ಳಬೇಕು ಅನ್ನುವ ಬುದ್ಧಿ ಕೂಡ ರಾಣಿಗಿರಲಿಲ್ಲಲ ಅನ್ನುವುದು ಗೊತ್ತಾಗುತ್ತದೆ.
ಅವಳ ‘ತ್ರಿಯೋನಾ’ ದ ಅರಮನೆ. ಭೋಗವಿಲಾಸವೇ ಮೂರ್ತಿವೆತ್ತ ಪ್ರತೀಕವದು. ಅರಮನೆಯ ಹೊರಗೆ ಜಪಾನಿ ಲ್ಯಾಂಡ್ ಸ್ಕೇಪ್, ನೀಲಿ ಸರೋವರ, ಏಶಿಯಾದಿಂದ ತರಿಸಿದ್ದ ನವಿಲುಗಳು, ಚೈನಾದಿಂದ ಜೋಪಾನವಾಗಿ ತರಿಸಿದ್ದ ಚಿನ್ನದ ಹೊಳಪುಳ್ಳ ಮೀನುಗಳು, ಹಾಗೂ ಆಫ಼್ರಿಕಾದಿಂದ ತರಿಸಿದ್ದ ರಾಜಹಂಸಗಳು ಇವುಗಳಿಂದಾಗಿ ಆ ಅರಮನೆಗೆಗೊಂದು ಸುಂದರ ಮೆರಗು ಬಂದಿತ್ತು. ಅರಮನೆಯ ಗೋಡೆಗಳು, ಫ಼ರ್ನಿಚರ್ ಹಾಗೂ ಕಲಾಕುಸುರಿಯ ವಸ್ತುಗಳನ್ನು ಅತ್ಯಂತ ಜೋಪಾನವಾಗಿ ಮಂಡಿಸಲಾಗಿತ್ತು. ಸಾವಿರ ಕಪಾಟುಗಳಲ್ಲಿ ಚಿನ್ನಾಭರಣಗಳು, ಬಗೆಬಗೆ ವಿನ್ಯಾಸದ ವಸ್ತುಗಳು ತುಂಬಿತುಳುಕುತ್ತಿದ್ದವು. ಸುಚಿತ್ರಾಗೆ ಇವುಗಳಲ್ಲಿ ರಾಣಿಯ ಉಚ್ಚ ಅಭಿರುಚಿ ಕಾಣಿಸುತ್ತದೆ, ನಿಜಕ್ಕೂ ಸುಚಿತ್ರಾಳ ಇನ್ನೋಸೆನ್ಸ್ ಬಗ್ಗೆ ಆಶ್ಚರ್ಯವಾಗುತ್ತದೆ. ಇದರಲ್ಲಿ ರಾಣಿಯ ಸೌಂದರ್ಯ ಸೃಷ್ಟಿ ಎಲ್ಲಿಂದ ಬಂತು? ಎಲ್ಲ ಹಣದ ಮಹಿಮೆ, ದುಡ್ಡು ಬಿಸಾಕಿದರೆ ಬೇಕಾದ್ದು ಸಿಗುತ್ತದೆ ಅನ್ನುವುದೊಂದು ಸುಲಭದ ಸಮೀಕರಣ. ರಾಣಿಯ ಹತ್ತಿರ ಸಾಕಷ್ಟು ದುಡ್ಡಿತ್ತು, ಭಾರಿ ವಸ್ತುಗಳನ್ನು ಖರೀದಿಸಿ ‘ಹಣ ಪಾವತಿಸತಕ್ಕದ್ದು’ ಎಂದು ಬರೆದು ಸಹಿ ಮಾಡಿದರೆ ಮುಗಿಯಿತು, ಆದರೆ ಆ ಹಣ ಪಾವತಿಸಲು ಬಡ ಜನತೆ ಹಗಲು ರಾತ್ರಿ ದುಡಿಯುತ್ತದೆ ಅನ್ನುವುದು ಅವಳಿಗೆ ಅರ್ಥವಾಗುತ್ತಿರಲಿಲ್ಲವೆ?
ಒಂದಂತೂ ನಿಜ ಭಾರತೀಯ ನವಾಬರಂತೆ ರಾಣಿ ತನ್ನ ಒಡವೆಗಳನ್ನು ಬೀರುವಿನಲ್ಲಿ ಕೂಡಿ ಹಾಕಲಿಲ್ಲ, ದಿನದ ಪ್ರತಿ ಪ್ರಹರದಲ್ಲೂ ವಿವಿಧ ರೀತಿಯ ಶೃಂಗಾರ ಮಾಡಿಕೊಂಡು ಅವುಗಳನ್ನು ಉಪಯೋಗಿಸುತ್ತಿದ್ದಳು. ಬೆಳಿಗ್ಗೆ ನಾಲ್ಕು ಘಂಟೆಗೆ ಅರಮನೆಗೆ ಮರಳುತ್ತಿದ್ದ ರಾಣಿ ಸೂರ್ಯ ನೆತ್ತಿಗೇರಿದ ಮೇಲೆಯೇ ಏಳುತ್ತಿದ್ದದ್ದು. ತದನಂತರ ‘ಬೆರ್ತ್ಯಾ ಹಾಗೂ ಲಿಯೋನಾರ್ದ’ ಅನ್ನುವ ತನ್ನ ಡ್ರೆಸ್ ಡಿಸೈನರ್ ಜೊತೆ ಆ ದಿನದ ವಿವಿಧ ಉಡುಪುಗಳ, ಕೇಶಾಲಂಕಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸುತ್ತಿದ್ದಳು. ಲಿಯೋನಾರ್ದ ಮಣ್ಣಿನ ವಿವಿಧ ಮೂರ್ತಿಗಳನ್ನು ತಯಾರಿಸುವಂತೆ ರಾಣಿಯ ಕೂದಲಿನ ಬೇರೆಬೇರೆ ಚಿತ್ರವಿಚಿತ್ರ ವಿನ್ಯಾಸಗಳನ್ನು ರಚಿಸುತ್ತಿದ್ದ, ಮತ್ತೆ ಬಿಚ್ಚುತ್ತಿದ್ದ. ಕೆಲವೊಮ್ಮೆ ಎಂಟು ಗಂಟುಗಳ ರಚನೆ, ಕೆಲವೊಮ್ಮೆ ಕೂದಲುಗಳನ್ನು ಗುಂಗುರು ಮಾಡಿ ಬಿಡುತ್ತಿದ್ದ. ತ್ರಿಯೋನಾದ ಅರಮನೆಯಲ್ಲಿ ಖಾಸಾ ಸಮಾರಂಭಗಳಲ್ಲಿ ಖಾಸಾ ಥೀಮ್ಸಗಳಿರುತ್ತಿದ್ದವು. ಅದಕ್ಕನುಸಾರವಾಗಿ ರಾಣಿಯ ವಸ್ತ್ರವಿನ್ಯಾಸ ಹಾಗೂ ಕೇಶವಿನ್ಯಾಸವಿರುತ್ತಿತ್ತು. ಒಮ್ಮೆಯಂತೂ ಬಹು ಉದ್ದದ ಮೇಣದ ಬತ್ತಿಯನ್ನು ತಲೆಯಮೇಲಿಟ್ಟು ಅದರ ಸುತ್ತ ಕೂದಲನ್ನು ಸುತ್ತಿ ಒಂದು ರೀತಿಯ ಟಾವರನ್ನೇ ರಚಿಸಲಾಗಿತ್ತು. ಇಷ್ಟೆಲ್ಲ ಮಾಡಿದ ಮೇಲೆ ಆ ಟವರನ್ನು ಹೊತ್ತು ಹೋಗುವುದಕ್ಕೆ ಅರಮನೆಯ ಬಾಗಿಲುಗಳು ಸಾಕಷ್ಟು ಎತ್ತರವಾಗಿಲ್ಲ ಅನ್ನುವುದು ಗಮನಕ್ಕೆ ಬಂದು ತಕ್ಷಣವೇ ಕೆಲಸಗಾರರನ್ನು ಕರೆದು ಒಂದೇ ರಾತ್ರಿಯಲ್ಲಿ ಬಾಗಿಲುಗಳನ್ನು ಒಡೆದು ಅವುಗಳ ಚೌಕಟ್ಟನ್ನು ಎತ್ತರಿಸಿದಳು ರಾಣಿ. ಇದೆಲ್ಲವನ್ನು ನೋಡಿಯೂ ಕೂಡ ಎಲ್ಲರೂ ಸುಮ್ಮನಿರಬೇಕಾಯಿತೇ ಹೊರತು ಏನೂ ಮಾಡುವಂತಿರಲಿಲ್ಲ. ರಾಜ್ಯ ಶಕ್ತಿಯ ಎದುರು ಯಾವ ಶಕ್ತಿಯೂ ನಿಲ್ಲಲಾರದು.

ಹೀಗೆ ತನ್ನ ಚಿತ್ರ ವಿಚಿತ್ರ ಶೋಕಿಗಳನ್ನು ಪೂರೈಸಿಕೊಳ್ಳಲು, ಅದಕ್ಕಾಗಿ ಹಣ ಗಳಿಸಲು ರಾಣಿ ಇಸ್ಪಿಟ್ ಆಡಲಾರಾಂಭಿಸಿದಳು. ಹಾಕಿದ ಹಣವನ್ನು ಕಳೆದುಕೊಂಡಿದ್ದೇ ಅಲ್ಲದೆ ಗೆದ್ದ ಹಣವನ್ನೂ ಇದಕ್ಕೇ ಸುರಿದಳು.

ದುದೈವದಿಂದ ಸುಚಿತ್ರ ಈ ಎಲ್ಲ ಸತ್ಯದಿಂದ ದೂರ ಓಡುತ್ತಿದ್ದಾಳೆ. ರಾಣಿಯ ಚರ್ಚೆಯನ್ನು ವಸ್ತುನಿಷ್ಠವಾಗಿ ಮಾಡುವುದನ್ನು ಬಿಟ್ಟು ತುಂಬಾ ಭಾವನಾತ್ಮಕವಾಗಿ ವರ್ತಿಸುತ್ತಿದ್ದಾಳೆ. ಕಳೆದ ಎರಡು ದಿನಗಳಿಂದ ಅಂದರೆ ರಾಣಿಯ ವಾಸ್ತವ್ಯವಿದ್ದ ವರ್ಸಾಯದ ಅರಮನೆ, ಅವಳ ಅಂತಃಪುರ, ಅವಳ ಕತ್ತಲ ಕೋಣೆಗಳನ್ನು ನೋಡಿ ಬಂದಂದಿನಿಂದ ತುಂಬ ಹಳಹಳಿಸುತ್ತಿದ್ದಾಳೆ. ರಾಣಿಯ ಈ ರೀತಿಯ ನಡತೆಗೆ ಕಾರಣಗಳನ್ನು ಹುಡುಕಬೇಕು ಅನ್ನುತ್ತಿದ್ದಾಳೆ. ರಾಣಿಯ ತಪ್ಪು ವರ್ತನೆಯ ಬಗ್ಗೆ ಪೂಷ್ಟಿ ಕೊಡುವ, ಯುಕ್ತಿವಾದವನ್ನು ಮಂಡಿಸುವ ನಿಂಭಂದವನ್ನು ಬರೆಯುವ ಬದಲು ಅವಳ ನಿಜವಾದ ವ್ಯಕ್ತಿತ್ವ, ಅವಳ ನಡತೆಯಿಂದ ಫ಼್ರಾನ್ಸಿನ ಇತಿಹಾಸಕ್ಕೆ ಸಿಕ್ಕ ಹೊಸ ಆಯಾಮ, ತಾತ್ಕಾಲಿಕ ಸಮಾಜ ಜೀವನದ ಮೇಲಾದ ಪರಿಣಾಮಗಳು ಇವುಗಳೇ ನಿಭಂದದ ವಿಷಯಗಳಾಗಬೇಕು ಅನ್ನುವುದು ನನ್ನನಿಸಿಕೆ. ಈ ನಿಭಂದಕ್ಕೆ ಸುಚಿತ್ರಾಳ ಸಹಾಯ ಬಯಸಿ ನಾನು ತಪ್ಪು ಮಾಡಿದೆನೆ?

(ಮುಂದುವರೆಯುವುದು).

Wednesday, March 31, 2010

ಅನಂತ ವೇದನೆಯ ರಾಣಿ-೨

ರಾಣಿ:

‘ಕನ್ನಡಿ, ಏ ಕನ್ನಡಿ, ನಿಜ ಹೇಳು, ನಾನಿಷ್ಟು ಕೆಟ್ಟವಳೆ? ನಿಂದನೀಯಳೆ?’

ಇಂದಿನವರೆಗೆ ಕನ್ನಡೆಯೆದುರು ನನ್ನ ಪ್ರತಿಬಿಂಬವನ್ನು ಅದೆಷ್ಟೋ ಸಲ ಹೀಗೇ ಪ್ರಶ್ನಿಸಿದ್ದೇನೆ. ಬಹುಶಃ ಅದರ ಉತ್ತರವೂ ಭ್ರಮೆಯೇಯಿರಬೇಕು. ಹಾಗಾದರೆ ನಿಜ ಯಾವುದು? ದಶದಿಕ್ಕುಗಳಿಂದಲೂ ನಿನಾದಿಸುತ್ತಿರುವ ಈ ಚುಚ್ಚು ಘೋಷಣೆಗಳೇ?

‘ನರಿಯ ಈ ಮಾಯಾವಿ ರೂಪ ಭಸ್ಮವಾಗಲಿ’.

‘ಆಕೆ ಹಿಂದೆಯೂ ನಮ್ಮ ರಾಣಿಯಾಗಿರಲಿಲ್ಲ, ಮುಂದೆಯೂ ಆಗಲಾರಳು’.

‘ಏನು ನೋಡುತ್ತಿದ್ದೀರಿ? ಚಚ್ಚಿ ಹಾಕಿ ಆ ನಾಯಿಯನ್ನು, ಕಲ್ಲಿನಿಂದ ಚಚ್ಚಿರಿ’.

ಇಂತಹ ಘೋಷಣೆಗಳನ್ನು ನಿಲ್ಲಿಸಿ, ಹೇಗೆ ಸಹಿಸಲಿ ನಾನಿವುಗಳನ್ನು? ಯಾರಾದರೂ ನಿಲ್ಲಿಸಿ ಈ ಕ್ರೂರ ಆಟವನ್ನು, ನಾನು ಸ್ವಲ್ಪವೂ ಸಹಿಸಲಾರೆ, ನನ್ನ ಪ್ರಜೆಗಳು ನನ್ನನ್ನು ಕೊಲ್ಲಲು ಹೊರಟಿದ್ದಾರೆ, ಒಂದು ಕಾಲದಲ್ಲಿ ಜೈಕಾರ ಘೋಷಿಸಿರುವ ನಾಲಿಗೆಗಳು ಇಂದು ನನ್ನ ಚರಿತ್ರೆಯನ್ನು ಪ್ರಶ್ನಿಸುತ್ತಿವೆ. ಕೆಲವರ ಪ್ರಕಾರ ನಾನು ‘ಸಲಿಂಗ ಕಾಮಿ’, ಕೆಲವರ ಪ್ರಕಾರ ನಾನು ಸಮೂಹ..... ಕೆಲವರಂತೂ ನಾನು ನನ್ನ ಭೋಗದ ಅಗ್ನಿಕುಂಡಕ್ಕೆ ನನ್ನ ಮಗನನ್ನು ಬಲಿ ಕೊಟ್ಟಿದ್ದೇನೆ ಅನ್ನುತ್ತಿದ್ದಾರೆ. ನಾನು ಭ್ರಷ್ಟೆ, ಜನತೆಯ ಸಂಪತ್ತನ್ನ ವ್ಯಯ ಮಾಡಿದ್ದೇನೆ, ಬಡ ಜನತೆಯ ಬಗ್ಗೆ, ದೇಶದ ಬಗ್ಗೆ ನನಗ್ಯಾವ ಆತ್ಮೀಯತೆಯೂ ಇಲ್ಲ, ಫ಼್ರಾನ್ಸನ ಇಂದಿನ ಅಧಃಪತನಕ್ಕೆ ನಾನೇ ಕಾರಣ, ಅನ್ನುವ ಘೋಷಣೆಗಳ ಪ್ರತಿಗಳನ್ನು ತಯಾರಿಸಿ ನನ್ನ ಬಗ್ಗೆ ವಿಷಕಾರುವ ಸಲುವಾಗಿ ಜನರಲ್ಲಿಂದು ಹಂಚುತ್ತಿದ್ದಾರೆ. ವೃತ್ತಪತ್ರಿಕೆಯ ಕಾಲಂಗಳು ಕೂಡ ನನ್ನ ಬಗ್ಗೆ ಏನೆಲ್ಲ ಬರೆಯುತ್ತಿವೆ. ಯಾರೂ ಬಂದು ನನ್ನ ಮೇಲೆ ಕಲ್ಲೆಸೆಯಬಹುದಾಗಿದೆ! ನನಗೀಗ ನನ್ನವರೆನ್ನಬಹುದಾದವರು ಯಾರೂ ಇಲ್ಲ. ನಾನು ಒಂಟಿ.

‘ಅವಳಾದರೋ ಪಾಪಿಷ್ಟೆ, ಆದರೆ ಅವಳ ಮೇಲೆ ಕಲ್ಲೆಸೆಯುವ ಸಜ್ಜನರೆ ನಿಮ್ಮಲ್ಲಿ ಒಬ್ಬರಾದರೂ ಪುಣ್ಯವಂತರಿದ್ದೀರಾ?’ ಎಂದು ಕೇಳಲು ಜೀಜಸ್ ಕೂಡ ಬರಲಾರ. ನಿಜಕ್ಕೂ ನಾನಿಷ್ಟು ಪಾಪಿಯೆ? ನನ್ನ ತಪ್ಪೇನು? ನಾನು ಹೇಗೆ ನಡೆದುಕೊಳ್ಳಬೇಕಿತ್ತು? ಇಪ್ಪತ್ನಾಲ್ಕು ವರ್ಷಗಳ ಹಿಂದೆ ಇದೇ ಪ್ಯಾರಿಸ್‌ನ ಸುಶೋಭಿತ ರಸ್ತೆಗಳ ಮೇಲೆ ನನ್ನ ಮೆರವಣಿಗೆ ಎಷ್ಟು ಅದ್ದೂರಿಯಾಗಿ ಹೊರಟಿತ್ತು!

‘ರಾಜಾ-ರಾಣಿ ಚಿರಾಯುವಾಗಲಿ, ಫ಼್ರಾನ್ಸನ ಪವಿತ್ರ ಭೂಮಿಯ ಮೇಲೆ ರಾಣಿಗೆ ಸ್ವಾಗತ, ರಾಣಿಗೆ ಜಯವಾಗಲಿ’, ಎಂದು ಗಂಟಲು ಹರಿಯುವಂತೆ ಕಿರಿಚುತ್ತಿದ್ದರು. ಮದುವೆಯಾಗಿ ಗಂಡನ ಮನೆಗೆ ಬಂದ ದಿನ ಜನ ಅದೊಂದು ಶುಭ ಕಾರ್ಯವೆನ್ನುವಂತೆ ಆಚರಿಸಿದ್ದರು. ಹದಿನಾಲ್ಕು ವರ್ಷದ ಆಸ್ಟ್ರಿಯನ್ ರಾಜಕನ್ಯೆ ಫ಼್ರಾನ್ಸ ದೇಶದ ಸೊಸೆಯಾಗಿ ಪ್ಯಾರಿಸ್‌ನ ಹದ್ದು ದಾಟಿ ಒಳಬಂದಿದ್ದಳು. ಆದರೆ ಈ ಮದುವೆಗೆ ನನ್ನ ಒಪ್ಪಿಗೆಯಿತ್ತೆ? ಅಂತರ್‌ರಾಷ್ಟ್ರೀಯ ರಾಜಕೀಯ ಮೈದಾನದಲ್ಲಿ ಎ‍ರಡು ರಾಜಕೀಯ ಮನೆತನಗಳು ಆಡುತ್ತಿದ್ದ ಹೊಲಸು ರಾಜಕೀಯ ಆಟದಲ್ಲಿ ನಾನೊಂದು ಸೂತ್ರದ ಗೊಂಬೆಯಾದೆ. ದುರ್ದೈವದಿಂದ ನನ್ನ ಕತ್ತಿನಲ್ಲಿ ತೂಗುಬಿಟ್ಟಿದ್ದ ಸೂತ್ರ ನನ್ನ ತಾಯಿಯ ಕೈಯಲ್ಲಿತ್ತು.

‘ಅಮ್ಮ, ಯಾವುದು ಈ ಫ಼್ರಾನ್ಸ ದೇಶ? ಅಲ್ಲಿಯ ಯಾವುದೋ ಅಪರಿಚಿತನ ಜೊತೆ ಮದುವೆಯಾಗುವುದು ನನಗಿಷ್ಟವಿಲ್ಲ, ನಿನಗೆ ಗೊತ್ತಲ್ಲ ಅವನು, ನನ್ನೊಡನೆ ಆಟ ಆದಲಿಕ್ಕೆ ಬರುವವನು, ಒಳ್ಳೆಯ ಹಾಡು ಹೇಳುವವನು, ಬೀಥೋಪೇನ್ ಕೂಡ ನುಡಿಸುತ್ತಾನಲ್ಲ’ ಎಂದು ಹೇಳುತ್ತಿದ್ದಂತೆ ಅಮ್ಮ ನನ್ನನ್ನು ತಡೆದು,

‘ಆ ಭಿಕಾರಿ ಸಂಗೀತಕಾರನ ಜೊತೆ ಮದುವೆಯಾಗಿ ಬಾಳನ್ನು ಹಾಳು ಮಾಡ್ಕೋಬೇಕು ಅಂದುಕೊಂಡಿದ್ದೀಯಾ? ನಾನು ಮಾಡುವುದು ನಿನ್ನ ಒಳ್ಳೆಯದಕ್ಕಾಗಿಯೆ ನೆನಪಿಟ್ಟುಕೋ’ ಅಂದು ನನ್ನ ಬಾಯಿ ಮುಚ್ಚಿಸಿದ್ದರು.

ಈ ಮದುವೆಯಿಂದ ಯಾರಿಗೆ ಒಳ್ಳೆಯದಾಯಿತು? ಅನ್ನುವುದು ಆ ದೇವರೇ ಬಲ್ಲ. ನನ್ನ ಜೀವನದ ಮೊದಲು ಹದಿನಾಲ್ಕು ವರ್ಷ ನಾನು ಅಮ್ಮನನ್ನು ಅವಲಂಬಿಸಿದ್ದೆ. ಅವಳ ವ್ಯಕ್ತಿತ್ವದಲ್ಲಿ ಮಮತೆಗಿಂತ ಭೀತಿಯನ್ನೇ ಹೆಚ್ಚು ಕಂಡೆ. ಆಸ್ಟ್ರೀಯಾದ ರಾಜ್ಯವನಾಳುವ, ಅನೇಕ ಋತುಮಾನಗಳನ್ನು ಕಂಡಿರುವ ಒಬ್ಬ ಮುತ್ಸದ್ದಿ ಮಹಿಳೆ ತಪ್ಪು ಮಾಡುವಳೆ? ಅಂದುಕೊಂಡಿದ್ದೇ ತಪ್ಪಾಯಿತು, ಆಕೆ ತಪ್ಪಿದ್ದಳು ಪರಂಪರಾಗತವಾಗಿ ವೈರತ್ವವನ್ನು ಸಾಧಿಸಿಕೊಂಡು ಬಂದಿದ್ದ ಫ಼್ರಾನ್ಸ್‍ಗೆ ತನ್ನ ಮಗಳನ್ನು ಕೊಟ್ಟು ಅಲ್ಲಿ ತಾನು ಅತಿಕ್ರಮಣ ಮಾಡಬಹುದು ಎಂದಾಕೆ ಅಂದುಕೊಂಡಿದ್ದೇ ತಪ್ಪಾಯಿತು. ರಾಜಕೀವೆಂಬ ಪಗಡೆಯಾಟದಲ್ಲಿ ಆಕೆಗೆ ಬೇಕಾದ ದಾಳಗಳು ಬೀಳದೆ ಆಕೆ ಸೋತಳು. ಆಕೆಯಲ್ಲಿ ಧೋರಣೆಯಿತ್ತೇ ಹೊರತು ಮಮತೆಯಿರಲಿಲ್ಲ. ಆಕೆಗೆ ತನ್ನ ಸಿಂಹಾಸನದ ಚಿಂತೆಯಿತ್ತೇ ಹೊರತು ಮಗಳದ್ದಲ್ಲ. ರಾಜ್ಯದ ಚಿಂತೆಯಿತ್ತೇ ವಿನಹ ಮಗಳ ಅಭ್ಯುದಯದ ಚಿಂತೆಯಿರಲಿಲ್ಲ.

೨ನೆಯ ನವಂಬರ್ ೧೭೫೫ ರ ಆಲ್ ಸೋಲ್ಸ ಡೆ ಯ ಪವಿತ್ರ ದಿನದಂದು ವ್ಹಿಯೆನ್ನಾದಲ್ಲಿ ನಾನು ಜನಿಸಿದೆ. ತಾಯಿಯ ಹಾಲನ್ನಷ್ಟೆಯಲ್ಲ ಆಕೆ ಕೊಟ್ಟಿದ್ದನ್ನೆಲ್ಲವನ್ನೂ ವಿಶ್ವಾಸದಿಂದ ಸ್ವೀಕರಿಸಿದೆ. ನಾನು ನನ್ನ ತಾಯಿಯ ಹಾಗೆ ಬುದ್ಧಿವಂತಳಲ್ಲ, ಚಾಣಾಕ್ಷಳಂತೂ ಅಲ್ಲವೆ ಅಲ್ಲ. ಶಿಕ್ಷಣ ಹಾಗೂ ರಾಜಕೀಯದ ಬಗ್ಗೆ ನನಗೆ ಹೇಸಿಗೆಯಿತ್ತು. ಬಂಗಾರದ ಇಟ್ಟಿಗೆಗಳಿಗಿಂತ ನಿರ್ಮಲ, ಶುದ್ಧ ನೀಲಾಕಾಶವೇ ನನಗೆ ಪ್ರೀಯವಾಗಿತ್ತು. ಗಣಿತಕ್ಕಿಂತ ಸಂಗೀತದ ಜೊತೆ ನನಗೆ ಹತ್ತಿರದ ಸಂಭಂದ. ನನ್ನ ಕಿವಿಯಲ್ಲಿ, ಮನಸ್ಸಿನಲ್ಲಿ ಯಾವಾಗಲೂ ಮೋಝಾರ್ಥನ ಹಾಡು ಗುಂಯಗುಡುತ್ತಿರುತ್ತಿತ್ತು. ಶೋನ್ ಭ್ರೂನ್‌ನ ಅರಮನೆಯ ಗೋಡೆಗಳು ನಮ್ಮ ಯುಗಳ ಗೀತೆಗಳಿಗೆ ಸಾಕ್ಷಿಯಾಗಿವೆ. ಒಂದು ದಿನ ಮೋಝಾರ್ಥ ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡು ಮುತ್ತಿಡುತ್ತ,

‘ನೋಡುತ್ತಿರು, ಒಂದು ದಿನ ನಾನು ಜಗತ್ತಿನ ಸರ್ವೋತ್ಕೃಷ್ಟ ಸಂಗೀತಗಾರನಾಗಿ ನಿನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತೇನೆ’ ಅಂದಿದ್ದ.

ಅವನು ತನ್ನ ಒದ್ದೆ ತುಟಿಗಳಿಂದ ಅಚ್ಚೊತ್ತಿದ್ದ ಮುತ್ತನ್ನು ನಾನಿನ್ನೂ ಜೋಪಾನವಾಗಿಟ್ಟಿದ್ದೇನೆ. ನಾನು ತುಂಬ ಮನಸ್ಸಿಟ್ಟು ಸಂಗೀತ ಕಲಿಯುತ್ತಿದ್ದೆ, ನನಗದು ಇಷ್ಟವಾಗುತ್ತಿತ್ತು, ಮೋಝಾರ್ಥ ಇಷ್ಟವಾಗುತ್ತಿದ್ದ, ಆತನ ಒದ್ದೆ ಚುಂಬನಗಳು ಇಷ್ಟವಾಗುತ್ತಿದ್ದವು.

ಆದರೆ ಒಂದು ಕೆಟ್ಟ ಘಳಿಗೆಯಲ್ಲಿ ಫ಼್ರಾನ್ಸಿನ ಸತ್ತಾಧೀಶರು ನನ್ನನ್ನು ನೋಡಿ ಅವರ ಹದಿನೈದು ವರ್ಷದ ಮೊಮ್ಮಗ ಲೂಯಿಗಾಗಿ ನನ್ನ ಕೈ ಬೇಡಿದರು. ಅಮ್ಮನೇ ಮುಂದಾಳತ್ವ ವಹಿಸಿ ಈ ಸಂಭಂದ ಕುದುರಿಸಿರಬೇಕು ಅನ್ನುವ ಕೆಟ್ಟ ಅನುಮಾನ ನನಗೆ. ಸಂಪೂರ್ಣ ಜಗತ್ತನ್ನೇ ತನ್ನ ಕಿರುಬೆರಳ ಮೇಲೆ ಕುಣಿಸುತ್ತಿದ್ದ ಅಮ್ಮನಿಗೆ ಲೂಯಿ ಮೂರ್ಖ ಹಾಗೂ ಅಸಂಜಸ ಅನ್ನುವುದು ಗೊತ್ತಿರಲಿಲ್ಲವೆ? ಗೊತ್ತಿರಲಿಕ್ಕೂ ಸಾಕು, ಏಕೆಂದರೆ ರಾಜನೀತಿ ಕೇವಲ ವ್ಯವಹಾರವನ್ನ ಮಾತ್ರ ಪರಿಗಣಿಸುತ್ತದೆ, ಸಂಭಂದವನ್ನಲ್ಲ. ಅದರದೇ ಅಂಗವಾಗಿ ನನ್ನ ಟ್ರೇನಿಂಗ್ ಪ್ರಾಂರಂಭವಾಯಿತು. ಫ಼್ರಾನ್ಸಿನ ರಾಜಮನೆತನದವರ ಜೊತೆ ಹೊಂದಿಕೊಳ್ಳಬೇಕಾದ ರೀತಿ, ಅಲ್ಲಿಯ ರೀತಿ-ನೀತಿ, ಸಂಸ್ಕೃತಿ, ಭೂಗೋಳ, ಉಚ್ಚರಿಸಲೂ ಕಠಿಣವಾದಂತಹ ಫ಼್ರೆಂಚ್ ಭಾಷೆ. ಒಂದೇ ಎರಡೆ. ಮದುವೆಯ ಎರಡು ತಿಂಗಳು ಮುಂಚಿನಿಂದಲೇ ಅಮ್ಮ ನನ್ನ ಕೋಣೆಯಲ್ಲಿ ನನ್ನೊಡನೆ ಮಲಗಲಾರಂಭಿಸಿದಳು. ನನ್ನ ಕಣ್ಣು ರೆಪ್ಪೆಗಳು ಮುಚ್ಚಲು ತವಕಿಸುತ್ತಿದ್ದ ಕಾಲದಲ್ಲಿ ನಾನು ಅಮ್ಮನಿಂದ ಬೌದ್ಧಿಕ ಪಾಠ ಕಲಿಯಬೇಕಾಗುತ್ತಿತ್ತು. ಸ್ತ್ರೀ ಪುರುಷರ ಸಂಭಂದದ ಬಗ್ಗೆ ಅಮ್ಮನಿಂದಲೇ ವಿಸ್ತಾರವಾಗಿ ಗೊತ್ತಾದದ್ದು. ಎಲ್ಲವೂ ಯೋಜನಾಬದ್ಧವಾಗಿ ನಡೆಯುತ್ತಿದ್ದರೂ ಅಮ್ಮ ಸದಾಕಾಲ ಯಾವುದೋ ಚಿಂತೆಯಲ್ಲಿರುವಂತೆ ತೋರುತ್ತಿತ್ತು. ಯಾವಾಗಲೋ ಮಧ್ಯರಾತ್ರಿ ನನ್ನ ಕೂದಲುಗಳಲ್ಲಿ ಆಡುತ್ತಿದ್ದ ಅಮ್ಮನ ಸ್ಪರ್ಷದಿಂದ ಎಚ್ಚರವಾಗುತ್ತಿತ್ತು. ತನ್ನ ಅಸಂಜಸ, ಸಾಮಾನ್ಯ ಬುದ್ಧಿಯ ಮಗಳನ್ನು ರಾಜಮನೆತನದ ಚದುರಂಗಪಟದ ಪೇದೆಯಾಗಿ ಬಳಸುತ್ತಿದ್ದೇನೆ ಅನ್ನುವ ಅರಿವು ಅವಳನ್ನು ಕಾಡುತ್ತಿತ್ತೆ?

ಮದುವೆಯ ಮೊದಲ ರಾತ್ರಿ ನಾವು ಬಹಳ ದಣಿದಿದ್ದರಿಂದ ನಿದ್ರಾದೇವಿ ತಟ್ಟನೆ ಒಲಿದಿದ್ದಳು. ಬಹುಶಃ ಫ಼್ರಾನ್ಸನ ನೆಲದ ಮೇಲೆ ಅದೇ ನನ್ನ ಮೊದಲ ಹಾಗೂ ಕೊನೆಯ ಶಾಂತ ನಿದ್ರೆ. ಆದರೆ ಎರಡನೆಯ ರಾತ್ರಿಯೂ ಏನೂ ನಡೆಯಲಿಲ್ಲ, ಮೂರನೆಯ, ನಾಲ್ಕನೆಯ ರಾತ್ರಿಯೂ ಇಲ್ಲ. ಹಾಗೂ ಮುಂದಿನ ಸತತ ಏಳು ವರ್ಷಗಳವರೆಗೆ ಏನೂ ನಡೆಯಲಿಲ್ಲ.

ನನ್ನ ಪತಿ ಅನಿಸಿಕೊಂಡ ಲೂಯಿ, ಫ಼್ರಾನ್ಸನ ಭಾವಿ ರಾಜ, ಸುಖ ಕೊಡುವುದಕ್ಕೂ ತೆಗೆದುಕೊಳ್ಳುವುದಕ್ಕೂ ಅಸಮರ್ಥನಾಗಿದ್ದ. ಮೊದಮೊದಲು ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದವ ವಿಫ಼ಲನಾದಾಗ ಸುಸ್ತಾಗಿ ನಿದ್ದೆಹೋಗುತ್ತಿದ್ದ. ಘಟಿಸದೇ ಹೋದ ಘಟನೆಗಾಗಿ ಸಿಟ್ಟು, ಪಶ್ಚಾತ್ತಾಪ, ನಾಚಿಕೆ ಯಾವುದೂ ಅವನಲ್ಲಿರಲಿಲ್ಲ. ಚಿಕ್ಕ ಮಗುವೊಂದು ಗಟ್ಟಿ ಮುಚ್ಚಳ ಹಾಕಿದ ಡಬ್ಬಿಯೊಡನೆ ಆಟವಾಡಿ ಕಡೆಗೆ ಮುಚ್ಚಳ ತೆರೆಯಲು ಅಸಮರ್ಥನಾಗಿ ಬೇಸತ್ತು ಬಿಸಾಡಿಬಿಡುವ ಹಾಗೆ ಅವನ ವರ್ತನೆ. ಆದರೆ ಲೂಯಿ ಚಿಕ್ಕ ಮಗುವೂ ಅಲ್ಲ ಹಾಗೂ ನಾನು ಗಟ್ಟಿ ಮುಚ್ಚಳದ ಡಬ್ಬಿಯೂ ಅಲ್ಲ. ಸುಂದರ ಶರೀರದ, ಕನಸುಗಣ್ಣಿನ ಮೃದು ಮನಸ್ಸಿನ ಹದಿನಾಲ್ಕು ವರ್ಷದ ಬಾಲೆ ನಾನು. ಮರುದಿನ ಡೈರಿ ಬರೆಯುವಾಗ ಲೂಯಿ ಭಾವನಾರಹಿತನಾಗಿ ಖಾಲಿ ಪುಟದ ಮೇಲೆ ‘ಅಸಫ಼ಲತೆ’ ಎಂದಷ್ಟೆ ಬರೆಯುತ್ತಿದ್ದ, ಅವನ ಪುಟ ಅದೊಂದೇ ಶಬ್ದದಿಂದ ತುಂಬಿಬಿಡುತ್ತಿತ್ತು. ಆದರೆ ಆ ಶಬ್ದ ಮಾತ್ರ ನನ್ನ ಜೀವನಕ್ಕೆ ಬಂಜೆತನದ ಲೇಬಲ್ ಅಂಟಿಸಿತು. ಮದುವೆಯಾಗಿ ತಿಂಗಳುಗಳು ಕಳೆದರೂ ಮಕ್ಕಳಾಗುವ ಸೂಚನೆ ಕಾಣದ್ದರಿಂದ ಎಲ್ಲರೂ ಅಸ್ವಸ್ಥರಾಗಿದ್ದರು. ನನ್ನ ಲೈಂಗಿಕ ಆಚರಣೆ ಹೇಗಿರಬೇಕು? ಲೂಯಿಯನ್ನು ಮೋಹಿಸಲು ನಾನೇನು ಮಾಡಬೇಕು? ಅನ್ನುವ ಮೌಲಿಕ ಸೂಚನೆಗಳ ಪತ್ರಗಳು ಅಮ್ಮನಿಂದ ಬರಲಾರಂಭಿಸಿದ್ದವು. ಇಲ್ಲಿ ಅತ್ತೆ ಮನೆಯ ಸ್ತ್ರೀಯರು ಗೊತ್ತಿರುವ ವ್ರತಗಳನ್ನೆಲ್ಲ ನನ್ನ ಮೇಲೆ ಹೇರುತ್ತಿದ್ದರು. ಇಷ್ಟೆಲ್ಲ ನಡೆಯುವಾಗ ನನ್ನಲ್ಲಿ ಯಾವ ದೋಷವೂ ಇರಲಾರದು ಅನ್ನುವ ವಿಚಾರ ಯಾರ ಮನಸ್ಸಿನಲ್ಲೂ ಬರಲಿಲ್ಲ. ಇಲ್ಲಿ ಮೊದಲೇ ಬಾಯಿಗೆ ಬೀಗ ಜಡಿದಂತಿದ್ದ ಲೂಯಿ ಹೆಚ್ಚು ಮೌನವಾಗುತ್ತ ಹೋದ. ಹುಟ್ಟಿನಿಂದಲೇಯಿದ್ದ ಆಲಸ್ಯ ಈಗ ಅವನ ಮೇಲೆ ಆಧಿಪತ್ಯ ನಡೆಸುತ್ತಿತ್ತು. ಸಾರ್ವಜನಿಕ ಸ್ಥಳಗಳಿಗೆ ಭೇಟಿಕೊಡುವುದನ್ನು ನಿಲ್ಲಿಸಿದ ಆತ ದಿನದ ಹೆಚ್ಚು ಸಮಯವನ್ನು ಬೇಟೆ ವ್ಯಾಯಾಮ ಹಾಗೂ ಆಡುವುದರಲ್ಲಿ ಕಳೆಯತೊಡಗಿದ. ಇದೆಲ್ಲದರಿಂದ ತನ್ನ ಪೌರುಷ ಮರಳಿ ಬರುತ್ತದೆ ಅಂದುಕೊಂಡನೋ ಏನೊ. ಆದರೆ ಲೂಯಿ ಒಬ್ಬ ಸಂಪೂರ್ಣ ಪುರುಷನಾಗಿದ್ದ ಅನ್ನುವುದನ್ನು ಇಷ್ಟು ತಿಂಗಳ ಸಾಮಿಪ್ಯದಿಂದ ನಾನು ಬಲ್ಲವಳಾಗಿದ್ದೆ. ಹೀಗಿದ್ದರೂ ಕಠಿಣ ಪ್ರಸಂಗಕ್ಕೆ ಪರಿಹಾರ? ಕಡೆಗೆ ನಾನೇ ಮುಂದುವರೆದು ರಾಜನಿಗೆ ಸುಂಥಾ ಮಾಡಿಸುವುದು ಅನ್ನುವ ಸೂಚನೆ ಕೊಟ್ಟು ಲೂಯಿಯ ಮನ್ನಣೆಯನ್ನೂ ಪಡೆದೆ, ಆದರೆ ಈ ವಾರ್ತೆ ಕಾಡ್ಗಿಚ್ಚಿನಂತೆ ಹರಡಿ ಜನರ ಕಣ್ಣರಳಿಸಿತು. ಹೆಣ್ಣಾಗಿ ಹುಟ್ಟಿ ಇಂತಹ ಮಾತನ್ನು ಇಷ್ಟು ಸುಲಭವಾಗಿ ಹೇಗೆ ಹೇಳಬಲ್ಲಳು? ಅನ್ನುವುದೇ ಅವರ ಪ್ರಶ್ನೆ. ಇದು ನನ್ನ ಜೀವನದ ಪ್ರಶ್ನೆ, ಅಲ್ಲದೆ ಹೆಂಡತಿಯಾಗಿ ಗಂಡನನ್ನು ನಾನಲ್ಲದೆ ಇನ್ಯಾರು ಹತ್ತಿರದಿಂದ ಬಲ್ಲವರಾಗುತ್ತಾರೆ? ಇದನ್ನೆಲ್ಲ ಅರ್ಥಮಾಡಿಕೊಳ್ಳದ ಜನ ನನ್ನನ್ನು ‘ಮೇನಿಯಾಕ್’ ಅಂದರು. ಎಂತಹ ವಿರೋಧಾಭಾಸ! ಭವಿಷ್ಯದಲ್ಲಿ ಹಕ್ಕು ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಫ಼್ರಾನ್ಸಿನ ಜನತೆ ಹೆಂಡತಿಯಾಗಿ ನಾನು ಪಡೆಯಬೇಕಿದ್ದ ಹಕ್ಕಿಗೆ ‘ಮೇನಿಯಾಕ್’ ಅಂದರು.

(ಮುಂದುವರೆಯುವುದು).